ಬಾಗಲಕೋಟೆ -ಮಕ್ಕಳ ಸಾಹಿತ್ಯಕ್ಕೆ ಪ್ರತ್ಯೇಕ ಅಂಕಣ ಮೀಸಲಿಟ್ಟು ಅದರ ಬೆಳವಣಿಗೆಗೆ ಸಹಕರಿಸುತ್ತಿರುವ ಪತ್ರಿಕೆಗಳ ಕಾರ್ಯ ಅತ್ಯಂತ ಶ್ಲಾಘನೀಯವಾದುದು ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ ಜಯಶ್ರೀ ಭಂಡಾರಿ ಹೇಳಿದರು.
ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನಲ್ಲಿ ಸ್ಥಳೀಯ ಆದರ್ಶ ವಿದ್ಯಾವರ್ಧಕ ಸಂಘ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮದ ಸಹಯೋಗದಲ್ಲಿ ಮಂಗಳವಾರ ಜರುಗಿದಬಾಗಲಕೋಟೆ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷಭಾಷಣ ಮಾಡಿದ ಅವರು, ನಾಡಿನ ಅನೇಕ ಪತ್ರಿಕೆಗಳು ಮಕ್ಕಳ ಸಾಹಿತ್ಯಕ್ಕೆ ಕುರಿತಾದ ಲೇಖನ, ಮಕ್ಕಳ ಚಿತ್ರ, ಕಥೆ, ಕವನ, ವಿಡಂಬಣೆ. ಮುಂತಾದ ಚಟುವಟಿಕೆಗಳನ್ನು ಪ್ರತ್ಯೇಕ ಆಂಕಣಗಳಲ್ಲಿ ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿವೆ ಎಂದರು.
ಮಕ್ಕಳ ಸಾಹಿತ್ಯದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಅವಕಾಶ ಪತ್ರಿಕೆಗಳಿಂದ ದೊರೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳೂ ಸಹ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದ ಭಂಡಾರಿ, ಮಕ್ಕಳ ಸಾಹಿತ್ಯದಲ್ಲಿ ಸಂಸ್ಕೃತಿ. ಶಿಕ್ಷಣ, ಕುಟುಂಬ ಹಾಗೂ ಪರಿಸರದ ಪ್ರಭಾವ ತಿಳಿಸುವ ವಿಷಯ ಅಡಗಿರಬೇಕು ಎಂದು ಹೇಳಿದರು.
ಇಂದಿನ ಮೊಬೈಲ್ ಸಂಸ್ಕೃತಿಯಲ್ಲಿ ಹೆತ್ತವರ ಮಾತನ್ನು ಸಹ ಕೇಳದ ಸ್ಥಿತಿಯಲ್ಲಿರುವ ಮಕ್ಕಳ ಮನಸ್ಸನ್ನು ಪರಿವರ್ತಿಸುವ ನಿಟ್ಟಿನಲ್ಲಿ ಅವರಿಗೆ ಸೂಕ್ತಮಾರ್ಗದರ್ಶನ ಮಾಡುವ ಸಾಹಿತ್ಯ ರಚನೆಯಾಗಬೇಕಿದೆ. ಆ ಮೂಲಕ ಮಕ್ಕಳನ್ನು ತಿದ್ದಿ. ತಿಳುವಳಿಕೆ ನೀಡಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನಾಗಿ ನೀಡುವಂತಾಗಬೇಕಾದ ಆಗತ್ಯತೆಯಿದೆ ಎಂದು ಜಯಶ್ರೀ ಭಂಡಾರಿ ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಬೇವೂರ ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಕೀಲ ಜಿ.ಜಿ.ಮಾಗನೂರ, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯ ಶಿಕ್ಷಣವೇ ಇರಬೇಕು. ಸರ್ಕಾರ ಇಂಗ್ಲೀಷ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದಕ್ಕೆ ಕಡಿವಾಣ ಹಾಕುವುದಕ್ಕೆ ಇಂತಹ ಸಮ್ಮೇಳನಗಳು ಬೆಳಕು ಚೆಲ್ಲಬೇಕು. ಅಂದಾಗ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ವೈದ್ಯ ಡಾ.ಎಚ್.ಎಫ್. ಯೋಗಪ್ಪನವರ ಮಾತನಾಡಿ, ಮಕ್ಕಳ ಸಾಹಿತ್ಯ ಅವಶ್ಯವಾಗಿ ಬೇಕು. ಅದು ಅವರ ಬುದ್ಧಿಮಟ್ಟ ಮತ್ತು ಅವಶ್ಯಕತೆಗನುಗುಣವಾಗಿ ರಚಿತವಾಗಿರಬೇಕು. ಮೊಬೈಲ್ ಸಂಸ್ಕೃತಿಯಿಂದಾಗಿ ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ರೂರತೆಯನ್ನು ತೊಡೆದು ಹಾಕಿ ಅವರಲ್ಲಿ ವಿವೇಕ, ವಿನಯತೆ ಕಲಿಸುವ ಸಾಹಿತ್ಯ ಹೊರಬರಬೇಕು ಎಂದರು.
ಇನ್ನೋರ್ವ ಅತಿಥಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಾಮನಿರ್ದೇಶನ ಸದಸ್ಯ ಜಿ.ಕೆ. ತಳವಾರ, ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯವೇ ಇಲ್ಲ ಎನ್ನುವ ಮನೋಭಾವ ದೂರವಾಗಬೇಕು. ಮಕ್ಕಳ ಕುರಿತು ಬರೆಯುವಲೇಖಕರನ್ನು ಸಾಹಿತಿಗಳು ” ಎಂದು ಪರಿಗಣಿಸುವಂತಾಗಬೇಕು ಎಂದು ಹೇಳಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಮಾತನಾಡಿದರು.ಶ್ರೀ ಗ್ಯಾನಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ಮಕ್ಕಳ ಸಾಹಿತ್ಯ ಸಮಾಗಮದ ಜಿಲ್ಲಾ ಅಧ್ಯಕ್ಷ ಗುರುಸ್ವಾಮಿ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಫರೀದಾ ಗುರಗುನ್ನಿ, ಪ್ರಾಚಾರ್ಯ ವಿ.ಬಿ.ಅರಹುಣಸಿ, ಮುಖ್ಯಾಧ್ಯಾಪಕ ಯೋಗೇಶ ಲಮಾಣಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರು ನಾಡಗೀತೆ-ಹಾಡಿದರು. ತಾಲ್ಲೂಕು ಮಕ್ಕಳ ಸಾಹಿತ್ಯ ಸಮಾಗಮದ ಅಧ್ಯಕ್ಷಎಸ್. ಆರ್.ಪಟ್ಟಣಶೆಟ್ಟಿ ಸ್ವಾಗತಿಸಿದರು. ಸಮಾಗಮದ ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್.ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನುಟಗಿ ನಿರೂಪಿಸಿದರು. . ನಾಗರಾಜ ವಿರೇಶ ಪೂಜಾರಿ ವಂದಿಸಿದರು.

