Homeಸುದ್ದಿಗಳುಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳ; ಶಿಕ್ಷಕ ಆತ್ಮಹತ್ಯೆ

ಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳ; ಶಿಕ್ಷಕ ಆತ್ಮಹತ್ಯೆ

 

ತಹಶೀಲ್ದಾರ ಕಛೇರಿ ಎದುರು ಶವ ಇಟ್ಟು ಪ್ರತಿಭಟನೆ 

ಸಿಂದಗಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಿರುಕುಳದಿಂದ ತಾಲೂಕಿನ ಸಾಸಾಬಾಳ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ನಾಯಕಲ್ ಅವರು ರವಿವಾರ ಸಂಜೆ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಿಇಓ ಸೇರಿದಂತೆ 5 ಜನರ ಹೆಸರು ಬರೆದಿಟ್ಟು ನೇಣಿಗೆ ಶರಣಾಗಿದ್ದು ಇಂದು 5 ಜನರನ್ನು ಅಮಾನತ್ತಿನಟ್ಟು ತನಿಖೆ ನಡೆಸುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಕುಟುಂಬಸ್ಥರು ತಹಶೀಲ್ದಾರ ಕಛೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುನ್ನ ಸರಕಾರಿ ಆಸ್ಪತ್ರೆಯಿಂದ ತಹಶೀಲ್ದಾರ ಕಛೇರಿಯ ರಸ್ತೆಯುದ್ದಕ್ಕು ಶವವನ್ನು ಕೈಯಲ್ಲಿ ಹಿಡಿದು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಸಾಸಾಬಾಳ ಸರಕಾರಿ ಶಾಲೆಯ ಮುಖ್ಯಶಿಕ್ಷಕ ಬಸವರಾಜ ನಾಯಕಲ್ ಅವರು 5 ಜನರ ಹೆಸರನಲ್ಲಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವಾಗಲೂ ಖೇದಕರ ಸಂಗತಿ ಕಿರುಕುಳ ನೀಡಿದವರು ಎಂತಹ ಬಲಾಢ್ಯರಾಗಿರಲಿ ಯಾವುದೇ ಮುಲಾಜಿಲ್ಲದೆ ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಅಲ್ಲದೆ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.   

ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ತಾಲೂಕಿನ ಸಾಸಾಬಾಳ ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಬಸವರಾಜ ನಾಯಕಲ್ ಅವರಿಗೆ  ಬಿಇಓ ಎಚ್.ಎಂ.ಹರನಾಳ, ಜಿ.ಎನ್.ಪಾಟೀಲ, ಎಸ್.ಎಲ್.ಬಜಂತ್ರಿ, ಬಿ.ಎಂ.ತಳವಾರ ಸೇರಿದಂತೆ 5 ಜನರು ಅನೇಕ ಕಾರಣಗಳಿಂದ ಕಿರುಕುಳ ನೀಡಿ ದೊಡ್ಡ ಪ್ರಮಾಣ ಲಂಚದ ಆಮಿಷವಿಟ್ಟು ಟಾರ್ಚರ ನೀಡಿದ್ದಾರೆ ಎಂದು 5 ಜನರ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೂಡಲೇ 5 ಜನ ಆರೋಪಿಗಳನ್ನು ಬಂಧಿಸಿ ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲೆಯಾಧ್ಯಂತ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಇಂಡಿ ಡಿವೈಎಸ್‍ಪಿ ಚಂದ್ರಕಾಂತ ನಂದರಡ್ಡಿ ಮಾತನಾಡಿ, ಪ್ರಕರಣದಲ್ಲಿ ಬಾಗಿಯಾದ ಅರೋಪಿಗಳನ್ನು ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುತ್ತೆನೆ ಇಲ್ಲದಿದ್ದರೆ ನನ್ನ ಕಛೇರಿ ಎದುರು ಪ್ರತಿಭಟನೆ ನಡೆಸಬಹುದು ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ ಪ್ರತಿಭಟನೆಗೆ ಬೇಟಿ ನೀಡಿ, ಬಿಇಓ ಸೇರಿದಂತೆ 4 ಜನರನ್ನು ಅಮಾನತ್ತುಗೊಳಿಸಲಾಗಿದೆ. ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೃತ ಮುಖ್ಯಶಿಕ್ಷಕನ ಪತ್ನಿ ಮಹಾದೇವಿ ನಾಯಕಲ್, ಟಿಪ್ಪು ಸೇನೆಯ ಕಾರ್ಯದರ್ಶಿ ಡಾ. ದಸ್ತಗಿರ ಮುಲ್ಲಾ, ತಳವಾರ-ಪರಿವಾರ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಸಂತೋಷ ಪಾಟೀಲ ಡಂಬಳ, ಶ್ರೀಶೈಲ ಚಳ್ಳಗಿ, ಪರಸುರಾಮ ಕಾಂಬಳೆ, ಸಿದ್ದನಗೌಡ ಪಾಟೀಲ ಸಾಸಾಬಾಳ, ರವಿ ಆಲಹಳ್ಳಿ, ಶಿವಾನಂದಯ್ಯ ಹಿರೇಮಠ ಓತಿಹಾಳ ಸೆರಿದಂತೆ ಅನೇಕರು ಮಾತನಾಡಿದರು.

RELATED ARTICLES

Most Popular

error: Content is protected !!
Join WhatsApp Group