ಮೂಡಲಗಿ – ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಉದ್ಘಾಟಿಸಿದರು.
ಪತ್ರಕರ್ತರಿಗಾಗಿ ಪುರಸಭೆ ಎದುರಿಗಿನ ತಮ್ಮ ಕಟ್ಟಡದಲ್ಲಿ ಒಂದು ಭಾಗವನ್ನು ಕಚೇರಿಗಾಗಿ ಸುರೇಶ ಪಾಟೀಲ ಅವರು ಒದಗಿಸಿದ್ದು ಶುಕ್ರವಾರದಂದು ಪೂಜೆಯೊಂದಿಗೆ ಕಚೇರಿಯ ಉದ್ಘಾಟನೆ ನೆರವೇರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಮೇಶ ಬೆಳಕೂಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಸಂಗಮೇಶ ಗುಜಗೊಂಡ, ತಹಶೀಲ್ದಾರ ಡಿ ಜೆ ಮಹಾತ್, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸಂತೋಷ ಸೋನವಾಲಕರ, ಪಿಎಸ್ ಐ ಎಚ್ ವೈ ಬಾಲದಂಡಿ ಆಗಮಿಸಿದ್ದರು.
ಹಿತೈಷಿಗಳಾಗಿ ಆಗಮಿಸಿದ್ದ ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಶಿಲ್ದಾರರ ತಮ್ಮ ಮಾತುಗಳಿಂದ ಪತ್ರಕರ್ತರ ಕರ್ತವ್ಯದ ಬಗ್ಗೆ ಎಚ್ಚರಿಸಿದರೆ, ಸಾಹಿತಿ ಗುಜಗೊಂಡ ಅವರು ಮೂಡಲಗಿಯಲ್ಲಿ ಪತ್ರಿಕೊದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಉಮೇಶ ಬೆಳಕೂಡ, ಪತ್ರಕರ್ತರು ನಿಖರವಾಗಿ, ನಮ್ರವಾಗಿ ವರದಿಗಳನ್ನು ಬರೆಯುವುದರ ಬಗ್ಗೆ ಹೇಳಿ, ಪತ್ರಕರ್ತರು ಬರೆಯಬೇಕಾದರೆ ಓದುವುದನ್ನು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.
ಅಚ್ಚುಕಟ್ಟಾಗಿ ನಡೆದ ಸಮಾರಂಭದಲ್ಲಿ ಎಲ್ಲ ಪತ್ರಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅನೇಕ ಮಹನೀಯರು ಸಮಾರಂಭಕ್ಕೆ ನೆರವು ಕೂಡ ನೀಡಿದ್ದು ಅವರೆಲ್ಲರ ಸಹಕಾರದಿಂದ ಸಮಾರಂಭ ಯಶಸ್ವಿಯಾಗಿ ನೆರವೇರುವಂತಾಯಿತು.
ಸಮಾರಂಭದಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರನ್ನು ಹಾಗೂ ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಿದ್ದಣ್ಣ ದುರದುಂಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಸದ್ಯ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದಲ್ಲಿ ೩೩ ಜನ ಸದಸ್ಯರಿದ್ದು ಅಧ್ಯಕ್ಷರಾಗಿ ಉಮೇಶ ಬೆಳಕೂಡ, ಉಪಾಧ್ಯಕ್ಷರಾಗಿ ಶಂಕರ ಹಾದಿಮನಿ ಇದ್ದಾರೆ.
ಸಂಘದ ಕಾರ್ಯದರ್ಶಿಯಾಗಿ ಮಲ್ಲು ಬೋಳನವರ, ಸಹ ಕಾರ್ಯದರ್ಶಿ ಸಾಗರ ಸಾಲಿಮಠ, ಖಜಾಂಚಿ ಭೀಮಶಿ ತಳವಾರ ಸಹ ಖಜಾಂಚಿ ಭಗವಂತ ಉಪ್ಪಾರ ಅವರು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
ನಿರ್ದೇಶಕರ ಸ್ಥಾನಗಳಲ್ಲಿ ಸುರೇಶ ಪಾಟೀಲ, ಚಂದ್ರಶೇಖರ ಪತ್ತಾರ, ಪ್ರವೀಣ ಮಾವರಕರ ವೆಂಕಟೇಶ ಬಾಲರಡ್ಡಿ, ಅಲ್ತಾಫ ಹವಾಲ್ದಾರ ಇದ್ದಾರೆ. ಸುಧಾಕರ ಉಂದ್ರಿ ಸಂಘದ ಸಲಹೆಗಾರರಾಗಿದ್ದಾರೆ.