ಬೆಳಗಾವಿ – ಇದೇ ಫೆ. ೨೩ ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಹರ್ಡೇಕರ್ ಮಂಜಪ್ಪನವರ ಬದುಕು ಮತ್ತು ಬರಹ ಕುರಿತು ಬೆಳಗಾವಿಯ ಪ್ರೊ.ಶ್ರೀಕಾಂತ್ ಶಾನವಾಡ ಅವರು ಸುಧೀರ್ಘವಾಗಿ ಮಾತನಾಡಿದರು. ಕರ್ನಾಟಕದ ಗಾಂಧಿ ಎಂದೆ ಹೆಸರು ಪಡೆದ ವಿಭೂತಿ ಪುರುಷರಾದ ಹರ್ಡೇಕರ್ ಮಂಜಪ್ಪನವರು ಕರ್ನಾಟಕದಲ್ಲಿ ಬಸವ ಯುಗದ ವಚನ ಸಾಹಿತ್ಯದ ಸಂಶೋಧನೆ ಮತ್ತು ಪ್ರಸಾರದಲ್ಲಿ ಧಾರವಾಡದ ಮುರುಘಾ ಮಠದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳ ಜೊತೆಗೂಡಿ ಸಂಚರಿಸಿದರು. 1924 ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧೀಜಿಯವರಿಗೆ ವಿಶ್ವಗುರು ಬಸವಣ್ಣನವರ ಕ್ರಾಂತಿಕಾರಕ ಸಾಮಾಜಿಕ ಸೇವಾ ಕಾರ್ಯಗಳನ್ನು ಪರಿಚಯಿಸಿದವರು ಹರ್ಡೇಕರ್ ಮಂಜಪ್ಪನವರು ಎಂದು ತಿಳಿಸಿದರು.
ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರಾದ ಮಂಜಪ್ಪನವರ ತಾಯಿ ಮಂಜಮ್ಮ. ತಂದೆಯ ಕುರಿತಾದ ಮಾಹಿತಿ ಇಲ್ಲ ಎನ್ನುವದು ಹಲವಾರು ಗ್ರಂಥಗಳಲ್ಲಿ ಉಲ್ಲೇಖಿತವಾಗಿದ್ದರೂ, ಇತ್ತೀಚಿನ ಬಸವ ಪಥ ( ಬಸವ ಸಮಿತಿ) ಯ ಪ್ರಕಟಿತ ಲೇಖನದಲ್ಲಿ ಸಂಶೋಧಕರಾದ ಡಾಕ್ಟರ್ ವೀರಣ್ಣ ದಂಡೆಯವರು ಪೂರಕ ಮಾಹಿತಿಯೊಂದಿಗೆ ಅವರ ಕುಟುಂಬದ ಮೂಲದ ಕುರಿತು ಮಾಹಿತಿ ಒದಗಿಸಿದ್ದಾರೆ. ಸತ್ಯಾಗ್ರಹ, ದನುರ್ದಾರಿ, ಕ್ರಾಂತಿಕಾರಿ ಬಸವಣ್ಣ, ಹೀಗೆ ಹಲವಾರು ಪತ್ರಿಕೆ ಮತ್ತು ಗ್ರಂಥಗಳ ಮೂಲಕ ದರ್ಮ ಪ್ರಸಾರಕರಾಗಿ, ಸ್ವತಂತ್ರ ಹೋರಾಟಗಾರರಾಗಿ ಅನುಪಮ ಸೇವೆಗೈದಿದ್ದಾರೆ. ಅಥಣಿ ಮುರುಘೇಂದ್ರ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದು, ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿಯವರ ಜೊತೆಗೂಡಿ ಅಪ್ಪ ಬಸವಣ್ಣನವರ ಜಯಂತಿಯನ್ನು ದಾವಣಗೆರೆಯಲ್ಲಿ ಆಚರಿಸಿದ್ದು ಒಂದು ಮೈಲುಗಲ್ಲು. ಅಷ್ಟೇ ಅಲ್ಲ ಅದು ಕರ್ನಾಟಕದಲ್ಲೇ ಮೊಟ್ಟಮೊದಲು ಎನ್ನುವದು , ಹರ್ಡೇಕರ್ ಮಂಜಪ್ಪನ ಹೆಸರನ್ನು ಚಿರಸ್ಥಾಯಿಗೊಳಿಸಿದೆ ಎನ್ನುವಂತಹ ಹಲವಾರು ವಿಷಯಗಳನ್ನು ಅರ್ಥಪೂರ್ಣವಾಗಿ ತಮ್ಮ ಉಪನ್ಯಾಸದಲ್ಲಿ ಪ್ರೊಫೆಸರ್ ಶ್ರೀಕಾಂತ್ ಶಾನ್ವಾಡವರು ಆದಾರ ಸಹಿತವಾಗಿ ಪ್ರಸ್ತುತಪಡಿಸಿದರು.
ಅವರ ಉಪನ್ಯಾಸಕ್ಕೆ ಪೂರಕವಾಗಿ ಸಂಘಟನೆಯ ಶರಣ ಶಂಕರ ಗುಡಸ ಮತ್ತು ಸದಾಶಿವ ದೇವರಮನಿಯವರು ತಮ್ಮ ಅನುಭವಗಳನ್ನು ಮತ್ತು ಉಪನ್ಯಾಸದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಾಳಪ್ಪ ಕಾಡನ್ನವರ ಕುಟುಂಬದವರಿಂದ ಪ್ರಸಾದ ಸೇವೆ ನೆರವೇರಿತು.ಶರಣರಾದ ಸಂಗಮೇಶ ಅರಳಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮತ್ತು ಸ್ವಾಗತವನ್ನು ನೆರವೇರಿಸಿದರು. ಜಾನ್ಹವಿ ಘೂರ್ಪಡೆ, ಸುವರ್ಣಾ ಗುಡಸ,ಮಹಾದೇವಿ ಅರಳಿ, ವಿ.ಕೆ.ಪಾಟೀಲ್, ಬಿ.ಪಿ.ಜೇವಣಿ, ಕುಮಾರಿ ಪಲ್ಲವಿ ಮತ್ತು ಅಶ್ವಿನಿ – ಇವರೆಲ್ಲ ವಚನ ಪ್ರಾರ್ಥನೆ ಮಾಡಿದರು.
ಸಂಘಟನೆಯ ವೇದಿಕೆಯ ಮೂಲಕ ಉಪನ್ಯಾಸಕರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು. ಶರಣೆ ಮಹಾದೇವಿ ಅರಳಿ ಅವರ ನೇತ್ರತ್ವದಲ್ಲಿ ಪ್ರಾರಂಭದಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ನೆರವೇರಿತು. ಮಹಾದೇವಿ ತಿಗಡಿ, ಸುನೀಲ ಸಾಣಿಕೊಪ್ಪ , ಭಾಗ್ಯಾ ದೆಯನ್ನವರ, ಬಸವರಾಜ ಬಿಜ್ಜರಗಿ, ಕಮಲಾ ಗಣಾಚಾರಿ, ಅಶೋಕ ಇಟಗಿ,ಬಸವರಾಜ ಕರಡಿಮಠ,ಬಸನಗೌಡ ಪಾಟೀಲ, ಶಿವಾನ೦ದ ಲಾಳಸ೦ಗಿ,ಹೀಗೆ ಲಿಂಗಾಯತ ಸಂಘಟನೆಯ ಸರ್ವ ಸದಸ್ಯರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.