ಮೂಡಲಗಿ:-ತಾಲೂಕಿನ ಹೂಗಾರ ಸಮಾಜದವರಿಂದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸಹಯೋಗದಲ್ಲಿ ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವವನ್ನು ಘಟಪ್ರಭಾದ ಶ್ರೀ ಹನುಮಾನ ಮಂದಿರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಇಂದಿನ ಪ್ರಸ್ತುತ ಸಮಾಜದಲ್ಲಿ ದೇವರು, ಭಕ್ತಿ, ಅಧ್ಯಾತ್ಮ ಪ್ರಧಾನ ಸಮುದಾಯಕ್ಕೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದೆ. ಹೂಗಾರ ಮಾದಯ್ಯನವರ ವಿನಯ, ಸಭ್ಯತೆ ಹಾಗೂ ನಿಸ್ವಾರ್ಥ ಕಾಯಕವನ್ನು ಎಲ್ಲರೂ ಬೆಳೆಸಿಕೊಂಡು ಹೋಗಬೇಕೆಂದು ಸಾನ್ನಿಧ್ಯ ವಹಿಸಿದ್ದ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.
ಹೊಸ ಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರು ಮಾತನಾಡಿ, ಹೂಗಾರ ಸಮಾಜದ ಎಲ್ಲಾ ಸದಸ್ಯರು ಸಹಕಾರ ಸಹಬಾಳ್ವೆಯಿಂದ ಆದರ್ಶ ಬದುಕು ಸಾಗಿಸುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದ ಅಧ್ಯಕ್ಷರಾದ ಚಿದಾನಂದ ಮ ಹೂಗಾರ ರವರು ಹೂಗಾರ, ಗುರವ, ಪೂಜಾರ ಮತ್ತು ಜೀರ ಸಮುದಾಯದ ಜನರು ಹೂ,ಪತ್ರಿ ನೀಡುವ ನಿಷ್ಕಾಮ ಕಾಯಕದ ಜೊತೆಗೆ ಹೂಗಾರ ಸಮಾಜದ ಪೀಳಿಗೆಗೆ ಶಿಕ್ಷಣ ಅವಶ್ಯಕವಾಗಿದೆ. ಮಠ ಮಂದಿರಗಳ ಪೂಜೆಯ ಜೊತೆಗೆ ಮಕ್ಕಳಿಗೆ ವೇದಾಧ್ಯಯನ, ಉತ್ತಮ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಧುರೀಣರಾದ ರಾಮಣ್ಣ ಹುಕ್ಕೇರಿ ಅವರು ಮಾತನಾಡಿ, ಘಟಪ್ರಭಾದಲ್ಲಿ ಯಾವದೇ ಧಾರ್ಮಿಕ ಕಾರ್ಯಕ್ರಮವಾದರೂ ಹೂಗಾರ ಸಮಾಜ ಭಾಂದವರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಾದ ಸುರೇಶ ಪಾಟೀಲ, ಅವರು ಮಾತನಾಡಿ ಹೂಗಾರ ಸಮಾಜದವರು ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ದೇಶಭಕ್ತಿ ಹಾಗೂ ಸಂಗೀತ ಭಜನೆ ಇತ್ಯಾದಿ ಕಾರ್ಯಗಳಲ್ಲಿಯೂ ಸಹ ನಿಪುಣರಾಗಿದ್ದಾರೆ.ಇದು ಅಭಿಮಾನ ಪೂರ್ಣವಾದ ವಿಷಯ ಎಂದರು.
ವೇದಿಕೆಯಲ್ಲಿ ಗೋಕಾಕ – ಮೂಡಲಗಿ ತಾಲೂಕಿನ ಹೂಗಾರ ಸಮಾಜದ ಅಧ್ಯಕ್ಷರಾದ ಮಾರುತಿ ಬಸಪ್ಪ ಹೂಗಾರ ರವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ, ಮಹಾದೇವ ದೇಶಪಾಂಡೆ, ಅಲ್ಲಪ್ಪಾ ಹುಕ್ಕೇರಿ ಮತ್ತು
ಹೂಗಾರ ಸಮಾಜದ ಮುಖಂಡರಾದ ವೀರಭದ್ರ ಹೂಗಾರ, ಕಾಡೇಶ ಹೂಗಾರ,ಗುರು ಬಸಯ್ಯಾ ಹೂಗಾರ, ಶಂಕರ ಹೂಗಾರ, ಭೀಮಶೆಪ್ಪ ಹೂಗಾರ, ಚಂದ್ರಕಾಂತ ಹೂಗಾರ,ಸದಾನಂದ ಹೂಗಾರ ಗೋಕಾಕ- ಮೂಡಲಗಿ ತಾಲೂಕಿನ ಹೂಗಾರ ಸಮಾಜದ ಬಾಂಧವರು ಮತ್ತು ಮುಖಂಡರು ಅಪಾರ ಪ್ರಮಾಣದ ಜನರು ಉಪಸ್ಥಿತರಿದ್ದರು.
ಗುರುಬಸಯ್ಯ ಕರ್ಪೂರಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಪತ್ರಕರ್ತ ವಿವೇಕಾನಂದ ಹೂಗಾರ ವಂದಿಸಿದರು.

