ಹುನಗುಂದ: ತಾಲೂಕಿನ ಬನ್ನಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗೂರು ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷ ದ್ಯಾಮಣ್ಣ ಮಾದರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ ಐ ಈ ಆರ್ ಟಿ ಸಂಗಮೇಶ ಹೊದ್ಲೂರ, ಕಲಿಕೆಯ ಬುನಾದಿ ಸಾಮರ್ಥ್ಯ ಗಳಿಸುವಲ್ಲಿ ಹಿಂದುಳಿದಿರುವ ಮಕ್ಕಳು ತಾವು ವಿಶೇಷ ಅವಧಿಗಳ ಬೋಧನಾ ಪ್ರಕ್ರಿಯೆಯಲ್ಲಿ ಕಲಿತ ಸಾಮರ್ಥ್ಯಗಳನ್ನು ಒರೆಗೆ ಹಚ್ಚಿ ಪ್ರತಿಭೆ ಪ್ರದರ್ಶಿಸುವ ವೇದಿಕೆಯೇ ಈ ಕಲಿಕಾ ಹಬ್ಬ ಎಂದರು.
ಕಲಿಕಾ ಪ್ರಕ್ರಿಯೆಯನ್ನು ಹಬ್ಬದ ರೀತಿ ಸಂಭ್ರಮಿಸುತ್ತಾ, ಹಾಡಿ, ಕುಣಿದು, ನಲಿದು ಜ್ಞಾನ ಪಡೆಯುವ ಸದವಕಾಶ ನಮ್ಮ ಸರಕಾರಿ ಶಾಲೆಗಳಲ್ಲಿದೆ. ಇಲ್ಲಿ ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳನ್ನು ನೀಡಿ ಕಲಿಕಾ ಅಂತರವನ್ನು ಕಡಿಮೆಗೊಳಿಸಿ ಸಂಪೂರ್ಣ ಸಾಮರ್ಥ್ಯ ಗಳಿಸುವಲ್ಲಿ ಎಫ್ ಎಲ್ ಎನ್ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು.
ಇಳಕಲ್ ಸಿಆರ್ಪಿ ಗಿರಿಜಾ ಕೊಟಗಿ ಮಾತನಾಡಿ, ನಮ್ಮ ಸುತ್ತಲಿನ ಪರಿಸರದ ಅರಿವು, ಕುಟುಂಬದ ಸಹ ಸಂಬಂಧ, ಕಥೆ ಕಟ್ಟುವುದು, ಮೆಮೊರಿ ಪರೀಕ್ಷೆ, ಸಂತಸದಾಯಕ ಗಣಿತ ಕಲಿಕೆಯಂತಹ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳನ್ನು ಸ್ಪರ್ಧಾಳುವಾಗಿಸಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿ, ಉಳಿದವರನ್ನು ಮತ್ತಷ್ಟು ಸಾಮರ್ಥ್ಯ ಸಾಧನೆಗೆ ಹುರುದುಂಬಿಸುವ ಈ ಕಲಿಕಾ ಹಬ್ಬ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುತ್ತದೆ ಎಂದರು.
ನೌಕರರ ಒಕ್ಕೂಟದ ಅಧ್ಯಕ್ಷ ಬಿ ಜಿ ಗೌಡರ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಬಡವರ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು ಅವರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಅತ್ಯಂತ ಸಮರ್ಥರಿದ್ದಾರೆ. ಅವರನ್ನು ನಗರದ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸ್ಪರ್ಧೆಗಿಳಿಯುವಂತೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಏಳು ವಿಧದ ಸ್ಪರ್ಧೆಗಳನ್ನು ನಡೆಸಿ ನಂತರ ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಿ ಆರ್ ಪಿ ಸಂಗಪ್ಪ ಸಂಗಮದ, ಶಿಕ್ಷಕರ ಸಂಘದ ಉಪಾಧ್ಯಕ್ಷ ಅಶೋಕ ಬಳ್ಳಾ, ಮಾಜಿ ಅಧ್ಯಕ್ಷ ಸಿದ್ದು ಶೀಲವಂತರ, ಎಸ್ಡಿಎಂಸಿಯ ಶೇಖರಗೌಡ ಗುಡದಪ್ಪನವರ, ಹುಲ್ಲನಗೌಡ ಪಾಟೀಲ, ವಿಜಯ ಹೊಸಮನಿ ಉಪಸ್ಥಿತರಿದ್ದರು.
ರಾಮಪ್ಪ ಬುರ್ಲಿ, ಮುಖ್ಯ ಗುರುಮಾತೆ ಎನ್ ಎಸ್ ಹುನಗುಂದ, ರವಿ ತಾವರಗೇರಿಮಠ, ಕಿರಣ ವಜ್ರಮಟ್ಟಿ, ಎಂ ಸಿ ಮ್ಯಾಗೇರಿ, ಎಸ್ ಎಂ ಸಜ್ಜನ, ಆರ್ ಎ ಪತ್ತಾರ, ಎಫ್ ಎ ಗೋವಿಂದಪ್ಪನವರ, ಸವಿತಾ ಎಸ್ ಬಿ ಸುಭಾಷ ಕಣಗಿ, ಮಹಾಂತೇಶ ವಂದಾಲಿ ಇತರರು ಉಪಸ್ಥಿತರಿದ್ದರು.

