ಮೂಡಲಗಿ – ನಗರದಲ್ಲಿ ವರ್ಷದಲ್ಲಿ ಮೂರು ಅಗ್ನಿ ಅವಘಡಗಳು ಸಂಭವಿಸಿದ್ದರೂ ಮೂಡಲಗಿಗೆ ಇನ್ನೂ ಅಗ್ನಿ ಶಾಮಕ ದಳ ಆಗದೇ ಇರುವುದು ವಿಪರ್ಯಾಸ. ಈಗಾಗಲೇ ಅಗ್ನಿ ಶಾಮಕ ಪರವಾನಿಗೆ ಸಿಕ್ಕಿದ್ದರೂ ಅದು ಬರಬೇಕಾದರೆ ಎಷ್ಟು ಅವಘಡಗಳು ಸಂಭವಿಸಬೇಕೋ ಏನೋ ಎಂದು ಮಲ್ಲಪ್ಪ ಮದಗುಣಕಿ ವಿಷಾದ ವ್ಯಕ್ತಪಡಿಸಿದರು.
ನಗರದ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ಪ್ರಕಾಶ ಕಾಳಪ್ಪಗೋಳ ಅವರ ಫ್ರುಟ್ ಮಾರ್ಟ್ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋದ ಘಟನೆಯ ಬಗ್ಗೆ ಮಾತನಾಡಿದ ಅವರು, ಸುಮಾರು ಹತ್ತು ಲಕ್ಷದಷ್ಟು ಹಾನಿಯಾಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಡೊಂಬರ ಅವರ ಅಂಗಡಿಗೆ ಬೆಂಕಿ ಬಿದ್ದಿತ್ತು, ಅದಕ್ಕಿಂತ ಮೊದಲು ಕಲ್ಮೇಶ್ವರ ಸರ್ಕಲ್ ನಲ್ಲಿ ಒಂದು ಅಂಗಡಿಗೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿತ್ತು. ಅಗ್ನಿ ಶಾಮಕ ದಳ ಇದ್ದಿದ್ದರೆ ಹೆಚ್ಚಿನ ಹಾನಿಯನ್ನು ತಡೆಯಬಹುದಾಗಿತ್ತು ಎಂದರು.
ನಿನ್ನೆ ರಾತ್ರಿ ಒಂದು ಗಂಟೆಯ ಸುಮಾರಿಗೆ ಫ್ರುಟ್ ಮಾರ್ಟ್ ಎಂಬ ಹಣ್ಣಿನ ರಸದ ಅಂಗಡಿಗೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಅಂಗಡಿಯ ಮಾಲೀಕ ಪ್ರಕಾಶ ಕಾಳಪ್ಪಗೋಳ ಮಾತನಾಡಿ, ಇಂಥ ಘಟನೆಯಿಂದ ನಮಗೆ ಆಘಾತವಾಗಿದೆ. ಮೂಡಲಗಿಗೆ ಅಗ್ನಿ ಶಾಮಕ ದಳ ಎಂದೋ ಆಗಬೇಕಿತ್ತು ಇನ್ನೂ ಆಗುತ್ತಿಲ್ಲ. ಇದರ ಹಿಂದೆ ಏನು ನಡೆದಿದೆ ಎಂಬುದೇ ಗೊತ್ತಾಗುತ್ತಿಲ್ಲ. ಏನಾದರೂ ರಾಜಕೀಯ ಕಾರಣ ಇದ್ದರೂ ಹಾನಿ ಅನುಭವಿಸುವವರು ಮಾತ್ರ ನಮ್ಮಂಥ ಜನ ಸಾಮಾನ್ಯರು. ಶಾಸಕರು ಇತ್ತ ಕಡೆ ಗಮನ ಕೊಡಬೇಕು. ಬೇಗನೆ ಅಗ್ನಿ ಶಾಮಕ ದಳ ಬರುವಂತೆ ಮಾಡಿ ಮುಂದಾಗಲಿರುವ ಹೆಚ್ಚಿನ ಹಾನಿ ತಡೆಯಬೇಕು ಎಂದರು.
ಈ ಬೆಂಕಿ ಅವಘಡದ ಸುದ್ದಿ ತಿಳಿಯುತ್ತಲೇ ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು ಮೂಡಲಗಿ ನಗರಕ್ಕೆ ಯಾಕೆ ಅಗ್ನಿ ಶಾಮಕ ದಳ ಮಾಡಲು ಆಗುತ್ತಿಲ್ಲ ಇನ್ನೂ ಎಷ್ಟು ಆಸ್ತಿ ಹಾನಿ, ಜೀವ ಹಾನಿ ಸಂಭವಿಸಬೇಕು ಎಂದು ಕೇಳಿದರು. ಮೊದಲೇ ಬೇಸಿಗೆ ಕಾಲ ಸಮೀಪಿಸುತ್ತಿದೆ ಬೆಂಕಿಯ ಅಪಘಾತಗಳು ಸಂಭವಿಸಬಹುದು ಅಷ್ಟರಲ್ಲಿ ಅಗ್ನಿ ನಂದಕ ವಾಹನವನ್ನು ಶಾಸಕರು ಮೂಡಲಗಿಗೆ ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು