ಸಿಂದಗಿ: ಭಾರತ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವ-ಸಹಾಯ ಗುಂಪುಗಳಿಗೆ ಕಿರು ಉದ್ದಿಮೆ ಸ್ಥಾಪಿಸಲು ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪುಗಳ ಪುನಶ್ಚೇತನಕ್ಕೆ ಸರಕಾರ ಅಮೃತ ಯೋಜನೆಯನ್ನು ಜಾರಿಗೆ ತಂದು ತಾಲೂಕಿನ 23 ಸ್ವ ಸಹಾಯ ಗುಂಪುಗಳಿಗೆ ತಲಾ 1ಲಕ್ಷ ರೂ.ಯಂತೆ ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು ಸ್ತ್ರಿ ಶಕ್ತಿ ಸಂಘಗಳು ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಶಾಸಕ ರಮೇಶ ಭೂಸನೂರ ಕರೆ ನೀಡಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ, ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಸಿಂದಗಿ ಸಹಯೋಗದಲ್ಲಿ ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಬೀಜಧನ ಚೆಕ್ ವಿತರಣೆ, ಭೇಟಿ ಬಚಾವೋ ಭೇಟಿ ಪಢಾವೋ, ಪೋಷಣ್ ಅಭಿಯಾನ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಿಸಿ ಮಾತನಾಡಿ, ಕೋವಿಡ್ ನಂತರ ಆರ್ಥಿಕ ಸಂಪನ್ಮೂಲಗಳಿಲ್ಲದೇ ಕಳೆಗುಂದಿರುವ ಸ್ವ-ಸಹಾಯ ಗುಂಪುಗಳು ಹಲವು ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಸ್ವಸಹಾಯ ಗುಂಪುಗಳು ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದವು. ಆದರೆ, ಕೋವಿಡ್ ಬಾಧಿಸಿದ ನಂತರ ಆರ್ಥಿಕ ಹಿನ್ನಡೆಯಿಂದ ಮಹಿಳಾ ಸ್ವಸಹಾಯ ಗುಂಪುಗಳು ಸೊರಗಿದ್ದವು ಮತ್ತೆ ಉತ್ತೇಜನ ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿಜಯಪುರ ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರೂಪಣಾಧಿಕಾರಿ ಗೀತಾ ಗುತ್ತರಗಿಮಠ ಮಾತನಾಡಿ, ಈ ಮೊದಲು ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಯಡಿ ನೀಡುವ ಬದಲು ಸುಕನ್ಯಾ ಯೋಜನೆಯಂದು ಮಾರ್ಪಾಡು ಮಾಡಲಾಗಿದೆ. ಸ್ವ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡುತ್ತಿವೆ. ಅಭಿವೃದ್ಧಿಯ ಜೊತೆಗೆ ನಿರುದ್ಯೋಗವೂ ದೊಡ್ಡ ಸವಾಲಾಗಿದೆ. ಎಲ್ಲರಿಗೂ ಸರಕಾರ ಕೆಲಸ ನೀಡಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯದ ಜೊತೆಗೆ ಸ್ತ್ರೀಶಕ್ತಿ ಗುಂಪುಗಳಿಗೂ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಲು 3 ದಿನಗಳ ತರಬೇತಿ ಕೂಡಾ ನೀಡಿ ಸರಕಾರ ಅನೇಕ ಯೋಜನೆಯಡಿ ಸೌಲಭ್ಯ ಈಗ ಒಂದು ಲಕ್ಷ ರೂ.ಗಳ ಚೆಕ್ ನೀಡುತ್ತಿದೆ. ಇದರಲ್ಲಿಯೇ ಇನ್ನಷ್ಟು ಸ್ವ ಉದ್ಯೋಗ ಸೃಷ್ಟಿಯಾಗಬೇಕು ಎಂದರು.
ಶ್ವೇತಾ ಜೋಶಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ವಿಷಯದ ಕುರಿತು ಮಾತನಾಡಿ, ಹೆಣು ತಾಯಿಯಾಗಿ, ತಂಗಿಯಾಗಿ,ಹೆಂಡತಿಯಾಗಿ ಬೇಕು ಅದರೆ ಮಗಳಾಗಿ ಏಕೆ ಬೇಡ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಲಿಂಗನುಪಾತ ತಡೆಗಟ್ಟಲು ಭ್ರೂಣ ಹತ್ಯೆಯನ್ನು ನಿಷೇಧಿಸಿತು. ಅಲ್ಲಿಂದ ಹೆಣ್ಣಿನ ಸಂಖ್ಯೆ ಹೆಚ್ಚುತ್ತಿದೆ ಅಲ್ಲದೆ ಹೆಣ್ಣು ಎಲ್ಲ ರಂಗದಲ್ಲಿ ಸರಿಸಾಟಿ ನಿಂತಿದ್ದಾಳೆ. ಕಾರಣ ನಾವೆಲ್ಲರು ಹೆಣ್ಣು ಮಗುವಿನ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಮಾಡಿದ ವಿದ್ಯಾರ್ಥಿನಿ ಲಕ್ಷ್ಮೀ ದೊಡಮನಿ, ರಾಣಿ ಚೆನ್ನಮ್ಮ ಪ್ರಶಸ್ತಿ ಪುರಷ್ಕೃತೆ ಮಂಗಲಾ ಗುಡಿ ಹಾಗೂ ಉತ್ತಮ ಪಿಡಿಓ ಮಹೇಶ ಚಿಂಚೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಓ ಬಾಬು ರಾಠೋಡ, ಪ್ರಿಯದರ್ಶಿನಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಂಗಳಾ ಗುಡಿ ವೇದಿಕೆ ಮೇಲಿದ್ದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕಿನ ವಿವಿಧ ಭಾಗದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿರಿಯ ಮೇಲ್ವಿಚಾರಕಿ ಎಸ್.ಎಸ್ ಜಾನಕಿ ಸ್ವಾಗತಿಸಿದರು. ಮೇಲ್ವಿಚಾರಕಿ ಪೂರ್ಣಿಮಾ ಬಿ ನಿರೂಪಿಸಿದರು ವಿಜಯಕುಮಾರ ವಂದಿಸಿದರು.