ಛತ್ರಪತಿ ಶಿವಾಜಿ ಮಹಾರಾಜರು ಫೆಬ್ರುವರಿ ೧೯, ೧೬೩೦ ರಂದು ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ಶಹಾಜಿ ಭೋಸ್ಲೆ ಮತ್ತು ಜೀಜಾಬಾಯಿ ದಂಪತಿಗಳಿಗೆ ಜನಿಸಿದರು. ಇವರು ಮರಾಠಾ ರಾಜ್ಯದ ಸ್ಥಾಪಕರು. ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು.
೬ ಜೂನ್ ೧೬೭೪ ರಲ್ಲಿ ಪಟ್ಟಧಾರಣೆಯಾಗಿದ್ದು ಕ್ರಿ.ಶ.೧೬೭೪ – ೧೬೮೦ರ ಅವಧಿಯಲ್ಲಿ ರಾಜ್ಯಭಾರ ಮಾಡಿದರು. ಇವರ ಪೂರ್ಣ ಹೆಸರು ಶಿವಾಜಿ ರಾಜೆ ಶಹಾಜಿರಾಜೆ ಭೋಸ್ಲೆಯಾಗಿದ್ದು ಇವರಿಗೆ ಛತ್ರಪತಿ ಎಂಬ ಬಿರುದು ಇತ್ತು.
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣದ ಕನಸು ಕಂಡವರು.
ಮಹಾರಾಷ್ಟ್ರದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ. ಇದರ ವಾಸ್ತವಾಂಶಗಳೇನೇ ಇದ್ದರೂ ಶಿವಾಜಿಗೆ ಕನ್ನಡ ಭೂಮಿ ಪ್ರೇರಣಾ ಸ್ಥಳವಾಗಿತ್ತೆಂಬುದು ನಿಜ. ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು 17ನೇ ಶತಮಾನದ ಮೊದಲರ್ಧದಲ್ಲಿ. ರಾಜ್ಯ ವಿಸ್ತರಣೆಯಲ್ಲಿ ಮೊಗಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(1636) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು. ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು. ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು. ಇಂತಹ ಧೈರ್ಯಶಾಲಿ ಮರಾಠಿ ಸರದಾರರದಲ್ಲಿ ಮಾಲೋಜಿ ಭೋಂಸ್ಲೆಯ ಮಗ ಶಹಾಜಿ ಭೋಂಸ್ಲೆ ಅವರೂ ಒಬ್ಬರು. ವಿಜಾಪುರದ ಅಣತಿಯಂತೆ ಸೈನ್ಯ ಮುನ್ನಡೆಸುತ್ತಿದ್ದ ಶಹಾಜಿ ಹಾಗೂ ರಣದುಲ್ಲಾ ಖಾನ್ರು ಬೆಂಗಳೂರು ಕೆಂಪೇಗೌಡರ ಸೈನ್ಯದೊಡನೆ ಮುಖಾಮುಖಿಯಾಗಿದ್ದು 1638ರ ಡಿಸೆಂಬರ್ ಮಾಹೆಯಲ್ಲಿ. ಜೋರು ಕಾಳಗದ ಬಳಿಕ ಸಂಧಿ ಏರ್ಪಟ್ಟು ಕೆಂಪೇಗೌಡ ತನ್ನ ರಾಜಧಾನಿಯನ್ನು ಮಾಗಡಿಗೆ ಸ್ಥಳಾಂತರಿಸಿದಾಗ ಬೆಂಗಳೂರು ಕೋಟೆ ವಿಜಾಪುರ ಸುಲ್ತಾನರ ಕೈವಶವಾಯಿತು. ಆಗ ಬೆಂಗಳೂರನ್ನು ಮಹಮ್ಮದ್ ಆದಿಲ್ ಷಾನಿಂದ ಜಹಗೀರು ಪಡೆದರು ಶಹಾಜಿ ಭೋಂಸ್ಲೆ. ಛತ್ರಪತಿ ಶಿವಾಜಿ ಸತ್ತ ಸ್ಥಳ ಚಿತ್ರದುರ್ಗದ ಬೊಮ್ಮಸಮುದ್ರ. ಶಿವಾಜಿಯ ತಂದೆ ಶಹಾಜಿಯವರು ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು. ತಮ್ಮದೇ ಆದ ನಾಣ್ಯಗಳನ್ನು ಠಂಕಿಸುತ್ತಿದ್ದರು. ಕೋಟೆ ಪ್ರದೇಶದಲ್ಲಿ ಗೌರಿ ಮಹಲ್ ಎಂಬ ಸುಸಜ್ಜಿತ ಮನೆಯನ್ನು ನಿರ್ವಿುಸಿದ್ದರು. ನಂದಿಬೆಟ್ಟ ಆಗಲೇ ಶಹಾಜಿ ಬೇಸಿಗೆ ರಾಜಧಾನಿಯಾಗಿತ್ತು. ಶಿವಾಜಿಯ ಮೊದಲ ಮಗ ಸಂಬಾಜಿ ಕೋಲಾರ, ದೊಡ್ಡಬಳ್ಳಾಪುರ ಪ್ರದೇಶಗಳ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.
ಯುದ್ಧಕಲೆ:
ತನ್ನ 12ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ. ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ಗುರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 17ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು.
ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.
ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿಯ ವಿವಾಹ ನೆರವೇರಿದ್ದು 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ 1674ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು.
1674ರಲ್ಲಿ ರಾಯಘಡದಲ್ಲಿ ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ್ರನಿರ್ವಣಕ್ಕೆ ಹೋರಾಡಿದ ಶಿವಾಜಿ 1680ರಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠ ರಾಜ್ಯ 1818ರವರೆಗೆ ಉಜ್ವಲವಾಗಿ ಬೆಳಗಿತು.
೧೭ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು.
ಶಿವಾಜಿ ಮಹಾರಾಜರು 1680 ಏಪ್ರಿಲ್ 14 ರಂದು ಮರಣ ಹೊಂದಿದರು. ಇವರ ಸಮಾಧಿ ರಾಯಗಢದಲ್ಲಿ ಇದೆ.
ಸಂತೋಷ್ ಬಿದರಗಡ್ಡೆ
ಗೌರವ ಕಾರ್ಯದರ್ಶಿಗಳು ಕ.ಸಾ.ಪ ಹಾನಗಲ್ಲ