Homeಸುದ್ದಿಗಳುಶ್ರೀ ಮಹಾಲಕ್ಷ್ಮಿ ದೇವಿ ರಥೋತ್ಸವದಲ್ಲಿ ಪಾಲ್ಗೊಳ್ಳಿ - ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಶ್ರೀ ಮಹಾಲಕ್ಷ್ಮಿ ದೇವಿ ರಥೋತ್ಸವದಲ್ಲಿ ಪಾಲ್ಗೊಳ್ಳಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಗೋಕಾಕ – ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈಗಾಗಲೇ ಅಷ್ಠ ಬಂಧ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಕೆ. ವಿ. ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯುತ್ತಿದ್ದು, ನಾಳೆ ಬುಧವಾರದಂದು ಮಹಾಲಕ್ಷ್ಮೀ ದೇವರ ಮಹಾ ರಥೋತ್ಸವ ಜರುಗಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಮಂಗಳವಾರದಂದು ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಮಹಾಲಕ್ಷ್ಮೀ ಯಾಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಳೆ ನಡೆಯುವ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ದೇವಿಯರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವಂತೆ ಅವರು ಸಕಲ ಭಕ್ತರಲ್ಲಿ ಮನವಿ ಮಾಡಿಕೊಂಡರು.

ನಾಳೆ ದಿನಾಂಕ ೭ ರಂದು ಬೆಳಿಗ್ಗೆಯಿಂದ ಸಂಜೆತನಕ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬೆಳಗಿನ ಸಮಯದಲ್ಲಿ ಪುಣ್ಯಾಹವಾಚನ ಶ್ರೀ ಮಹಾಲಕ್ಷ್ಮೀ ದೇವಿಗೆ ಉದ್ವರ್ತನ, ತೈಲ ಆಭಂಗ್ಯ, ಪಂಚಾಮೃತ ಅಭಿಷೇಕ, ಸಹಸ್ರ ಪರಿ ಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ಆರಂಭವಾಗಲಿದೆ.
ನಂತರ ೧೧.೩೫ ಗಂಟೆಯಿಂದ ಕರ್ಕಾಟಕ ಲಗ್ನ ಸುಮುಹೂರ್ತ ದಲ್ಲಿ ಬ್ರಹ್ಮ ಕುಂಭಾಭಿಷೇಕ, ನ್ಯಾಸ ಪೂಜೆ, ಅವಶ್ರುತ ಬಲಿ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಹಾ ಅನ್ನ ಸಂತರ್ಪಣೆ, ಮಹಾ ಮಂತ್ರಾಕ್ಷತೆ ನಡೆಯಲಿದೆ.

ಸಂಜೆ ೬.೦೦ ಗಂಟೆಯಿಂದ ವೇಳೆಯಲ್ಲಿ ಆರಾಧನಾ ಪೂಜೆ, ಮಹಾರಂಗ ಪೂಜೆ, ಉತ್ಸವ ಬಲಿ, ರಥೋತ್ಸವ, ಸಿಡಿಮದ್ದು ಪ್ರದರ್ಶನ, ಶ್ರೀಭೂತ ಬಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ನಾಳೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಅರಭಾವಿ, ಗೋಕಾಕ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ಭಕ್ತ ಸಮೂಹವು ನಾಳಿನ ಮಹಾಲಕ್ಷ್ಮೀ ರಥೋತ್ಸವದಲ್ಲಿ ಭಾಗಿಯಾಗಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಯುವ ಮುಖಂಡರಾದ ಸಂತೋಷ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಸನತ್ ಜಾರಕಿಹೊಳಿ, ಅಭಿಷೇಕ ನಾಯಿಕ, ನಗರ ಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪ್ರಭು ಚವ್ಹಾಣ್, ಖ್ಯಾತ ಉದ್ಯಮಿಗಳಾದ ಜೆ. ಎನ್. ಶೆಟ್ಟಿ, ಸೈದಪ್ಪ ಗದಾಡಿ, ವಿಕ್ರಮ್ ಅಂಗಡಿ, ಅರ್ಬನ್ ಬ್ಯಾಂಕ ಅಧ್ಯಕ್ಷ ಬಸವರಾಜ್ ಕಲ್ಯಾಣ ಶೆಟ್ಟಿ, ನಿರಂಜನ ಬನ್ನಿಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು, ನಗರಸಭೆ ಸದಸ್ಯರು, ವರ್ತಕರು, ಅನೇಕ ಗಣ್ಯರು ಉಪಸ್ಥಿತರಿದ್ದರು.
ಕೆ. ವಿ. ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

RELATED ARTICLES

Most Popular

error: Content is protected !!
Join WhatsApp Group