ಗೋಕಾಕ – ಸ್ವಾಮಿ ವಿವೇಕಾನಂದ ಯುವ ಸೇನಾ ಸಮಿತಿ ಕೆ ತಿಮ್ಮಾಪೂರ ಹಾಗೂ ಸ ಕಿ ಪ್ರಾ ಕನ್ನಡ ಶಾಲೆ ಕೆ ತಿಮ್ಮಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ” ಬನ್ನಿ ಯುವಕರೇ ಕಟ್ಟೋಣ ಸದೃಢ ಭಾರತ ಅಭಿಯಾನ ” ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ದಿವ್ಯ ಸಾನ್ನಿಧ್ಯವನ್ನು ಕುಳ್ಳೂರ ಕಲ್ಮಠದ ಶ್ರೀ ಶ್ರೀ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಪ್ರಧಾನ ಗುರುಗಳಾದ ಶಂ ಈ ಅಂಗಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಲಹಳ್ಳಿಯ ಹಿರಿಯ ಸಾಹಿತಿಗಳಾದ ಆರ್ ಎಸ್ ಪಾಟೀಲ ಗುರುಗಳು ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಯುವಕರಿಗೆ ಮಕ್ಕಳಿಗೆ ಮನ ಮುಟ್ಟುವಂತೆ ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಕೆ ಚಂದರಗಿ ಹೈಸ್ಕೂಲ ಶಿಕ್ಷಕರಾದ ಎಸ್ ಎಂ ಕುಂಬಾರರವರು ಸ್ವಾಮಿ ವಿವೇಕಾನಂದರ ಸಂಪೂರ್ಣ ಜೀವನ ಚರಿತ್ರೆಯನ್ನು ಸುಂದರವಾಗಿ ಕಟ್ಟಿ ಕೊಟ್ಟರು. ಇನ್ನೋರ್ವ ಅತಿಥಿಗಳಾದ ಸಾಲಹಳ್ಳಿಯ ಸಾಹಿತಿ ಹಾಗೂ ಕನ್ನಡ ಅಂಕಿಗಳ ಹೋರಾಟಗಾರರಾದ ಸುರೇಶ ಗೋವಿಂದರಾವ ದೇಸಾಯಿಯವರು ಮಾತನಾಡುತ್ತಾ, ಕ್ಷಾತ್ರ ತೇಜದ ಸಿಡಿಲ ಮರಿ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಕರು ಮತ್ತು ಮಕ್ಕಳು ಅಳವಡಿಸಿಕೊಂಡು ಕೆ ತಿಮ್ಮಾಪೂರ ಗ್ರಾಮದ ಕೀರ್ತಿಯನ್ನು ನಾಡಿನಲ್ಲೆಲ್ಲಾ ಹಬ್ಬಿಸಲಿ. ಮನೆ ಮನೆಗೆ ಸ್ವಾಮಿ ವಿವೇಕಾನಂದರು ಹುಟ್ಟಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಕಣ್ಣಿಗೆ ಕಟ್ಟುವಂತೆ ತಮ್ಮ ಆಶೀರ್ವಚನದಲ್ಲಿ ನೀಡಿದರು.
ಆರಂಭದಲ್ಲಿ ಅಡಿವೆಪ್ಪಗೌಡ ಪಾಟೀಲರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಾಸ್ತಾವಿಕವಾಗಿ ವಿಕ್ರಮ ಹ ದೇಸಾಯಿ ಯುವ ಸೇನೆ ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು. ಸಂಘಟನೆಯ ಕುರಿತು ಶಿವಕುಮಾರ ಸಿ ಪಾಟೀಲ ಮಾತನಾಡಿದರು ಕಾರ್ಯಕ್ರಮವನ್ನು ಸಿದ್ಧರಾಮಗೌಡ ಪಾಟೀಲ ನಡೆಸಿದರು. ಶಾಲೆಯ ಶಿಕ್ಷಕರಾದ ಎನ್ ಎಸ್ ಸೊಗಲದ ವಂದನಾರ್ಪಣೆ ಸಲ್ಲಿಸಿದರು.