ಮೂಡಲಗಿ(ಕೌಜಲಗಿ): ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟವನ್ನು ಜನಪ್ರಿಯಗೊಳಿಸಿದ ಕೌಜಲಗಿ ನಿಂಗಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಜಿ ಕುಂದಣಗಾರ ಮತ್ತು ಕೌಜಲಗಿಯನ್ನು ಕಟ್ಟುವಲ್ಲಿ ಪ್ರರಿಶ್ರಮ ಮಾಡಿದ ಅಂದಿನ ಕೆ.ಎಲ್,ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಜಿ ದೇಸಾಯಿ ಇಂತಹ ಅತಿರಥ ಮಹಾರಥರಿಗೆ ಜನ್ಮ ನೀಡಿದ ಕೌಜಲಗಿ ಗ್ರಾಮದಲ್ಲಿ ಜನರು ದೈವ ಭಕ್ತಿಯ ಪರಂಪರೆಯನ್ನು ಕೂಡಾ ಹೊಂದಿದವರಾಗಿದ್ದು ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಭಕ್ತಿ ಪರಂಪರೆಯನ್ನು ಮುಂದುವರಿಸಿದ್ದಾರೆ. ಭೌಗೋಳಿಕವಾಗಿ ಕೌಜಲಗಿ ಗ್ರಾಮ ಹಲವಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು ತಾಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕೌಜಲಗಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಯಲ್ಲಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಯಲ್ಲಮ್ಮದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡ ಕುಂಭಮೇಳ, ವಾದ್ಯಮೇಳ, ಜಾನಪದ ಕಲಾ ತಂಡದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಯಲ್ಲಮ್ಮದೇವಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ನಂತರ ಗ್ರಾಮಸ್ಥರು ನೀಡಿದ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೌಜಲಗಿ ಗ್ರಾಮವು ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮವಾಗಿದ್ದು ಹಿಂದೊಂದು ಕಾಲದಲ್ಲಿ ಬರಗಾಲದಿಂದ ತತ್ತರಿಸಿ ಹೊಗಿತ್ತು. ಇವತ್ತು ಗ್ರಾಮದೊಳಗೆ ನೀರಾವರಿಯ ಸೌಲಭ್ಯವಾಗಿರುವದರಿಂದ ಆರ್ಥಿಕವಾಗಿಯೂ ಕೂಡ ಗ್ರಾಮವು ತುಂಬಾ ಬೆಳೆದಿದೆ. ಗ್ರಾಮದಲ್ಲಿ ವ್ಯಾಪಾರ ವಹಿವಾಟಗಳು ಕೂಡಾ ಹೆಚ್ಚಾಗಿದ್ದು, ತಮ್ಮ ಆರ್ಥಿಕ ವ್ಯವಹಾರಗಳ ದೃಷ್ಠಿಯಿಂದ ಒಂದು ರಾಷ್ಟ್ರೀಕೃತ ಬ್ಯಾಂಕ ಪ್ರಾರಂಭಿಸಬೇಕಾಗಿ ನನ್ನಲ್ಲಿ ವಿನಂತಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆದಿದೆ. ಮುಂದೊಂದು ದಿನ ರಾಷ್ಟ್ರೀಕೃತ ಗ್ರಾಮೀಣ ಬ್ಯಾಂಕ ತರುವಲ್ಲಿ ನಾನು ಯಶಸ್ವಿಯಾಗುತ್ತೇನೆ ಅದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿದರು.
ಈಗಾಗಲೇ ಕೌಜಲಗಿ ಗ್ರಾಮಕ್ಕೆ ರಾಜ್ಯಸಭಾ ಸಂಸದರ ನಿಧಿಯಿಂದ ಬಸವೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ.ಗಳು, ವಿಠ್ಠಲ ಬೀರದೇವರ ದೇವಸ್ಥಾನಕ್ಕೆ 10 ಲಕ್ಷ ರೂ.ಗಳು, ಯಲ್ಲಮ್ಮದೇವಿ ದೇವಸ್ಥಾನಕ್ಕೆ 10 ಲಕ್ಷ ರೂ.ಗಳು, ಸಾಯಿ ಮಂದಿರಕ್ಕೆ 5 ಲಕ್ಷ ರೂ.ಗಳು, ಬಸ್ ಪ್ರಯಾಣಿಕರ ತಂಗುದಾನಕ್ಕೆ 5 ಲಕ್ಷ ರೂ.ಗಳು, ಮಾಳಿಂಗರಾಯ ದೇವಸ್ಥಾನಕ್ಕೆ 5 ಲಕ್ಷ ರೂ.ಗಳು ಹೀಗೆ ಎಲ್ಲ ಸಮುದಾಯದವರಿಗೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ವಿತರಿಸುವ ಮೂಲಕ ಕೌಜಲಗಿ ಗ್ರಾಮದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮಹಾಂತಪ್ಪ ಶಿವನಮೂರಿ, ಮಹಾಂತಪ್ಪ ಲಗಳಿ, ಗುರುಸಿದ್ದ ಬಿಸಗುಪ್ಪಿ, ಸಿದ್ದಪ್ಪ ಹಳ್ಳೂರ, ಈರಪ್ಪಣ್ಣ ಬಿಸಗುಪ್ಪಿ, ಸಿದ್ದಪ್ಪ ಬಿಸಗುಪ್ಪಿ, ರಾಮಣ್ಣ ಲಕ್ಕಪ್ಪನವರ, ಹಣಮಂತ ಲಕ್ಕಪ್ಪನವರ, ಪರಶುರಾಮ ಖಿಲಾರಿ, ಶಿವಣಪ್ಪ ಮೀಸಿ, ಬಸವರಾಜ ಯಲಿಗಾರ, ಬಸವರಾಜ ಲೋಕನ್ನವರ, ಸುಭಾಸ ಕೌಜಲಗಿ, ಶೇಕಪ್ಪ ಮೂಡಲಗಿ, ಬಸಪ್ಪ ಪಟಗುಂದಿ, ಬೀರಪ್ಪ ಖಿಲಾರಿ, ಪರಸಪ್ಪ ಪೂಜೇರಿ, ಬಸಪ್ಪ ಸಣ್ಣಕ್ಕಿ, ಸಂಜು ಮಿರ್ಜಿ, ವಿಠ್ಠಲ ಖಾನಟ್ಟಿ, ಕರೆಪ್ಪ ದೂಳಪ್ಪನವರ, ಗಣೇಶ ಸೆರಗಾರ, ಈರಪ್ಪ ಬಿಸನಕೊಪ್ಪ, ಸಿದ್ದಪ್ಪ ದಾನನನ್ವರ, ಈರಪ್ಪ ಬಿಸಗುಪ್ಪಿ, ರಮೇಶ ಬೇವಿನಕಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.