ಮೂಡಲಗಿ: ಗುರುವಿನ ಆರಾಧನೆ ಶ್ರೇಷ್ಠವಾದುದು ಅವರ ಮಾರ್ಗದರ್ಶನ ಅವಶ್ಯವಿದೆ ಹೀಗಾಗಿ ಖಾನಟ್ಟಿ ಗ್ರಾಮದಲ್ಲಿ ಗುರು ಭವನವನ್ನು ನಿರ್ಮಾಣ ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಗುರುವಿನ ಸಂಸ್ಕಾರ ದೊರೆಯುವಂತಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 15 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಗುರು ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದ್ದು ಈ ನಿಧಿ ಅಡಿಯಲ್ಲಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ಗ್ರಾಮೀಣ ಜನರ ಸಹಾಯಕ್ಕೆ ಬರುತ್ತಿದ್ದೇನೆ ಎಂದರಲ್ಲದೇ ಖಾನಟ್ಟಿ ಗ್ರಾಮದಲ್ಲಿ ಗುರು ಭವನವನ್ನು ಅತ್ಯುತ್ತಮವಾಗಿ ನಿರ್ಮಿಸಿದ್ದು, ಗ್ರಾಮಕ್ಕೆ ಒಂದು ಹೊಸ ಸೊಬಗನ್ನು ನೀಡಿದಂತಾಗಿದೆ. ಇಂತಹ ಮಹತ್ಕಾರ್ಯಕ್ಕೆ ಗ್ರಾಮದ ಜನರು ಕೈಜೋಡಿಸಿ ಶ್ರದ್ದಾಭಕ್ತಿಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಘಟಪ್ರಭಾದ ಪೂಜ್ಯ ಶ್ರೀ ಭೀಮಾನಂದ ಸ್ವಾಮೀಜಿಗಳು ಹಾಗೂ ಲಕ್ಷ್ಮೇಶ್ವರದ ಗೀತಾ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಬಸಲಿಂಗವ್ವ ಮುಗಳಖೋಡ, ಉಪಾಧ್ಯಕ್ಷ ಗೋಪಾಲ ನಿಂಗನೂರು, ಪಿ.ಕೆ.ಪಿ.ಎಸ್ ಅಧ್ಯಕ್ಷ ಮಹಾಂತೇಶ ರಡೆರಟ್ಟಿ, ಮದನ ದಾನನ್ನವರ, ಚೇತನ ರಡೆರಟ್ಟಿ, ಮೇಘಾ ತುಪ್ಪದ, ವಂದನಾ ಸೋನಾರ್, ಮಾಂತಯ್ಯ ಪೂಜಾರಿ, ಶಿವಬಸು ತುಪ್ಪದ, ಶಿವನಪ್ಪ ಗುದಗನ್ನವರ, ರಾಮಣ್ಣ ಕುಂದರಗಿ, ಅಗ್ರಾಣಿ ದೊಣಿ, ರವಿ ತುಪ್ಪದ, ಶಿವಪ್ಪ ಜೋಡಟ್ಟಿ, ಸತ್ಯಪ್ಪ ರಡ್ಡೆರಟ್ಟಿ, ಅಜ್ಜಪ್ಪ ಲಂಗೋಟಿ, ಜಗದೀಶ ಬಳಿಗಾರ, ರಮೇಶ ಮೇತ್ರಿ ಪಂಚಾಯತ ಅಭಿವೃದ್ದಿ ಅಧಿಕಾರಿ ಅನುರಾಧಾ ಭಜಂತ್ರಿ ಸೇರಿದಂತೆ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.