ಜಗತ್ತಿಗೆ ಸಮಾನತೆ ಕಲಿಸಿಕೊಟ್ಟ ಭಾಷೆ ಕನ್ನಡ : ಅಶೋಕ ಮನಗೂಳಿ

Must Read

ಸಿಂದಗಿ: ಅನ್ಯ ಭಾಷೆಗಳ ವ್ಯಾಮೋಹದಿಂದಾಗಿ ಜಗತ್ತಿಗೆ ಸಮಾನತೆ, ಮಾನವೀಯತೆ ಹಾಗೂ ಶ್ರೇಷ್ಠ ಜೀವನ ಮೌಲ್ಯವನ್ನು ಕಲಿಸಿಕೊಟ್ಟ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಮೆರುಗು ಕಡಿಮೆಯಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಜ್ಯೋತಿ ನಗರದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ್ ಬೋರಗಿ, ಮಂದಾರ ಪ್ರತಿಷ್ಠಾನ ಸಿಂದಗಿ ಹಾಗೂ ಶಾಫಿಯಾ ಪ್ರಕಾಶನ ಆಲಮೇಲ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಮೇಲೆ, ಅಭಿಮಾನ ಮೂಡಿದಾಗ ಮಾತ್ರ ಕನ್ನಡ ಭಾಷೆ ಉಚ್ಛ್ರಾಯ ಸ್ಥಿತಿಗೆ ತಲುಪಲು ಸಾಧ್ಯ ಎಂದರು. 

ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಭಾಷೆಗೆ ತನ್ನದೆಯಾದ ಸಂಪತ್ಭರಿತ ಸಾಂಸ್ಕೃತಿಕ ಇತಿಹಾಸ ಹೊಂದಿದೆ ಹೀಗಾಗಿಯೇ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿವೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು ಸಿದ್ಧಾಪುರ ಮಾತನಾಡಿ, ಪಾಶ್ಚಿಮಾತ್ಯ ಭಾಷೆಯ ಭರಾಟೆ ಅಧಿಕಗೊಳ್ಳುತ್ತಿದ್ದಂತೆ ನಾವು ಕನ್ನಡ ನಮ್ಮ ಭಾಷೆ ಎನ್ನುವುದನ್ನೆ ಮರೆತು ಬಿಟ್ಟಿದ್ದೇವೆ ಹೀಗಾಗಿ ಕರ್ನಾಟಕದಲ್ಲೇ ಕನ್ನಡ ಭಾಷೆ ಅವನತಿಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಸವರಾಜ ಡಂಬಳ, ಚಿದಾನಂದ ಪಾಟೀಲ್, ಅಪ್ಪಾಲಾಲ್ ನದಾಫ್, ಜಾಕೀರ ಹುಸೇನ್ ಬಗಲಿ, ಎಸ್ ಬಿ.ಗಾಲಿಬವಾಲೆ, ಸಿದ್ಧಲಿಂಗ ಕ್ಷೇಮಶೆಟ್ಟಿ, ರವಿ ನಾಯ್ಕೋಡಿ, ಅಶೋಕ ಭೂಸನೂರ, ಗುರುರಾಜ ಆಕಳವಾಡಿ, ಶಿವಶಂಕರ ಮಾಶ್ಯಾಳ, ನಿಂಗಣ್ಣ ಸಾತಿಹಾಳ, ವಿಶ್ವಪ್ರಕಾಶ ಮಲಗೊಂಡ ಇವರಿಗೆ ಸುವರ್ಣ ಕರ್ನಾಟಕ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಕ್ಕಳ ಸಾಹಿತಿ ಪು.ಗು ಸಿದ್ಧಾಪುರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆಯ ಮೇಲೆ ಸಿಂದಗಿ ವೃತ್ತ ನಿರೀಕ್ಷಕ ಡಿ.ಹುಲಗಪ್ಪ, ಆರಕ್ಷಕ ಮೌಲಾಲಿ ಆಲಗೂರ, ಡಾ.ಸಮೀರ ಹಾದಿಮನಿ, ಮಡಿವಾಳಪ್ಪ ಪಾಟೀಲ್, ಶಕುಂತಲಾ ಹಿರೇಮಠ, ನಬಿ ಆಲಗೂರ, ನಬಿ ಸೊನ್ನೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

ಇದೇ ವೇಳೆ ಇಪ್ಪತೈದಕ್ಕೂ ಅಧಿಕ ಕವಿಗಳು ತಮ್ಮ ಕವನ ವಾಚನ ಮಾಡಿದರು. 

ಜಿ.ಪಿ. ಬಿರಾದಾರ ಸ್ವಾಗತಿಸಿದರು, ಬಸವರಾಜ ಅಗಸರ ವಂದಿಸಿದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group