ಬೆಳಗಾವಿ: ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಗುರು ವಿವೇಕಾನಂದ ವಿವಿಧೋದ್ಧೇಶಗಳ ಸಹಕಾರಿ ಸಂಘ, ಬೆಳಗಾವಿ ಇವರ ಸಹಯೋಗದಲ್ಲಿ ‘ಯುವ ದಿನಾಚರಣೆ’ಯ ಅಂಗವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದ ವಿವಿಧ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ದಿ. ೧೧-೦೧-೨೦೨೪ ರಂದು ‘ಬಲಿಷ್ಠ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದ ಕುರಿತು ಅಂತರ ವಿಭಾಗ ಮಟ್ಟದ ‘ಭಾಷಣ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
ಹದಿನೈದಕ್ಕೂ ಹೆಚ್ಚು ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉತ್ತಮವಾಗಿ ಭಾಷಣ ಮಾಡಿದ ಸುಸ್ಮಿತಾ ಹಲ್ಯಾಳ, ಇಂಗ್ಲೀಷ ವಿಭಾಗ (ಪ್ರಥಮ ಬಹುಮಾನ-೩೦೦೦ರೂ.), ರೇಣುಕಾ ಪೂಜಾರಿ, ಕನ್ನಡ ವಿಭಾಗ (ದ್ವಿತೀಯ ಬಹುಮಾನ-೨೦೦೦ ರೂ.) ಹಾಗೂ ರೋಹಿತ ತೇಲಿ, ಭೌತಶಾಸ್ತ್ರ ವಿಭಾಗ (ತೃತೀಯ ಬಹುಮಾನ-೧೦೦೦ ರೂ.) ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ಹಾಗೂ ತಲಾ ಒಂದು ಸಾವಿರ ರೂಪಾಯಿಗಳನ್ನು ನೀಡಿ ಗೌರವಿಸಲಾಯಿತು. ಈ ಬಹುಮಾನವನ್ನು ಗುರು ವಿವೇಕಾನಂದ ವಿವಿಧೋದ್ಧೇಶಗಳ ಸಹಕಾರಿ ಸಂಘ, ಬೆಳಗಾವಿ ಇವರು ಪ್ರಾಯೋಜಿಸಿದ್ದರು. ಸ್ಪರ್ಧೆಯಲ್ಲಿ ಗಣಿತಶಾಸ್ತ್ರ ವಿಭಾಗದ ಪ್ರೊ. ವಿ. ಎಸ್. ಶಿಗೇಹಳ್ಳಿ, ರಾಜ್ಯಶಾಸ್ತ್ರ ವಿಭಾಗದ ಪ್ರೊ. ವೈ. ಎಸ್. ಬಲವಂತಗೋಳ ಹಾಗೂ ಕನ್ನಡ ವಿಭಾಗದ ಪ್ರೊ. ಗುಂಡಣ್ಣ ಕಲಬುರ್ಗಿ ನಿರ್ಣಾಯಕರಾಗಿದ್ದು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಗಜಾನನ ನಾಯ್ಕ ಅವರು ಈ ಕಾರ್ಯಕ್ರಮವನ್ನು ನಿರ್ವಹಿಸಿದರು.