ರಾಜ್ಯ ಕಾಂಗ್ರೆಸ್ ಸರ್ಕಾರವು ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂಬ ಒಂದೇ ಉದ್ದೇಶದಿಂದ ಚುನಾವಣೆ ಸಮಯಕ್ಕೆ ಘೋಷಣೆ ಮಾಡಿ, ಈಗ ಅರೆಬರೆಯಾಗಿ ಜಾರಿಗೆ ತರಲಾಗುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳು ನಮ್ಮಂಥ ಜನಸಾಮಾನ್ಯರಿಗೆ ಉರುಳಾಗಿ ಪರಿಣಮಿಸುತ್ತಿರುವುದು ಯಾರಿಗೂ ಕಾಣಿಸುತ್ತಿಲ್ಲವೆ ಅಥವಾ ಅವುಗಳನ್ನು ಗಮನಿಸಲಾರದಷ್ಟು ಜನತೆ ಕುರುಡರಾಗಿ ಹೋದರೆ ಅವರ ಎನ್ನಿಸಲಾರಂಭಿಸಿದೆ.
ಆರಂಭದಲ್ಲಿ ಅತ್ಯಂತ ಗೊಂದಲಮಯವಾಗಿ ಹೇರಲ್ಪಟ್ಟ ಉಚಿತ ವಿದ್ಯುತ್ ಘೋಷಣೆ ವಿದ್ಯುತ್ ದರ ಹೆಚ್ಚಳಕ್ಕೆ ಕಾರಣವಾಗಿ ಮತ್ತಷ್ಟು ಶಾಕ್ ಕೊಟ್ಟಿತು. ಈ ಬಗ್ಗೆ ಜನರು ಬಾಯಿ ಬಡಿದುಕೊಂಡರಾದರೂ ದಪ್ಪ ಚರ್ಮದ ಆಡಳಿತಾರೂಢ ಸರ್ಕಾರಕ್ಕೆ ತಟ್ಟಲೇ ಇಲ್ಲ. ಬಹಳ ದಿನಗಳಿಂದ ವಿದ್ಯುತ್ ದರ ಹೆಚ್ಚಳ ಮಾಡಿಲ್ಲವೆಂಬ ಸಬೂಬು ನೀಡಲಾಯಿತು ಯಥಾ ಪ್ರಕಾರ ಜನಮರುಳೋ ಎಂಬಂತೆ ರಾಜ್ಯದ ಜನ ಗೊಣಗುತ್ತ ಹೆಚ್ಚಿನ ದರವನ್ನು ನೀಡುತ್ತ ಹೊರಟಿದ್ದಾರೆ.
ಈಗ ಇನ್ನೊಂದು ಅಧ್ವಾನವನ್ನು ಸರ್ಕಾರ ಮಾಡಿದೆ ಅದನ್ನು ಯಾರೂ ಗಮನಿಸಿದಂತೆ ಕಾಣುತ್ತಿಲ್ಲ. ವಿದ್ಯುತ್ ಬಿಲ್ ನಲ್ಲಿ ಪಿಂಚಣಿ ಮತ್ತು ಗ್ರ್ಯಾಚ್ಯುಟಿ ಸರ್ಚಾರ್ಜ್ (ಸರ್ಕಾರದ ಭಾಗ) ಎಂಬ ಒಂದು ಅಂಶವನ್ನು ಸೇರಿಸಲಾಗಿದ್ದು ಯೂನಿಟ್ ಗೆ ೦.೩೬ ಪೈಸೆ ಹೆಚ್ಚಳ ಮಾಡಲಾಗಿದೆ. ಇದು ಏನು ? ಈ ಮೊದಲು ವಾಣಿಜ್ಯಿಕ ಮೀಟರ್ ಗಳಿಗೆ ನಿಗದಿತ ಶುಲ್ಕ ೨೦೦ ಇದ್ದದ್ದನ್ನು ಸದ್ದಿಲ್ಲದೆ ೨೧೦ ಮಾಡಲಾಗಿದೆ. ಈಗ ಎಇಎಚ್ ಗಳ ನಿಗದಿತ ಶುಲ್ಕ ರೂ. ೧೪೫ ಇದ್ದರೂ ಅದನ್ನು ಎರಡು ಯುನಿಟ್ ಆಕಾರ ಮಾಡಿ ರೂ. ೨೯೦ ಬಿಲ್ ಮಾಡಿದ್ದಾರೆ.
ಇದೊಂದು ಉದಾಹರಣೆಯೇ ರಾಜ್ಯ ಸರ್ಕಾರದ ಲೂಟಿ ಮನೋಭಾವವನ್ನು ತೋರಿಸುತ್ತದೆ. ಪ್ರಸಕ್ತ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತಲೇ ಇರಲಿಲ್ಲ. ಅದು ಗೊತ್ತಾಗಿಯೇ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದು ಈಗ ಈ ರೀತಿ ಜನರ ರಕ್ತ ಹೀರುವುದು ಎಷ್ಟು ಸರಿ ?
ರಾಜ್ಯದಲ್ಲಿ ಎಲ್ಲಾ ದರಗಳೂ ಹೆಚ್ಚಾಗಿವೆ. ಉಚಿತ ಬಸ್ ಅಂದರು ಬಸ್ ದರ ಏರಿತು, ಖರೀದಿ ನೋಂದಣಿ ದರ ಸಿಕ್ಕಾಪಟ್ಟೆ ಏರಿತು, ವಿದ್ಯುತ್ ದರ ಸಿಕ್ಕಾಪಟ್ಟೆ ಏರಿತು, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಮತ್ತಷ್ಟು ಹೆಚ್ಚಳ, ಹಾಲಿನ ದರ ಹೆಚ್ಚಳ, ತೈಲ ಬೆಲೆ ( ರಾಜ್ಯದ ತೆರಿಗೆ ) ಹೆಚ್ಚಳ ಅಷ್ಟೇ ಯಾಕೆ ಕಸದ ಮೇಲೂ ತೆರಿಗೆ ಹಾಕಿ ಈ ರಾಜ್ಯ ಸರ್ಕಾರ ಲೂಟಿಗೆ ಇಳಿದಿದ್ದು ತೀರಾ ಖಂಡನೀಯ. ಈ ಸರ್ಕಾರ ಮುಂದೆ ಹಾಳಾಗಿ ಹೋಗಬಹುದು ಆದರೆ ಏರಿದ ದರಗಳು ಇಳಿಯಲು ಸಾಧ್ಯವೆ ? ಮುಂದೆ ಅಧಿಕಾರಕ್ಕೆ ಬಂದವರೂ ಇದೆ ರೀತಿ ಲೂಟಿಗೆ ಇಳಿಯುವುದಿಲ್ಲ ಎಂಬ ‘ಗ್ಯಾರಂಟಿ’ ಏನು ?
ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿವಳಿಕೆ ಇದ್ದವರು. ತಮ್ಮ ಪಕ್ಷದ ಜಾತ್ಯತೀತ (?) ತತ್ವದ ಮೇಲಷ್ಟೇ ರಾಜಕಾರಣ ಮಾಡದೇ ಎಲ್ಲಾ ಸಮಯದಾಯದವರ ಏಳಿಗೆಗಾಗಿ ರಾಜಕಾರಣ ಮಾಡಬೇಕು ಯಾಕೆಂದರೆ ಮಾತೆತ್ತಿದರೆ ಅಹಿಂದ ಉದ್ಧಾರ ( ಅವರು ಉದ್ಧಾರದ ಹೆಸರಿನಲ್ಲಿಯೇ ಹೆಚ್ಚು ಭ್ರಷ್ಟಾಚಾರ ಕೂಡ ವರದಿಯಾಗುತ್ತಿವೆ!) ಎನ್ನುವ ಅವರು ಮೇಲ್ವರ್ಗದವರಲ್ಲಿಯೂ ಬಡವರು, ನಿರ್ಗತಿಕರು ಇದ್ದಾರೆ, ದುಡಿದು ತಿನ್ನುವ ಜನರು ಇದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಕೇವಲ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುವುದರಲ್ಲಿ ಅರ್ಥವಿಲ್ಲ ಉಚಿತಗಳಿಂದ ಒಂದು ವರ್ಗ ಅಂದರೆ ಹೆಣ್ಣುಮಕ್ಕಳಿಗೆ ಉಪಯೋಗವಾಗಬಹುದು ಆದರೆ ಅದರಿಂದ ಮನೆಯ ಯಜಮಾನನಿಗೇ ಉರಳು ಬರುತ್ತಿದೆಯೆಂಬುದು ತಿಳಿಯಲಾರದಷ್ಟು ಹೆಣ್ಮಕ್ಕಳು ( ಹೆಚ್ಚಿನವರು) ಮುಗ್ದರಾಗಿರುತ್ತಾರೆ. ಇದು ಒಂದು ರೀತಿಯಲ್ಲಿ ಸರ್ಕಾರ ಪ್ರಾಯೋಜಿತ ಶೋಷಣೆಯೇ ಎಂದರೆ ತಪ್ಪಲ್ಲ.
ನನ್ನ ಈ ಪತ್ರ ಸರ್ಕಾರದ ದಪ್ಪ ಚರ್ಮಕ್ಕೆ ಎಷ್ಟು ತಗಲುತ್ತದೆಯೋ ಗೊತ್ತಿಲ್ಲ. ನ್ಯಾಯಾಂಗವಾದರೂ ಈ ವಿಷಯದಲ್ಲಿ ಸ್ವಯಂಪ್ರೇರಿತವಾಗಿ ತಲೆ ಹಾಕಬೇಕು. ನಮ್ಮನ್ನು ಮಾತ್ರ ಈ ಸರ್ಕಾರದಿಂದ ಆದಷ್ಟು ಬೇಗ ದೇವರೇ ಕಾಪಾಡಬೇಕು ಎಂದು ಬೇಡಿಕೊಳ್ಳುತ್ತೇನೆ.
ಉಮೇಶ ಬೆಳಕೂಡ
೯೪೪೮೮೬೩೩೦೯