Homeಸುದ್ದಿಗಳುಒಂದು ಪತ್ರ: ಯಲ್ಲಮ್ಮಾ ದೇವಸ್ಥಾನ ಪರಿಸರ ಶುಚಿಯಾಗಿರಿಸಿ

ಒಂದು ಪತ್ರ: ಯಲ್ಲಮ್ಮಾ ದೇವಸ್ಥಾನ ಪರಿಸರ ಶುಚಿಯಾಗಿರಿಸಿ

ಉತ್ತರ ಕರ್ನಾಟಕದ ಪ್ರಸಿದ್ಧ ಪವಿತ್ರ ಕ್ಷೇತ್ರ ಸವದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವಿಯ ದರ್ಶನ ಪಡೆದ ನಂತರ ದೇವಸ್ಥಾನದ ಆವರಣದಲ್ಲಿ ಸ್ವಲ್ಪ ತಿರುಗಾಡಿದರೆ ಸಾಕು ಶ್ರೀ ರೇಣುಕ ದೇವಿ ದರ್ಶನದ ಸುಖವೇ ಮಾಯವಾಗಿ ಅಲ್ಲಿನ ಹೊಲಸಿನಿಂದಾಗಿ ಹೊಟ್ಟೆ ತೊಳಸಿದಂತಾಗಿ ವಾಕರಿಕೆ ಬರುತ್ತದೆ.

ಎಲ್ಲಿ ನೋಡಿದಲ್ಲಿ ಪ್ಲಾಸ್ಟಿಕ್ ಕಸ, ಹಸಿರು ಕಸ, ಹೂವಿನ ಹಾರಗಳು,  ಪೂಜೆಯ ವಸ್ತುಗಳು,  ಉಪಯೋಗಿಸಿದ ಪಡಲಿಗೆ ಬುಟ್ಟಿಗಳು, ಕುಂಕುಮ ಭಂಡಾರ ಲೇಪಿತ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಪರಿಸರ ಗಬ್ಬೆದ್ದು ಹೋಗಿದೆ. ಸ್ವಲ್ಪ ಮಳೆಯಾದರಂತೂ ಮುಗಿಯಿತು. ಎಲ್ಲಾ ಕಡೆ ಬಣ್ಣಬಣ್ಣದ ರಾಡಿ ಕಾಲಿಗೆ, ಬಟ್ಟೆಗೆ ಬಳಿದುಕೊಂಡು ಆ ಪರಿಸರದ ಪಾವಿತ್ರ್ಯವೇ ಹಾಳಾಗಿ ಹೋಗುತ್ತದೆ. ಇನ್ನು ರೇಣುಕ ದೇವಿಯ ದೇವಸ್ಥಾನದಿಂದ ಸ್ವಲ್ಪ ದೂರ ಇರುವ ವಾತಾವರಣವಂತೂ ಇನ್ನೂ ಗಬ್ಬೆದ್ದು ಹೋಗಿದೆ. ಎಲ್ಲೆಂದರಲ್ಲಿ ಗಬ್ಬು ನಾತ, ಹಳ್ಳಿಗಳಿಂದ ಬಂದ ಜನರು ಅಲ್ಲಲ್ಲಿ ಅಡಿಗೆ ಮಾಡಿಕೊಳ್ಳುವುದರಿಂದ, ಅವರಿಗೆ ವ್ಯವಸ್ಥಿತ ಶೌಚಾಲಯ ಇಲ್ಲದ್ದರಿಂದ  ಒಂದು, ಎರಡು ಎಲ್ಲಾ  ಹೊರಗಡೆಯೇ ಆಗುವುದರಿಂದ ವಾತಾವರಣ ಹೊಲಸು ವಾಸನೆಯಿಂದ ತುಂಬಿರುತ್ತದೆ.

ಇಲ್ಲ, ಒಂದು ಪವಿತ್ರ ಕ್ಷೇತ್ರ ಅದರಲ್ಲೂ ಪ್ರತಿದಿನ ಸಾವಿರಾರು ಭಕ್ತರು ದೂರದೂರದಿಂದ ಬಂದು ಹೋಗುವ ಶಕ್ತಿದೇವತೆಯ ಕ್ಷೇತ್ರ…..ಉತ್ತರ ಕರ್ನಾಟಕದಲ್ಲಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧವಾಗಿರುವ ಕ್ಷೇತ್ರ,….ಕೋಟ್ಯಂತರ ರೂ.ಗಳ ಆದಾಯವಿರುವ ಕ್ಷೇತ್ರ ಹೀಗೆ ಇರಲೇಬಾರದು. ಸವದತ್ತಿ ದೇವಳದ ಸುತ್ತಮುತ್ತಲಿನ ಹೊಲಸು ವಾತಾವರಣ ಇಂದು ನಿನ್ನೆಯದಲ್ಲ. ನಾವು ಚಿಕ್ಕವರಿದ್ದಾಗಿನಿಂದಲೂ ಇದೇ ರೀತಿಯ ವಾತಾವರಣ ಇದೆ. ಇಲ್ಲಿ ದೇವಿಯ ವಿಶೇಷ ದರ್ಶನಕ್ಕೆ ಹಣ ನಿಗದಿ ಮಾಡಲಾಗಿದೆ, ವಿವಿಧ ಸೇವೆಗಳಿಗೂ ಹಣ ನಿಗದಿ ಮಾಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಭಕ್ತರಿಂದ ದೇಣಿಗೆ ಬರುತ್ತದೆ ಆದರೆ ಆಡಳಿತ ಮಂಡಳಿ ಕ್ಷೇತ್ರದ ಸ್ವಚ್ಛತೆಗೆ ಗಮನಕೊಟ್ಟಿಲ್ಲ.

ಪ್ರತಿನಿತ್ಯ ಸಾವಿರಾರು ಜನರು ಬಂದು ಹೋಗುವ ಕ್ಷೇತ್ರವೆಂದರೆ ಸ್ವಚ್ಛವಾಗಿರುವುದು ಅತಿ ಅಗತ್ಯ. ಶುಚಿಯಿದ್ದರೆ ಆರೋಗ್ಯವಿರುತ್ತದೆ. ಭಕ್ತಿಯಿಂದ ಬಂದ ಜನರು ಅನಾರೋಗ್ಯವನ್ನು ತೆಗೆದುಕೊಂಡು ಹೋಗುವುದು ನ್ಯಾಯವಲ್ಲ. ಅದರಲ್ಲೂ ಕೋವಿಡ್ ಕಾಲದಲ್ಲಿ ಇದು ಸುತರಾಂ ಒಳ್ಳೆಯದಲ್ಲ. ಇಲ್ಲಿನ ಹೊಲಸಿಗೆ ರೋಗ ರುಜಿನಗಳು ಹರಡಬಹುದು. ಅದಕ್ಕೆ ದೇವಿ ಕಾರಣವಲ್ಲ. ಆಡಳಿತ ಮಂಡಳಿ ಕಾರಣ. ಕ್ಷೇತ್ರದ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು, ಶಿಸ್ತಿನಿಂದ ನಿರ್ವಹಣೆ ಮಾಡುವುದು ಇಂಥ ಒಂದು ದೊಡ್ಡ ಆಡಳಿತ ಮಂಡಳಿಗೆ ಅಸಾಧ್ಯವಲ್ಲ. ಆದರೆ ಮನಸು ಮಾಡಬೇಕು.

ಒಪ್ಪುವಂಥ ಮಾತೆಂದರೆ ಈ ಕ್ಷೇತ್ರಕ್ಕೆ ಬರುವವರು ಹಳ್ಳಿಯ ಜನ, ಮೂಢ ಭಕ್ತಿ ಇಟ್ಟುಕೊಂಡು ಬರುವ ಜನ ಹೆಚ್ಚು. ಅವರು ಮುಗ್ಧರು. ಸ್ವಚ್ಛತೆಗಿಂತಲೂ ಸ್ವೇಚ್ಛೆಯಿಂದ ಬಂದು ಇದ್ದು ಹೋಗಲು ಬಯಸುತ್ತಾರೆ ಭಕ್ತಿಯ ಆವೇಗದಲ್ಲಿ ಸ್ವಚ್ಛತೆಯನ್ನು ಕಡೆಗಣಿಸುತ್ತಾರೆ. ಆದರೆ ಅವರಿಗೆ ತಿಳಿವಳಿಕೆ ಹೇಳುವುದು ಆಡಳಿತ ಮಂಡಳಿಯ ಕರ್ತವ್ಯ. ಅದು ನಿರಂತರವಾಗಿರಬೇಕು. ಸಾಕಷ್ಟು ಆದಾಯ ತರುವ ಕ್ಷೇತ್ರದಲ್ಲಿ ಇನ್ನೂ ಕೆಲವರು ಯುವಕ, ಯುವತಿಯರ ನೇಮಕ ಮಾಡಿಕೊಂಡು ಸ್ವಚ್ಛತಾ ಕರ್ಮಿಗಳನ್ನಾಗಿ ಕೆಲಸ ಮಾಡಿಸುವ ಅಗತ್ಯವಿದೆ. ಇದರಿಂದ ನಿರುದ್ಯೋಗ ಸಮಸ್ಯೆಯನ್ನೂ ಸ್ವಲ್ಪಮಟ್ಟಿಗೆ ತಗ್ಗಿಸಿದಂತಾಗುತ್ತದೆ ಅಲ್ಲವೆ ? ಗಂಟೆಗೊಮ್ಮೆ ದೇವಸ್ಥಾನ ಪರಿಸರದ ಎಲ್ಲಾಕಡೆಗೂ ತಿರುಗಾಡುತ್ತ ಇರುವಂತೆ ನಾಲ್ಕು ಕಸದ ಗಾಡಿಗಳನ್ನು ಬಿಡಬೇಕು. ಕಸದ ವಿಲೇವಾರಿ ಒಂದೇ ಕಡೆ ಆಗುವಂತೆ ಅಲ್ಲಲ್ಲಿ ವ್ಯವಸ್ಥೆ ಮಾಡಬೇಕು. ಆ ಬಗ್ಗೆ ಧ್ವನಿವರ್ಧಕದಲ್ಲಿ ತಿಳಿವಳಿಕೆ ಹೇಳುವ ಕೆಲಸವಾಗಬೇಕು. ಅಲ್ಲಲ್ಲಿ ಶೌಚಾಲಯಗಳ ನಿರ್ಮಾಣವಾಗಬೇಕು. ಆದರೆ ಅವು ಸ್ವಚ್ಛವಾಗಿರಬೇಕು ! ಈಗಲೂ ಅಲ್ಲಿ ಶೌಚಾಲಯಗಳು ಇವೆ ಅವು ಅಶೌಚವಾಗಿವೆ ! ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಎಚ್ಚರಿಸುವ ಕಾರ್ಯಕರ್ತರ ನೇಮಕವಾಗಬೇಕು. ವಾಹನಗಳನ್ನು ನಿಲ್ಲಿಸಲು ಸ್ಥಳ ನಿಗದಿ ಮಾಡಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕು. ಅಂಥ ದೊಡ್ಡ ಕ್ಷೇತ್ರ ಧರ್ಮಸ್ಥಳ ಸ್ವಚ್ಛತೆಗೆ ಮಾದರಿಯಾಗಿದೆ.ಈ ಕ್ಷೇತ್ರವೂ ಯಾವುದಕ್ಕೂ ಕಡಿಮೆಯಿಲ್ಲ. ಅದರಂತೆ ನಿರ್ವಹಣೆ ಮಾಡಬಹುದು. ಈ ಬಗ್ಗೆ ಯಾರೂ ಯಾಕೆ ವಿಚಾರ ಮಾಡುತ್ತಿಲ್ಲ?

ಈ ಭಾಗದ ಶಾಸಕರಂತೂ, ಬೆಳಗಾವಿ ಸಂಸದರೂ, ಆಡಳಿತಾಧಿಕಾರಿಗಳೂ  ಕ್ಷೇತ್ರದ ಸ್ವಚ್ಛತೆಯ ಬಗ್ಗೆ ಕಣ್ಮುಚ್ಚಿ ಕುಳಿತು ಬಿಟ್ಟಿರುವಂತಿದೆ. ಎಲ್ಲರೂ ದೇವಸ್ಥಾನದ ಅಭಿವೃದ್ಧಿಯ ಮಾತಾಡುತ್ತಾರೆ. ಅಭಿವೃದ್ಧಿ ಅಂದರೆ ಕೇವಲ ದೇವಸ್ಥಾನದ ಆದಾಯ ಹೆಚ್ಚು ಮಾಡುವುದಲ್ಲ. ಸ್ವಚ್ಛತೆ ಇರಬೇಕು ಆ ಮೂಲಕ ಪರಿಸರದ ಪಾವಿತ್ರ್ಯ ಕಾಪಾಡಬೇಕು. ಈಗ ರೇಣುಕಾ ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಸಯ್ಯ ಈರಯ್ಯ ಹಿರೇಮಠ ಎಂಬುವವರು ಆಯ್ಕೆಯಾಗಿದ್ದಾರೆಂದು ಪತ್ರಿಕೆಗಳಿಂದ ತಿಳಿದು ಬಂದಿದೆ. ಅವರ ಆಡಳಿತದಲ್ಲಾದರೂ ಯಲ್ಲಮ್ಮ ಕ್ಷೇತ್ರ ಸ್ವಚ್ಛತೆಯಿಂದ ಕಂಗೊಳಿಸಲಿ. ಸ್ವಲ್ಪ ಕಣ್ಣು ತೆರೆಯಬೇಕು. ಪವಿತ್ರ ಕ್ಷೇತ್ರ ಗಬ್ಬೆದ್ದು ನಾರುವಂತಾಗಬಾರದು.


ಉಮೇಶ ಬೆಳಕೂಡ, ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group