ಮುನವಳ್ಳಿ (ತಾ.ಸವದತ್ತಿ) : “ವಿಚಾರಮಾಡುವ ಶಕ್ತಿ ಹೊಂದಿರುವ ಮನುಷ್ಯ ತನಗಿರುವ ಅರಿವಿನ ಬೆಳಕಿನಿಂದ ಧರ್ಮದ ರಹದಾರಿಯಲ್ಲಿ ಮುನ್ನಡೆದಾಗ ನೆಮ್ಮದಿ ಸಾಧ್ಯವಾಗುತ್ತದೆ” ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷ ರಾದ ಆನಂದ ಮಾಮನಿ ಹೇಳಿದರು.
ಅವರು ಮುನವಳ್ಳಿ ಸಮೀಪದ ಉಗರಗೋಳ ಗ್ರಾಮದ ಶ್ರೀ ಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಧರ್ಮದ ನಿಜವಾದ ತಿಳಿವಳಿಕೆಯನ್ನು ಪಡೆಯಲು ಪ್ರಯತ್ನಿಸಬೇಕು. ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದಲ್ಲಿ ಜರುಗುತ್ತಿರುವ ಬಡ ಜಂಗಮ ಮಕ್ಕಳ ಉಚಿತ ವಿದ್ಯಾರ್ಥಿ ನಿಲಯಕ್ಕೆ ಸರಕಾರದಿಂದ ಲಭ್ಯವಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದೂ ಮಾಮನಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಐ.ಎ.ಎಸ್. ಅಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಯಾವುದೇ ಧರ್ಮವಿರಲಿ ಅಲ್ಲಿ ಮಾನವ ಜನಾಂಗಕ್ಕೆ ಪೂರಕವಾದ ಅನಂತ ಮೌಲ್ಯತುಂಬಿದ ಸಂದೇಶಗಳಿವೆ. ಅವುಗಳನ್ನು ಅರಿತು ಬದುಕಿನಲ್ಲಿ ಹೊಸ ಬದಲಾವಣೆಯನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದರು.
ಸಾಕ್ಷಾತ್ಕಾರ ಸಂಪಾದನೆ:
ಆಶೀರ್ವಚನ ನೀಡಿದ ಹೂಲಿ ಸಾಂಬಯ್ಯನವರಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ’ಮೋಕ್ಷ ಮಾರ್ಗವನ್ನು ಅರಿತಾಗಲೇ ಮನುಕುಲದ ಬದುಕು ಸಾರ್ಥಕವಾಗುತ್ತದೆ. ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಂತಹ ಮಹಾತ್ಮರ ಅಧ್ಯಾತ್ಮದ ಚಿಂತನೆಯ ನೆರಳಿನಲ್ಲಿ ಬದುಕಲು ರೂಢಿಸಿಕೊಂಡರೆ ಸಾಕ್ಷಾತ್ಕಾರ ಸಂಪಾದನೆ ಸುಲಭವಾಗುತ್ತದೆ’ ಎಂದರು. ಉಗರಗೋಳ ಗ್ರಾಮದ ನಿರ್ವಾಣೇಶ್ವರಮಠದ ಶ್ರೀ ಮಹಾಂತ ಸ್ವಾಮೀಜಿ ಹಾಗೂ ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಶ್ರೀ ಅಡವಯ್ಯ ದೇವರು ಉಪದೇಶಾಮೃತ ನೀಡಿದರು.
ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರುಗಳಾದ ಕೆ.ಎಸ್. ಗಂದಿಗವಾಡ, ವೈ.ವೈ. ಕಾಳಪ್ಪನವರ, ಉಗರಗೋಳ ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಬಾರಿಗಿಡ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ವಿವಿಧ ಕ್ಷೇತ್ರಗಳ ಗಣ್ಯರಾದ ಬಿ.ಪಿ. ಪಾಟೀಲ, ಆರ್.ಬಿ. ಶಂಕರಗೌಡರ, ವೈ.ಆರ್.ಚನ್ನಪ್ಪಗೌಡರ, ಕುಮಾರಿ ಆರ್.ಪಿ.ಪವಾರ, ಬಿ.ಆರ್. ಹಿರೇಮಠ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಹುಕ್ಕೇರಿ, ಉಗರಗೋಳ, ಹರ್ಲಾಪೂರ, ಹಂಚಿನಾಳ, ಮುನವಳ್ಳಿ ಭಾಗಗಳ ಹಲವಾರು ಗಣ್ಯರು ಇದ್ದರು.
ಗುರುರಕ್ಷೆ ಗೌರವ:
ಇದೇ ಸಂದರ್ಭದಲ್ಲಿ ಕುಸ್ತಿ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಮೇದಾಸಾಬ ಬೇವಿನಗಿಡದ, ಗಣಪತಿಗೌಡ ಚನ್ನಪ್ಪಗೌಡರ, ಮುಸ್ತಿಕಆಲಂ ಬೇವಿನಗಿಡದ, ನಿಂಗಪ್ಪ ಅಳಗೋಡಿ, ಮಕ್ತುಂಹುಸೇನ ಬಾರಿಗಿಡದ, ಮಾರುತಿ ಕುಂಟೋಜಿ, ಮಂಜು ಗೊರವನಕೊಳ್ಳ, ರವಿ ಅತ್ತಿಗೇರಿ, ರಾಜು ಹೆಬ್ಬಳ್ಳಿ, ಬುಡನ್ಸಾಬ ಹೊಸಮನಿ, ದಾವಲಸಾಬ ಕುಷ್ಟಗಿ, ಚೇತನ ಈರಗಾರ ಅವರಿಗೆ ಗುರುರಕ್ಷೆಯ ಗೌರವ ನೀಡಿ ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಭಾಗಗಳ ಸೇವಾಕರ್ತರನ್ನು ಹಾಗೂ ಉಗರಗೋಳ ಗ್ರಾ.ಪಂ. ಸದಸ್ಯರನ್ನು ಗೌರವಿಸಲಾಯಿತು.
ಅಲಂಕಾರ ಪೂಜೆ:
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಾತಃಕಾಲದಲ್ಲಿ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿದವು. ನಂತರ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು ೧೦೮ ಕುಂಭ ಹಾಗೂ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಉಗರಗೋಳ ಗ್ರಾಮದಲ್ಲಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಹಾಗೂ ಗ್ರಾಮದಲ್ಲಿ ಲಕ್ಷ ದೀಪೋತ್ಸವ ನಡೆಯಿತು. ಶ್ರೀಮಠದ ಆಡಳಿತ ಮಂಡಳಿಯ ಸಿ.ಇ.ಓ. ನಿವೃತ್ತ ಕೆ.ಎ.ಎಸ್. ಅಧಿಕಾರಿ ಮಹೇಶ ಹಿರೇಮಠ ಸ್ವಾಗತಿಸಿದರು. ಐ.ಎಂ.ಪೂಜಾರ ವಂದಿಸಿದರು. ವೀರಯ್ಯ ಹಿರೇಮಠ ನಿರೂಪಿಸಿದರು.
ಸಂಗೀತ ಕಾರ್ಯಕ್ರಮ:
ಹಿಂದೂಸ್ತಾನಿ ಗಾಯಕರಾದ ಮೈಸೂರಿನ ರಮೇಶಕುಮಾರ ಕೋಲಕುಂದ, ಧಾರವಾಡದ ಅರ್ಜುನ ವಠಾರ ಹಾಗೂ ಸುರಭಿ ಸುರೇಶ ಗೋವಿಂದರಡ್ಡಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಅಲ್ಲಮಪ್ರಭು ಕಡಕೋಳ ತಬಲಾ ಸಾಥ ನೀಡಿದರು.