ಜೈನ್ (ಡೀಮ್ಡ್-ಟು-ಬೀ ಯೂನಿವರ್ಸಿಟಿ)ಯಲ್ಲಿ ಜರುಗಿದ 79ನೇ ಸ್ವಾತಂತ್ರ್ಯೋತ್ಸವ

Must Read

“ಸ್ವಾತಂತ್ರ್ಯವನ್ನು ಕೊಡಲಾಗುವುದಿಲ್ಲ, ಅದನ್ನು ಗೆಲ್ಲಬೇಕು.” ಎಂಬ ನೇತಾಜಿ ಸುಭಾಸ್ ಚಂದ್ರ ಬೋಸ್ ರ ಸರ್ವಕಾಲಕ್ಕೂ ಸಲ್ಲುವ ವಾಕ್ಯ ಬೆಂಗಳೂರಿನ
ಜೈನ್ (ಡೀಮ್ಡ್-ಟು-ಬೀ ಯೂನಿವರ್ಸಿಟಿ)ಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗಟ್ಟಿ ಧ್ವನಿಯಲ್ಲಿ ಮೊಳಗಿದಂತಿತ್ತು.

ಈ ಉತ್ಸವದಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮ ಎಲ್ಲೆಡೆ ಮೈವೆತ್ತಿತು.ಸ್ವಾತಂತ್ರ್ಯೋತ್ಸವದ ಈ ಕಾರ್ಯಕ್ರಮವನ್ನು ಭಾರತೀಯ ವಾಯುಸೇನೆಯ ಮಾಜಿ ಉಪ ಮುಖ್ಯಸ್ಥರಾದ ನಿವೃತ್ತ ಏರ್ ಮಾರ್ಷಲ್,ಪಿ ವಿ ಎಸ್ ಎಂ, ಎ ವಿ ಎಸ್ ಎಂ, ವಿ ಎಂ, ಎ ಡಿ ಸಿ ಮೊದಲಾದ ಪದವಿಗಳ ಗೌರವಾನ್ವಿತರಾದ ಅನಿಲ್ ಖೋಸ್ಲಾ ಅವರ ನೇತೃತ್ವದಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಎಲ್ಲರ ಎದೆಯಂತರಾಳದಿಂದ ಹೊರಹೊಮ್ಮಿದ ರಾಷ್ಟ್ರಗೀತೆಯು ಅವರಣದೆಲ್ಲೆಡೆ ಏಕತೆ ಮತ್ತು ಕೃತಜ್ಞತೆಯ ಭಾವಗಳನ್ನುಂಟು ಮಾಡಿತು. ಇದು ಎಲ್ಲರನ್ನೂ ಒಮ್ಮೆ ಪುಲಕಿತಗೊಳ್ಳುವಂತೆ ಮಾಡಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಪ್ರೊ ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ ಮಾತನಾಡುತ್ತಾ ಇಂದು ಹಿರಿಯರನ್ನೊಳಗೊಂಡಂತೆ ಯುವ ಸಮುದಾಯ ರಾಜ್ಯ ರಾಷ್ಟ್ರದ ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.

ಇನ್ನೋರ್ವ ಅತಿಥಿಗಳಾದ ರಿಜಿಸ್ಟ್ರಾರ್ ಮತ್ತು ಎಕ್ಟಿಂಗ್ ವೈಸ್ ಚಾನ್ಸಲರ್ ರಾದ ಡಾ.ಜಿತೇಂದ್ರಕುಮಾರ್ ಮಿಶ್ರಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತ ಭವಿಷ್ಯತ್ತಿನ ಬದುಕನ್ನು ಮತ್ತು ಜವಾಬ್ದಾರಿಯುತ ನಾಗರಿಕತೆಯನ್ನು ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಮಹತ್ವದ್ದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಏರ್ ಮಾರ್ಷಲ್ ಖೋಸ್ಲಾ, ತಮ್ಮ ವೃತ್ತಿಜೀವನದ ಒಳನೋಟಗಳನ್ನು ಯುವ ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು. ಇಂದು ದೇಶಕ್ಕಾಗಿ ಸಮಗ್ರತೆ, ಧೈರ್ಯ ಮತ್ತು ಸೇವಾ ಮನೋಭಾವದಂತ ಮೌಲ್ಯಗಳನ್ನು ಯುವ ಸಮುದಾಯ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಮೇಲಾಗಿ ಯುವಕರು ರಾಷ್ಟ್ರ ನಿರ್ಮಾಣದ ಕಡೆಗೆ ತಮ್ಮ ಮಾನಸಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು. ಸ್ವಾತಂತ್ರ್ಯದ ಸವಲತ್ತು ಅದನ್ನು ಕಾಪಾಡುವ ಕಾರ್ಯಕ್ಷಮತೆಯಿಂದ ಲಭಿಸುತ್ತದೆ ಎಂದು ಅವಲೋಕಿಸಿದರು.

ನಂತರ ಜೈನ್ ವಿಶ್ವವಿದ್ಯಾಲಯದ ವಿವಿಧ ಕ್ಯಾಂಪಸ್ಸಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ಸಂಗೀತ ಮತ್ತು ನೃತ್ಯ ಹಾಗೂ ನಾಟಕಗಳ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನೊಮ್ಮೆ ಸ್ಮರಿಸುವಂತೆ ಮಾಡಿತು. ವಿಶೇಷತೆ ಎಂದರೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಪ್ರಸ್ತುತಪಡಿಸಿದ ದೇಶಭಕ್ತಿಯ ಸ್ಕಿಟ್ ಭಾರತದ ಸಶಸ್ತ್ರ ಪಡೆಗಳ ತ್ಯಾಗಕ್ಕೆ ಗೌರವ ಸಲ್ಲಿಸಿದಂತಿತ್ತು, ಇದು ರಾಷ್ಟ್ರದ ಕುರಿತ ಜವಾಬ್ದಾರಿಯತ ನೋಟ ಎಲ್ಲರಲ್ಲಿ ಜಾಗೃತಗೊಳಿಸಿತು. ಇಂದಿನ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ಜೈನ್ (ಡೀಮ್ಡ್ -ಟು – ಬಿ ಯುನಿವರ್ಸಿಟಿ)ಯ ಎಲ್ಲ ಕ್ಯಾಂಪಸ್ ನ ವಿದ್ಯಾರ್ಥಿವೃಂದ,ಪ್ರಾಧ್ಯಾಪಕವೃಂದ, ಪಾಲಕ ಬಂಧುಗಳು, ಹಿಂದಣ ವಿದ್ಯಾರ್ಥಿ ವೃಂದ ಹಾಗೂ
ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group