ಬೆಂಗಳೂರು ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ನಾಡಿನ ಹಿರಿಯ ಸಾಹಿತಿ , ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಅನುಯಾಯಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 119ನೇ ಜನ್ಮದಿನ ನಿಮಿತ್ತ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಗೊರೂರು ವ್ಯಕ್ತಿ ವಿಚಾರ ಸಂವಾದವನ್ನು ಆಯೋಜಿಸಲಾಗಿತ್ತು.
ಕೆನಡಾದಲ್ಲಿ ನೆಲೆಸಿರುವ ಗೊರೂರುರವರ ಪುತ್ರಿ ವಸಂತಿ ಮೂರ್ತಿ ಸಂವಾದದಲ್ಲಿ ಮಾತನಾಡುತ್ತ ತಮ್ಮ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಿಗರ ಜನಮಾನಸದಲ್ಲಿ ಇಂದಿಗೂ ಇರಲು ಅವರ ಸಾಹಿತ್ಯ ಕೃತಿಗಳೇ ಸಾಕ್ಷಿ ಎಂದರು.
ಅವರ ಸಾಮಾಜಿಕ ಬದ್ದತೆ, ದೇಶ ಪ್ರೇಮ, ಸ್ಥಿರಚಿತ್ತತ್ತೆ ಆದರ್ಶ ವ್ಯಕ್ತಿಯನ್ನಾಗಿ ರೂಪಿಸಿತು. ಗಾಂಧೀಜಿ ಅವರ ಆತ್ಮ ಕಥೆಯ ಅನುವಾದ ಇಂದಿಗೂ ಬೇಡಿಕೆಯಲ್ಲಿದೆ, ಚಲನಚಿತ್ರವಾಗಿ ಹೇಮಾವತಿ ಮತ್ತು ಬೂತಯ್ಯನ ಮಗ ಅಯ್ಯು ಅಪಾರ ಜನಮನ್ನಣೆಗಳಿಸಿದೆ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲೇಖಕರನ್ನು ಪ್ರೋತ್ಸಾಹಿಸಲು ಗೊರೂರು ಪ್ರತಿಷ್ಠಾನವನ್ನು ಸದ್ಯದಲ್ಲಿಯೇ ಹೊಸ ಸ್ವರೂಪದಲ್ಲಿ ಪ್ರಾರಂಭಿಸಿ ಅವರ ಹುಟ್ಟೂರಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಗಾಂಧಿ ಭವನ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಹಿರಿಯ ಲೇಖಕಿ ಡಾ.ವಸುಂಧರ ಭೂಪತಿ, ಸರ್ವೋದಯ ಮಂಡಲದ ಡಾ.ಎಚ್.ಎಸ್.ಸುರೇಶ್ , ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಡಾ. ವಿ.ಪ್ರಶಾಂತ್, ಬಾಲಮೋಹನ ವಿದ್ಯಾ ಸಂಸ್ಥೆಯ ಡಾ.ಸತ್ಯಪ್ರಕಾಶ್ , ಸಾಮಾಜಿಕ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ, ಪ್ರಾಧ್ಯಾಪಕ ಪ್ರೋ.ಪೋಲಿಸ್ ಪಾಟೀಲ್ , ಚಂದ್ರಪ್ಪ , ಶಿಕ್ಷಕಿ ಎಸ್.ಎಂ ಶ್ಯಾಮಲಾ ಮೊದಲಾದವರು ಭಾಗವಹಿಸಿದ್ದರು.