ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಹೇಳಿದರು.
ತಾಲೂಕಿನ ಚಂದರಗಿಯ ಸ್ಪೋಕೋ ಸಂಸ್ಥೆಯ ಎಸ್.ಪಿ.ಡಿ.ಸಿ.ಎಲ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸದೃಢ ದೇಹದಲ್ಲಿ ಸದೃಢ ಮನಸ್ಸಿರುವುದರಿಂದ ಮುಂಬರುವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿ ಎಂದರು. ಹೆತ್ತವರನ್ನು, ಗುರುಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಪೋಕೋ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಬಿ.ಎಂ. ಬೆಳಗಲಿ ಅವರು ಮಾತನಾಡಿ ಜೀವನದ ಈ ಬಾಳ ಪಯಣದಲ್ಲಿ ಯಶಸ್ಸು ಅನ್ನೋದು ಶ್ರೇಷ್ಠವಾದದ್ದು ಅಂಕಗಳಿಗಾಗಿ ಓದದೆ ಜ್ಞಾನಕ್ಕಾಗಿ, ಹೆತ್ತ ತಂದೆ ತಾಯಿಗಳಿಗಾಗಿ, ನಿಮ್ಮನ್ನ ನಂಬಿದ ಸಮಾಜಕ್ಕೆ ದಾರಿದೀಪವಾಗಲು ಓದಿರಿ ಎಂದು ತಿಳಿವಳಿಕೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಪೋಕೋ ಸಂಸ್ಥೆಯ ವ್ಯವಸ್ಥಾಪಕರಾದ ಉದಯಕುಮಾರ ಕೋಟಿವಾಲಿಯವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಓದು ಅತ್ಯಂತ ಉಪಯುಕ್ತಕಾರಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯನ್ನು ಪಡೆದು ಮತ್ತೆ ಈ ಶಾಲೆಗೆ ಬರುವಾಗ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಬರಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳ ಪರ ಯಲ್ಲೇಶ ಹುಡೇದ ಅನಿಸಿಕೆ ವ್ಯಕ್ತಪಡಿಸಿದರು. ಸ್ವರಚಿತ ಕವನಗಳಿಂದ ಶಿಕ್ಷಕರನ್ನ ರೇವಣಸಿದ್ದಯ್ಯ ಹಾಡಿ ಹೊಗಳಿದರು. ಪ್ರಶಾಂತ ಪೋತದಾರ ಕಳೆದ ಎರಡು ವರ್ಷದಲ್ಲಿ ಗತಿಸಿದ ಸ್ಮರಣೆಯ ಘಟನೆಗಳನ್ನು ಮೆಲುಕು ಹಾಕಿದನು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಸತೀಶ ಪಾಟೀಲ ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ವಿದ್ಯಾರ್ಥಿಗಳನ್ನು ಬೀಳ್ಕೊಡುವುದು ಒಂದು ರೀತಿ ದುಃಖದ ಸನ್ನಿವೇಶ ಮುಂದಿನ ಭಾವಿ ಜೀವನ ಸುಖಕರ ಹಾಗೂ ಯಶಸ್ವಿದಾಯಕವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಲ್ಲ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಶಿವಾನಂದ ತೋರಣಗಟ್ಟಿ ನಿರೂಪಿಸಿದರು. ಮಹಾಂತೇಶ ಕಾಡನ್ನವರ ವಂದಿಸಿದರು.