ಮೂಡಲಗಿ – ಹುಬ್ಬಳ್ಳಿಯ ೫ ವರ್ಷದ ಮಗುವಿನ ಅಪಹರಣ ಮತ್ತು ಹತ್ಯೆ ಪ್ರಕರಣದ ಆರೋಪಿ ಕಾಂತಿಯ ಎನ್ ಕೌಂಟರ್ ಮಾಡಿದ ರಾಜ್ಯದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಮೂಡಲಗಿ ತಾಲೂಕಿನವರು !
ತಾಲೂಕಿನ ಗುಜನಟ್ಟಿ ಗ್ರಾಮದ ಕೆಂಚವ್ವ ರಂಗಪ್ಪ ಮುಕ್ಕಣ್ಣವರ ಅವರ ಪುತ್ರಿಯಾದ ಅನ್ನಪೂರ್ಣ ಅವರಿಗೆ ನಾಲ್ವರು ಅಣ್ಣಂದಿರು ಹಾಗೂ ನಾಲ್ವರು ಅಕ್ಕಂದಿರ ತುಂಬು ಕುಟುಂಬವಿದೆ. ಕೆಲವೇ ದಿನಗಳಲ್ಲಿ ಅನ್ನಪೂರ್ಣ ಅವರ ಮದುವೆಯೂ ಜರುಗಲಿದ್ದು ತಮ್ಮ ಭವಿಷ್ಯದ ಹಂಗು ತೊರೆದು ಎನ್ ಕೌಂಟರ್ ನಂಥ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
ಧಾರವಾಡದಲ್ಲಿ ಬಿಎಸ್ ಸಿ ಹಾಗೂ ಬೆಂಗಳೂರಿನಲ್ಲಿ ಎಮ್ಎಸ್ ಸಿ ಶಿಕ್ಷಣ ಪೂರೈಸಿರುವ ಅನ್ನಪೂರ್ಣ ೨೦೧೮ ರಲ್ಲಿ ಪಿಎಸ್ಐ ಆಗಿ ನೇಮಕಗೊಂಡಿದ್ದಾರೆ.
ಲೇಡಿ ಸಿಂಗಂ ತಮ್ಮ ತಾಲೂಕಿನವರು ಎಂಬುದು ಗೊತ್ತಾಗುತ್ತಲೇ ಮೂಡಲಗಿಯ ಸಾರ್ವಜನಿಕರಲ್ಲಿ ಹೆಮ್ಮೆ ಮಿಶ್ರಿತ ಆನಂದ ಮನೆ ಮಾಡಿದ್ದು ಅನ್ನಪೂರ್ಣಾ ಅವರ ಕಾರ್ಯ ಎಲ್ಲ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಗೊಳ್ಳುತ್ತಿದೆ.