Homeಸುದ್ದಿಗಳುಕುಮಟಾ ಕನ್ನಡ ಸಂಘದಿಂದ "ಕನ್ನಡದ ಕ್ರಾಂತ ನೆಲ" ಕೃತಿ ಲೋಕಾರ್ಪಣೆ

ಕುಮಟಾ ಕನ್ನಡ ಸಂಘದಿಂದ “ಕನ್ನಡದ ಕ್ರಾಂತ ನೆಲ” ಕೃತಿ ಲೋಕಾರ್ಪಣೆ

ಕುಮಟಾ: ಬದುಕೆ ಬರಹ ಎನ್ನುವ ರೀತಿಯಲ್ಲಿ ಕನ್ನಡಿಗರು ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಮಾಸ್ಕೇರಿ ಎಮ್ ಕೆ ನಾಯಕರವರೆ ಸಾಕ್ಷಿ ಎಂದು ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ ಹೇಳಿದರು.

ಭಾನುವಾರ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕುಮಟಾ ಕನ್ನಡ ಸಂಘ ದಿಂದ ನಡೆದ ನಾಡಿನ ಹಿರಿಯ ಕವಿ ಮಾಸ್ಕೇರಿ ಎಮ್ ಕೆ ನಾಯಕರವರ ‘ಕನ್ನಡದ ಕ್ರಾಂತ ನೆಲ’ ಸಂಗ್ರಹ ಲೇಖನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕನ್ನಡಿಗರು ಓದಲೇಬೇಕಂತಿಲ್ಲ ಸಹಜವಾಗಿಯೆ ಬರೆಯಬಲ್ಲರು ಸಾಹಿತ್ಯಕ್ಕೂ ಬರಹಕ್ಕೂ ಯಾವುದೇ ವ್ಯತ್ಯಾಸವಿಲ್ಲ.ಕನ್ನಡಿಗರಿಗೆ ಬದುಕೇ ಬರಹ, ಬರಹವೇ ಬದುಕು ಎನ್ನುವಂತಾಗಿದೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳು ಹಾಗೂ ಸುತ್ತಲಿನ ಪರಿಸರದಲ್ಲಿ ನಿತ್ಯ ಕಾಣುವ ಸಂಗತಿಗಳೆ ಬರಹಗಾರರಿಗೆ ಸ್ಫೂರ್ತಿಯ ಸೆಲೆ ಹೀಗಾಗಿ ಕನ್ನಡದಲ್ಲಿ ವಿಶಿಷ್ಟ ಉತ್ತಮ ಗ್ರಂಥಗಳು ಪ್ರಕಟಗೊಳ್ಳಲು ಸಾಧ್ಯವಾಯಿತು.

ಆದಿ ಕವಿ ಪಂಪ ನೆಲೆಸಿದ್ದು ನಮ್ಮ ಬನವಾಸಿಯಲ್ಲಿ. ಮತ್ತೊಮ್ಮೆ ಹುಟ್ಟುವೆನಾದರೆ ಬನವಾಸಿಯಲ್ಲೇ ಹುಟ್ಟುವೆ ಎನ್ನುವ ಪಂಪನ ಆಶಯದಂತೆ ನಮ್ಮ ಜಿಲ್ಲೆ ಕನ್ನಡದ ಗಂಡು ಮೆಟ್ಟಿನ ಜಿಲ್ಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಕುಮಟಾ ಕನ್ನಡ ಸಂಘದ ನೆರಳಿನಲ್ಲಿ ಮಾಸ್ಕೇರಿ ಎಮ್ ಕೆ ನಾಯಕರವರ ” ಕನ್ನಡದ ಕ್ರಾಂತ ನೆಲ ” ಬಿಡುಗಡೆ ಮಾಡಲು ಸಂತೋಷವೆನಿಸುತ್ತಿದೆ.

ಜಿಲ್ಲೆಯ ಹಿರಿಕಿರಿಯ ಸಾಹಿತಿಗಳ ಪುಸ್ತಕಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸಲು ಪ್ರೇರಣೆ ನೀಡುವ ಮಹತ್ಕಾರ್ಯ ಮಾಡುತ್ತಿರುವ ಕುಮಟಾ ಸಂಘದ ಕಾರ್ಯ ಶ್ಲಾಘನೀಯ. ಇನ್ನಷ್ಟು ಇಂಥ ಕೃತಿಗಳು ಲೋಕಾರ್ಪಣೆಗೊಳ್ಳುವ ಮೂಲಕ ಕುಮಟಾದ ಹೆಸರು ಸ್ಥಿರಸ್ಥಾಯಿಯಾಗಿರುವಂತಾಗಲಿ. ಮಾಸ್ಕೇರಿ ನಾಯಕರವರ ಇನ್ನಷ್ಟು ಕೃತಿಗಳು ಪ್ರಕಟವಾಗಿ ನಾಡಿನೆಲ್ಲೆಡೆ ಪಸರಿಸುವಂತಾಗಲಿ ಎಂದು ಹಾರೈಸಿದರು.

ಕೃತಿ ಕರ್ತ ಹಿರಿಯ ಕವಿ ಮಾಸ್ಕೇರಿ ಎಮ್ ಕೆ ನಾಯಕ ಮಾತನಾಡಿ, ಹುಟ್ಟೂರಲ್ಲಿ ಸಾಹಿತಿಯೊಬ್ಬರ ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ಕವಿಗೊಂದು ಅವಿಸ್ಮರಣೀಯ ಕ್ಷಣ. ಹಲವು ನಿರೀಕ್ಷೆಗಳೊಂದಿಗೆ ಸಿದ್ಧಪಡಿಸಿದ “ಕನ್ನಡ ಕ್ರಾಂತ ನೆಲ ‘ಕೃತಿ ಕುಮಟಾ ಕನ್ನಡ ಸಂಘದಿಂದ ಕುಮಟಾ ನೆಲದಲ್ಲಿ ಅನಾವರಣಗೊಂಡಿರುವುದು ಸಂತಸ ತಂದಿದೆ. ಬರಹಗಾರ, ಸಾಹಿತಿಗಳಿಗಿಂತ ಸಂಘಟಕ ಮೇಲ್ಪಂಕ್ತಿಯಲ್ಲಿರುತ್ತಾರೆ. ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸುವುದು ಸಾಮಾನ್ಯ ಮಾತಲ್ಲ. ಈ ದಿಸೆಯಲ್ಲಿ ಕುಮಟಾ ಕನ್ನಡ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯ ಸರ್ವೋತೋಮುಖ ಏಳ್ಗೆಗಾಗಿ ಮೈದಳೆದ ನಮ್ಮ ಸಂಘ ತೆರೆಮರೆಯಲ್ಲಿರುವ ನಾಡಿನ ಹಿರಿ, ಕಿರಿಯ ಕವಿಗಳ ಕೃತಿಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾರ್ಯವನ್ನು ನಿರಂತರವಾಗಿ ಮುನ್ನಡೆಸುವ ಆಶಯ ಹೊಂದಿದ್ದು ಪ್ರತಿಯೊಬ್ಬರು ಸಹಕಾರ ನೀಡಬೇಕು. ಬರಲಿರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಪರಂಪರೆ ಹುಟ್ಟು ಹಾಕಲು ಪ್ರಯತ್ನಿಸಲಾಗುವುದು ಎಂದರು.

ಡಾ. ಎಮ್ ಆರ್ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣೇಶ ಪಟಗಾರ. ಹಿರಿಯ ಪತ್ರಕರ್ತ ಎಮ್ ಜಿ ನಾಯ್ಕ. ಎಮ್ ಜಿ ಭಟ್ ಸಂಘದಉಪಾಧ್ಯಕ್ಷ ನಿತೀನ್ ಗೌರಯ್ಯ,ಸದಸ್ಯರಾದ ದಯಾನಂದ ದೇಶಭಂಡಾರಿ. ಬಾಬು ಎಮ್ ನಾಯ್ಕ. ಮಂಗಲದಾಸನಾಯ್ಕ, ಜಯಾ ಶೇಟ್. ಮೋಹಿನಿ ಗೌಡ, ಗೀತಾ ಮುಕ್ರಿ ಇನ್ನಿತರರು ಇದ್ದರು.

ಸಂಘದ ಸಂಚಾಲಕ ಸಾಹಿತಿ ತಿಗಣೇಶ್ ಮಾಗೋಡ ಕೃತಿ ಪರಿಚಯಿಸಿದರು. ಕೋಶಾಧ್ಯಕ್ಷ ಆರ್ ಎನ್ ಹೆಗಡೆ ಸ್ವಾಗತಿಸಿ, ಆಶಯ ನುಡಿಗಳನ್ನಾಡಿದರು.ಕುಮಾರಿ ಶ್ರದ್ದಾ ಎಸ್ ಎನ್ ಪ್ರಾರ್ಥಿಸಿದರು. ಸಂಘದ ಸದಸ್ಯೆ ರಾಘವಿ ನಾಯಕ ನಿರೂಪಿಸಿದರು.ಮುಂಜುನಾಥ ಗಾಂವಕರ ಬರ್ಗಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group