ಕನ್ನಡ ಬರಿ ಭಾಷೆಯಲ್ಲ ಅದು ನಮ್ಮೆದೆಯ ಸುಧೆಯು-ಕದಂಬ ಸೈನ್ಯ ಕವಿಗೋಷ್ಠಿ

Must Read

ಕದಂಬ ಚಕ್ರವರ್ತಿ ಮಯೂರವರ್ಮ ಸ್ಫೂರ್ತಿಯಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯನ್ನು ಸ್ಥಾಪಿಸಿ ರಾಜ್ಯಾಧ್ಯಕ್ಷರಾಗಿರುವ ಮಂಡ್ಯದ ಬೇಕ್ರಿ ರಮೇಶ್ ಅವರು ಮಂಡ್ಯದ ಆರ್.ಎಸ್.ಹೇಮಂತರಾಜ್ ಸಂಪಾದಕತ್ವದ ಕದಂಬವಾಣಿ ದಿನಪತ್ರಿಕೆ ಸಹಕಾರದಲ್ಲಿ ಶ್ರೀರಂಗಪಟ್ಟಣದ ಪೂರ್ವವಾಹಿನಿ ಕಾವೇರಿ ನದಿ ದಡದ ಶ್ರೀಕ್ಷೇತ್ರ ಚಂದ್ರವನ ಆಶ್ರಮದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಿದ್ದರು.

ಅದು ಕನ್ನಡ ನಾಡು ನುಡಿ ಕುರಿತಾದ ಕವಿಗೋಷ್ಠಿ. ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಕವಿಗಳು ಹೆಚ್ಚಿದ್ದರು. ಡಾ. ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳ ಆಶಿರ್ವಾದ ದಿವ್ಯ ಸಾನ್ನಿಧ್ಯದಲ್ಲಿ ಕವಿಗಳು ಕನ್ನಡ ನಾಡು ನುಡಿಯ ಕಾವ್ಯ ಸುಧೆ ಹರಿಸಿದರು.

ಹಾಸನದ ಕುಮಾರ ಛಲವಾದಿ ಕನ್ನಡ ಬರಿ ಭಾಷೆಯಲ್ಲ ಅದು ನಮ್ಮೆದೆಯ ಸುಧೆಯು, ಅದರೊಳಿದೆ ಸವಿಜೇನು ಮನ ತಣಿಸುವ ನಿಧಿಯು ಎನ್ನುತ್ತಾ, ಕನ್ನಡ ಭಾಷೆಯನ್ನು ಚಿನ್ನಕ್ಕೆ ಹೋಲಿಸಿದರು.

ಕವಿ ಗೊರೂರು ಅನಂತರಾಜು ಹಾಸನ ಜಿಲ್ಲೆಯ ಹಲ್ಮಿಡಿ ಶಾಸನ ಬೇಲೂರು ಶಿಲ್ಪವು ನಿತ್ಯನೂತನ..ಚೆಲುವ ಕನ್ನಡ ನಾಡು ವರ್ಣಿಸಿದರು. ಡಾ.ನ.ಗಂಗಾಧರಪ್ಪ ಮೈಸೂರು ಕದಂಬರ ಅನರ್ಘ್ಯ ರತ್ನ ತಾಳಗುಂದ ಶಾಸನ ವರಾಹನರಸಿಂಹಸ್ವಾಮಿ ವಿಗ್ರಹ ಚಿತ್ರ ಲಾಂಛನ.. ಕನ್ನಡ ಶಾಸನ ಉಲ್ಲೇಖಿಸಿದರು.

ಸು.ಶಿ.ಶಾಂತಕುಮಾರ್ ಹರವೆ ಅವರು ಅಣ್ಣ ಬಸವಣ್ಣನವರ ಕೂಡಲ ಸಂಗಮವಿದು ಕನ್ನಡ ಪುರಂದರ ದಾಸರ ಪಾವನ ಮಣ್ಣಿದು..ಕನ್ನಡ ನೆಲದಲ್ಲಿ ನಡೆದಾಡಿದ ದಾಸರು ಶರಣರ ಸ್ಮರಿಸಿದರು. ಗೊರೂರು ಜಮುನರು ಕಬ್ಬಿಗರ ಕಾವ್ಯಗಳ ತಿಳಿಗೊಳದಿ ಮೀಯು ಶಬ್ಧಗಳ ಬಂಡಾರ ಅರಿವಿನೋಳ್ ಹೊಯ್ಯು..ಕನ್ನಡ ಭಾಷೆ ಹಿರಿಮೆ ಸಾರಿದರು. ಬೇಲೂರು ರುದ್ರೇಶ್ ಬನ್ನೀ ಹರುಷದಿ ಎಳೆಯುವ ಕನ್ನಡದ ತೇರು ನನ್ನ ನೆಲವಿದುವೇ ಸ್ವರ್ಗದ ಹೆಬ್ಬಾಗಿಲು.. ಸ್ವರ್ಗದ ಬಾಗಿಲು ತಟ್ಟಿದರು. ಎಸ್.ಎಸ್.ಪುಟ್ಟೇಗೌಡರು ಕಬ್ಬಗಳ ಹಬ್ಬಗಳು ಮಬ್ಬು ಕಳೆವ ಧಾರ್ಮಿಕ ಕ್ಷೇತ್ರಗಳು ವೀರ ಕಥೆ ಹೇಳುವ ಚರಿತ್ರೆಯ ಕುರುಹುಗಳು.. ಚರಿತ್ರೆಯತ್ತ ಕಣ್ಣಾಯಿಸಿದರು. ಹಾನಗಲ್ ಚಂದ್ರಶೇಖರ್ ಅವರು ಅನಕೃ ಗೊರೂರರ ಕವಿ ಪುಂಗವರ ನಾಡು ಕುವೆಂಪು ಬೇಂದ್ರೆ ಮಾಸ್ತಿಯವರ ಹೆಮ್ಮೆಯ ನಾಡು.. ಸಾಹಿತಿಗಳನ್ನು ನೆನೆದರು.

ಸುಖಮಯವಾಗಿ ನಿಂತಿತ್ತು ವೀರ ಅರಸರ ಆಳ್ವಿಕೆಯ ಕಾಲ, ಈಗ ನಿಂತಿದೆ ಪ್ರತಿಯೊಬ್ಬರ ತಲೆಯ ಮೇಲೂ ಸಾಲ..ಹೀಗೆ ವಿಷಾದಿಸಿದವರು ಮಂಡ್ಯದ ಎಸ್.ಡಿ.ಮಹೇಶ್‌ಗೌಡ ಕನ್ನಡಿಗರಿಗೆ ಹಬ್ಬದ ವಾತಾವರಣ ಮಾಡೋಣ ಕನ್ನಡದ ದ್ವಜಾರೋಹಣ.. ಕನ್ನಡ ಭಾವುಟ ಹಾರಿಸಿದರು ದೇವರಹಳ್ಳಿ ಕೃಷ್ಣೇಗೌಡರು. ಮಧುಮಾಲತಿ ಬೇಲೂರು ಮೇಡಂ ದಿಕ್ಕುದಿಕ್ಕಲೂ ನಾಡು ನುಡಿಯ ಕೀರ್ತಿ ಸಿಂಚನ ಮಾರ್ಧನಿಸುತ್ತಿದೆ ಕರ್ಣಾಮೃತ ಕೋಟಿ ಕಂಠ ಗಾಯನ ಎನ್ನಲು ಹಾಸನದ ಜಿ.ಆರ್.ಶ್ರೀಕಾಂತ್ ಅವರು ತಮ್ಮ ಸುಮಧುರ ಕಂಠದಿಂದ ಬೆಳೆದಿದೆ ನೋಡ ಮೈಸೂರು ನಗರ ಕನ್ನಡ ಕವಿಗಳ ಮೆಚ್ಚಿನ ನಗರ..ಹಾಡು ಹೇಳಿ ರಂಜಿಸಿದರು. ಜೆ.ಕೆ.ಬಸವರಾಜು ಜಯಪುರ ನಾ ಕುಡಿಯುವುದು ಕೃಷ್ಣ ಕಾವೇರಿ ಜಲ- ನಾನಿರುವುದೇ ಭುವನೇಶ್ವರಿಯ ನೆಲ..ನೆಲಜಲ ಪ್ರೀತಿ ಅಭಿಮಾನ ವ್ಯಕ್ತಪಡಿಸಿದರು. ಮಂಡ್ಯದ ಸದ್ವಿದ್ಯಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೀಪ್ತಿ ಎಂ.ಎಸ್. ಪ್ರಜ್ಞಾ ಜಿ. ದಿಶಾ ಕೆ. ಭವಿಷ್ಯದ ಕವಿಗಳಾಗಿ ಗೋಚರಿಸಿದರು. ಟಿ.ನರಸೀಪುರದ ಶಿಕ್ಷಕರು ಬಸವೇಶ್ ಎಸ್., ಚನ್ನರಾಯಪಟ್ಟಣ ಕನ್ನಡ ಉಪನ್ಯಾಸಕಕರು ಹಿಮಜ, ಉದ್ದೂರು ಪಿ. ರಾಜು, ಸಾವಿತ್ರಮ್ಮ ಓಂಕಾರ್, ಕಲಬುರಗಿಯ ಮೌನೇಶ್, ಜೆ.ಕೆ. ಮಳವಳ್ಳಿಯ ಚೈತನ್ಯ ಸಿ.ಜಿ. ಮಂಡ್ಯ ತಾ. ದ್ಯಾಪಸಂದ್ರದ ಡಿ.ಕೆ.ರಾಮಯ್ಯ, ಜಯಪುರದ ಜೆ.ಬಿ.ಜಯರಾಮು, ಚೌಡಯ್ಯ ಸಿ. ದೇವಿಪುರ, ಹಾವೇರಿಯ ಶೈಲಜಾ ಎಂ ಕೋರಿಶೆಟ್ಟರ್ ಮತ್ತು ರವೀಂದ್ರ ಕುಮಾರ್ ಜಿ. ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಇತರರು. ಕವಯಿತ್ರಿ ಕಲಾವಿದೆ ಸಾವಿತ್ರಮ್ಮ ಓಂಕಾರ್ ಅವರು ತಮ್ಮ ಚಿತ್ರರಚನೆಯನ್ನು ಸಭಾಂಗಣದಲ್ಲಿ ಪ್ರದರ್ಶಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group