ಬೀದರ – ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮಿಷನ್ ೨೦೨೩ ವಿಧಾನ ಸಭಾ ಚುನಾವಣೆ ರಥ ಎಂದು ಹೇಳಬಹುದಾದ ಜನತಾ ಜಲಧಾರೆ ಯಾತ್ರೆಯ ರಥವನ್ನು ಮಾಜಿ ಸಚಿವರು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಬೀದರಿಗೆ ಬರಮಾಡಿಕೊಂಡರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನಿವಾಸದ ಆವರಣಕ್ಕೆ ಆಗಮಿಸಿದ ಜಲಧಾರೆ ರಥವನ್ನು ಸ್ವಾಗತಿಸಿದ ಜೆಡಿಎಸ್ ನಾಯಕರು, ರಥಕ್ಕೆ ಪೂಜೆ ಸಲ್ಲಿಸಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿಕೆ ಪ್ರಕಾರ ದೇವೇಗೌಡರು ಮತ್ತು ಕುಮಾರಸ್ವಾಮಿ ಪರಿಕಲ್ಪನೆ ಮತ್ತು ಕನಸಿನಂತೆ ಜನತೆ ಜಲಧಾರೆ ಯಾತ್ರೆ ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭವಾಗುತ್ತಿದೆ.
ರಾಜ್ಯದ ನೀರಾವರಿ ಇನ್ನು ಮುಂದೆ ಯಾವ ಮಟ್ಟದಲ್ಲಿ ಮಾಡಬಹುದು ಎಂಬ ನಿಟ್ಟಿನಲ್ಲಿ ಮತ್ತು ನಮ್ಮ ಸರ್ಕಾರ ಬಂದರೇ ನಾವು ಕೈಗೊಳ್ಳುವ ಯೋಜನೆಗಳ ಬಗ್ಗೆ ರಾಜ್ಯಕ್ಕೆ ತಿಳಿಸುವ ಕಾರ್ಯಕ್ರಮವೇ ಜನತಾ ಜಲಧಾರೆ ಕಾರ್ಯಕ್ರಮವಾಗಿದೆ ಎಂದು ನಾಯಕರು ಹೇಳಿದರು.
ರಾಜ್ಯಾದ್ಯಂತ ಹದಿನೈದು ರಥಗಳು ಸಾಗಲಿವೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸಂಗಮದಿಂದ ಈ ಭಾಗದ ಜನತಾ ಜಲಧಾರೆ ರಥ ಸಾಗಲಿದ್ದು, ಶನಿವಾರ ಬೆಳಗ್ಗೆ ೧೦.೩೦ ಕ್ಕೆ ಜಲಧಾರೆ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಈ ಕಾರ್ಯಕ್ರಮದ ಮೂಲಕ ೨೦೨೩ ರಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಮುಂಬರುವ ವಿಧಾನ ಸಭಾ ಚುನಾವಣೆ ರಾಜ್ಯದ ಜನರು ಜೆಡಿಎಸ್ ಪಕ್ಷದ ಕೈ ಹಿಡಿಯುವರೋ ಎಂಬುದನ್ನು ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ