ಮೈಸೂರು – ಯುವ ಜನತೆ ರಾಷ್ಟಸೇವೆಯನ್ನು ಜೀವನದ ಗುರಿಯಾಗಿ ಮಾಡಿಕೊಳ್ಳಬೇಕು. ಸ್ವಚ್ಛತೆ,ಪರಿಸರ ಸಂರಕ್ಷಣೆ, ದೀನದುರ್ಬಲರ ಸೇವೆ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರದ ವಿ.ವಿ.ರಸ್ತೆಯಲ್ಲಿನ ತೊಂಬತ್ತು ವರ್ಷ ಇತಿಹಾಸವುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ. 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು, ಹಿರಿಯ ತಲೆಮಾರಿನವರ ನೂರಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ರಾಷ್ಟಕ್ಕೆ ಸ್ವಾತಂತ್ರ್ಯ ಬಂತು. ಈ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಯನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಕಿವಿಮಾತು ನುಡಿದರು.
ಸಂವಿಧಾನವು ಭಾರತದ ಆತ್ಮವಿದ್ದಂತೆ. ವಿಶ್ವಕ್ಕೇ ಮಾದರಿಯಾದ ಸಂವಿಧಾನವನ್ನು ಹೊಂದಿದ ಕೀರ್ತಿ ನಮ್ಮ ರಾಷ್ಟದ್ದು. ಭಾರತವು ನೂರಾರು ಜಾತಿ,ಮತ,ಧರ್ಮಗಳ ಬೀಡಾಗಿದ್ದರೂ ಶಾಂತಿಯ ತವರು ಎನಿಸಿರುವುದಕ್ಕೆ ನಮ್ಮ ಸಂವಿಧಾನವೇ ಮೂಲಕಾರಣ ಎಂದು ಅವರು ಬಣ್ಣಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ನಡೆದ ಸಮಾರಂಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ವನಿತಾ ಹಾಗೂ ಶಾಲಾ ಉನ್ನತೀಕರಣ ಸಮಿತಿ ಅಧ್ಯಕ್ಷರಾದ ಸತ್ಯನಾರಾಯಣ್ ಧ್ವಜಾರೋಹಣ ನಡೆಸಿದರು.
ನಂತರ ನಡೆದ ಸಭೆಯಲ್ಲಿ ಕ್ಲಸ್ಟರ್ ಈಶ್ವರ್, ಶಾಲಾ ಉನ್ನತೀಕರಣ ಸಮಿತಿ ಸದಸ್ಯರಾದ ಶಿವಕುಮಾರ್, ರಫಿಕ್, ಮಹಾದೇವಿ, ಗೌರಮ್ಮ,ಭಗತ್ ಸಿಂಗ್ ಯೂತ್ ಫೌಂಡೇಶನ್ ಅಧ್ಯಕ್ಷರಾದ ಯೋಗೀಶ್ ಸಭೆಯಲ್ಲಿ ಮಾತನಾಡಿದರು.
ಶಾಲಾಮಕ್ಕಳಾದ ಆದಿ,ಮಹ್ಮದಿ ಮೆಹರಿನ್, ಚೇತನ , ಹೇಮಾ,ಮಂಜುರಾಜ್ ಸಭೆಯಲ್ಲಿ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು.
ಮುಖ್ಯ ಶಿಕ್ಷಕರಾದ ರಾಮಕೃಷ್ಣ ಎಲ್ಲರನ್ನೂ ಸ್ವಾಗತಿಸಿದರು.ಸಹ ಶಿಕ್ಷಕರಾದ ಮಂಜುರಾಜ್ ಕಾರ್ಯಕ್ರಮ ನಿರ್ವಹಿಸಿ, ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಸಹ ಶಿಕ್ಷಕಿ ಸುಮಾಮಣಿ, ರುಕ್ಮಿಣಿಯಮ್ಮ,ವಿಜಯಲಕ್ಷ್ಮಿ, ರೂಪ ,ರೇವತಿ ,ಭಗತ್ ಸಿಂಗ್ ಯೂತ್ ಫೌಂಡೇಶನ್ ನ ಪದಾಧಿಕಾರಿಗಳಾದ ಶಿವು, ರಕ್ಷಿತ್ ,ರಾಜೇಶ್,ಪ್ರಮೋದ್,ಜಗದೀಶ್,ಗಿರೀಶ್ ,ಕಿರಣ್, ರಾಘವೇಂದ್ರ, ಕೃಷ್ಣಯ್ಯ, ಅಮಿತ್, ಮೋಹನ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ಇದೇ ಸಂದರ್ಭದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಬಹುಮಾನವನ್ನು ಹಾಗೂ ಶಾಲೆಯ ಎಲ್ಲ ಮಕ್ಕಳಿಗೂ ಲೇಖನಿಗಳನ್ನು ಹಾಗೂ ಚಾಕಲೇಟ್ ಗಳನ್ನು ವಿತರಿಸಲಾಯಿತು.