ನಮ್ಮ ಕನ್ನಡ ಸಾರಸ್ವತ ಭೂಮಿಯು ಯಾವತ್ತೂ ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ ಎಂದು ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನ ಕಾರ್ಯಾಗಾರ’ವನ್ನು ಅಂತರ್ಜಾಲದ ಜೂಮ್ ವೇದಿಕೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಶೋಧನೆ ಎಂದರೆ ಹುಡುಗಾಟವಲ್ಲ; ಅದು ನಿರಂತರವಾಗಿ ನಡೆಸಬೇಕಾದ ಹುಡುಕಾಟ. ಸಂಶೋಧನೆಗಿರುವುದು ಬೆವರಿನ ದಾರಿಯೇ ಹೊರತು ಯಾವುದೇ ಅಡ್ಡದಾರಿಗಳಿಲ್ಲ. ಶಿಸ್ತುಬದ್ಧವಾದ ಪೂರ್ವ ತಯಾರಿ, ಸತತ ಅಭ್ಯಾಸ, ವ್ಯಾಪಕವಾದ ಅಧ್ಯಯನವು ಸಂಶೋಧನೆಗೆ ಅತ್ಯವಶ್ಯಕ. ಭಾಷಾವಿಜ್ಞಾನದ ಅರಿವಿನೊಂದಿಗೆ ಸ್ವಭಾಷಾ ಜ್ಞಾನವೂ ಇರಬೇಕು. ಆಯ್ಕೆ ಮಾಡಿಕೊಳ್ಳುವ ವಸ್ತುವನ್ನು ಕುರಿತು ಈಗಾಗಲೇ ನಡೆದಿರುವ ಸಂಶೋಧನೆಯನ್ನು ಪರಾಮರ್ಶೆ ಮಾಡುವುದು ಔಚಿತ್ಯಪೂರ್ಣವಾದುದು. ಪೂರ್ವಸೂರಿಗಳ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಮುನ್ನಡೆದು ಸ್ವೋಪಜ್ಞತೆಯಿಂದ ಹೊಸತಾದ ಸಂಶೋಧನೆಯನ್ನು ಕೈಗೊಳ್ಳಬೇಕು. ಹೇಳಿದ್ದನ್ನೇ ಹೇಳಿದರೆ ಸಂಶೋಧನೆಯಾಗದು. ಹಳೆ ಮಾತಿಗೆ ಹೊಸಮಾತನ್ನು ಕೂಡಿಸಿದರೆ ಕರಿಮೋಡಕ್ಕೆ ಬಿಳಿಚೌಕಟ್ಟು ಕಟ್ಟಿದಂತಾಗುತ್ತದೆ ಎಂದರು.
ಇಂದಿನ ಯುವಸಮುದಾಯವು ಸೃಜನಶೀಲ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಸಂಶೋಧನ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಇಂದು ದೊಡ್ಡ ದೊಡ್ಡ ವಿದ್ವಾಂಸರ ಬರಗಾಲ ಬಂದಿದೆ ಎಂದುಕೊಳ್ಳಬಾರದು. ಈಗಿನ ಹೊಸ ತಲೆಮಾರಿನ ಸಂಶೋಧಕರೇ ದೊಡ್ಡ ವಿದ್ವಾಂಸರಾಗಿ ರೂಪುಗೊಳ್ಳಬೇಕು. ಹಿಂದಿನ ಅನೇಕ ವಿದ್ವಾಂಸರ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಅನುಸರಿಸಿ ಪುನರವಲೋಕನ ಮಾಡುವ ಮೂಲಕ ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡದ ಆದಿಕವಿಯಾದ ಪಂಪನು ಸಂಸ್ಕೃತ ಮೂಲದ ಮಹಾಭಾರತವನ್ನು ಮೊಟ್ಟಮೊದಲ ಬಾರಿಗೆ ತರುವಾದ ಪ್ರಾದೇಶಿಕ ಭಾಷೆಗಲ್ಲಿ ಒಂದಾದ ಕನ್ನಡಕ್ಕೆ ತಕ್ಕುದಾಗಿ ಪುನರ್ ಸೃಷ್ಠಿ ಮಾಡಿದನೇ ಹೊರತು ಯಥಾವತ್ತು ಅನುಸೃಷ್ಟಿ ಮಾಡಲಿಲ್ಲ. ಪಂಪನ ಸೃಜನಶೀಲ ಪ್ರತಿಭಾ ವ್ಯಕ್ತಿತ್ವದಿಂದ ಮೂಡಿಬಂದ ಪಂಪಭಾರತವು ತದನಂತರ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಹಾಭಾರತಗಳ ಸೃಷ್ಟಿಗೆ ಪ್ರೇರಣೆಯಾಯ್ತು. ತೆಲುಗಿನಲ್ಲಿ ನನ್ನಯ, ಎರ್ರನ, ತಿಕ್ಕನರ ಭಾರತಗಳು ಮೂಡಿಬಂದವು. ಪಂಪನು ಕನ್ನಡದ ಆದಿಕವಿಯಾದಂತೆ, ಆತನ ತಮ್ಮನಾದ ಜಿನವಲ್ಲಭನು ತೆಲುಗಿನ ಆದಿಕವಿಯೇ ಆಗಿದ್ದಾನೆ. ಯಾಕೆಂದರೆ ತಾಯಿ ಭಾಷೆಯಾದ ಕನ್ನಡದಲ್ಲಿ ಪಂಪ ಬರೆದರೆ, ತಂದೆ ಭಾಷೆಯಾದ ತೆಲುಗಿನಲ್ಲಿ ಜಿನವಲ್ಲಭನು ಕಾವ್ಯ ನೀಡುವ ಮೂಲಕ ಕನ್ನಡ ಹಾಗೂ ತೆಲುಗಿಗೆ ತನ್ನದೇ ಆದ ಅಮೂಲ್ಯ ಕಾಣಿಕೆ ನೀಡಿದ್ದಾನೆ. ಪಂಪನ ಮಹಾಕಾವ್ಯಗಳನ್ನು ಇತರ ಪ್ರಾದೇಶಿಕ ಹಾಗೂ ಜಾಗತಿಕ ಮಹಾಕಾವ್ಯಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆಶಯ ಮಾತುಗಳನ್ನಾಡಿದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರೂ ಆದ ಫಾ.ಡಾ.ಜೋಶಿ ಮ್ಯಾಥ್ಯೂ ಅವರು, ಸಂಶೋಧನೆ ಎಂಬುದು ನಿರಂತರ ಹುಡುಕಾಟದ ಮೂಲಕ ನಿಚ್ಚಂಪೊಸತಾಗಿ ಮೂಡುವ ಲೋಕದ ಬೆಳಗು. ಕನ್ನಡ ಸಂಶೋಧನ ಚರಿತ್ರೆಯಲ್ಲಿ ವಿದ್ವನ್ಮಣಿಗಳಾಗಿ ಬೆಳಗಿದ ಹಿಂದಿನ ಸಂಶೋಧಕ ದೀಪಗಳನ್ನು ಇಂದಿನ ಸಂಶೋಧಕರು ತಮ್ಮೊಳಗೆ ಅಂತಸ್ಥ ಮಾಡಿಕೊಂಡು ಸಾಗಬೇಕಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ.ಎನ್.ಕೆ.ಲೋಲಾಕ್ಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನರಾದ ಡಾ.ಎ.ವಿ.ಗೋಪಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್. ಅವರು ವಂದಿಸಿದರು. ಕಾರ್ಯಾಗಾರದ ಸಂಯೋಜಕರಾದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಭೈರಪ್ಪ ಅವರು ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಹೆಚ್.ಜಿ. ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.