ಹುಬ್ಬಳ್ಳಿ – ಯಾವುದೇ ಸಮಾಜ ಬೆಳೆಯಬೇಕಾದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಪ್ರಾತಿನಿಧ್ಯ ಪಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕುರುಹಿನಶೆಟ್ಟಿ ಸಮಾಜ ಬೆಳೆಯಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಧಾರವಾಡ ಜಿಲ್ಲಾ ಕುರುಹಿನಶೆಟ್ಟಿ ಅಭಿವೃದ್ಧಿ ಸಂಘ, ಹುಬ್ಬಳ್ಳಿ ಹಾಗೂ ಕುರುಹಿನಶೆಟ್ಟಿ ಕೇಂದ್ರ ಸಂಘ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕುರುಹಿನಶೆಟ್ಟಿ ಸಮಾಜದ ವಧುವರರ ಸಮ್ಮೇಳನ ಇಲ್ಲಿನ ಚವ್ಹಾಣ ಗ್ರೀನ್ ಗಾರ್ಡನ್ ದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಶೆಟ್ಟರ ಅವರು ಮಾತನಾಡಿದರು.
ಹೀಗೆ ವಧುವರ ಸಮ್ಮೇಳನ ನಡೆಸುತ್ತಿರುವುದು ಸಂತೋಷಕರ ಸಂಗತಿ. ಇದೇ ನೆಪದಲ್ಲಿ ಎಲ್ಲರೂ ಒಂದೆಡೆ ಸೇರಲು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಲ್ಯಾಣ ಮಂಟಪಕ್ಕೆ ಈಗಾಗಲೇ ಒಂದು ಕೋಟಿ ರೂ. ಅನುದಾನ ನೀಡಿದ್ದು ಇನ್ನೂ ಒಂದು ಕೋಟಿ ರೂ. ಸರ್ಕಾರದಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದ ಜಗದೀಶ ಶೆಟ್ಟರ ಅವರು, ನನಗೆ ಮೊದಲಿನಿಂದಲೂ ಕುರುಹಿನಶೆಟ್ಟಿ ಸಮಾಜದೊಂದಿಗೆ ಆತ್ಮೀಯ ಸಂಬಂಧ ಇದೆ. ಸಮಾಜವು ಇನ್ನೂ ಒಗ್ಗಟ್ಟು ಸಂಘಟನೆಯೊಂದಿಗೆ ಬೆಳವಣಿಗೆ ಹೊಂದಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಅಂಬಾದಾಸ ಕಾಮೂರ್ತಿ, ರಜತ ಉಳ್ಳಾಗಡ್ಡಿ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಶ್ರೀ ನೀಲಕಂಠ ಮಠದ ಪೀಠಾಧಿಪತಿ ಶ್ರೀ ಶಿವಶಂಕರ ಸ್ವಾಮೀಜಿ ವಹಿಸಿ ಕೊನೆಗೆ ಆಶೀರ್ವಚನ ನೀಡಿದರು.
ಕೇಂದ್ರ ಸಂಘದ ಗೌರವಾಧ್ಯಕ್ಷ ಎಂ ಬಿ ಶಿವಕುಮಾರ, ಕೇಂದ್ರ ಸಂಘದ ಉಪಾಧ್ಯಕ್ಷ ಮುರಿಗೆಪ್ಪ ಬನ್ನಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ, ಮನೋಹರ ಶಿರೋಳ, ಈರಣ್ಣ ಜಡಿ, ಸಿದ್ದಪ್ಪ ಡಂಬಳ, ಶ್ರೀಮತಿ ಪ್ರಭಾವತಿ ಮಾಸ್ತಮರಡಿ, ವೀರಣ್ಣ ಶಹಾಪೂರ, ಮಲ್ಲಿಕಾರ್ಜುನ ಬನ್ನೂರ, ಕಲಾವಿದ ದಾನಪ್ಪ ಮೂಡಲಗಿ, ಸುನೀಲ ಕೋಷ್ಟಿ ಸಾಂಗಲಿ ಉಪಸ್ಥಿತರಿದ್ದರು.
ಬೃಹತ್ ವಧು ವರ ಸಮ್ಮೇಳನದಲ್ಲಿ ಕರ್ನಾಟಕ- ಮಹಾರಾಷ್ಟ್ರ ರಾಜ್ಯದಿಂದಲೂ ಆಗಮಿಸಿದ್ದ ವಧು ವರರು ಭಾಗವಹಿಸಿ ತಮ್ಮ ಪರಿಚಯ ಮಾಡಿಕೊಂಡರು.