ಮೈಸೂರಿನ ಅಶೋಕಪುರಂನಲ್ಲಿರುವ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಇಂದು ದಿ. ೨೩ ರಂದು ಪ್ರತಿಭಾಪುರಸ್ಕಾರ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಸಮಾರಂಭವು ಅಶೋಕಪುರಂ ಕೆ.ಶಿವರಾಂ ಕ್ರೀಡಾಂಗಣದ ಬುದ್ಧಧ್ಯಾನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಷಣ್ಮುಗಂ ರವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇಂದಿನ ಮಕ್ಕಳು ಓದಿನ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕು. ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ಅರಿತುಕೊಳ್ಳಬೇಕಾದರೆ ವಿಚಾರಶೀಲತೆ ಮುಖ್ಯ ಎಂದರು.
ವೈಜ್ಞಾನಿಕತೆ ನಮಗೆ ಬದುಕಿನಲ್ಲಿ ಯಶಸ್ಸನ್ನು ತಂದು ಕೊಡುವುದರ ಜೊತೆಗೆ ಅಜ್ಞಾನ, ಮೂಢನಂಬಿಕೆ, ಕಂದಾಚಾರ ದೂರ ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿದರೆ ಓದಿನ ಕಡೆ ಆಸಕ್ತಿ ಬೆಳೆಯುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿದರೆ, ಕ್ರೀಡೆ ದೈಹಿಕವಾಗಿ ಸಧೃಡ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಆನಂದಮೂರ್ತಿ ರವರು ಮಾತನಾಡಿ ಬದುಕಿನಲ್ಲಿ ಯಾರು ಶ್ರಮ ವಹಿಸುತ್ತಾರೋ ಅವರು ಗುರಿ ಸಾಧಿಸಲು ಸಾಧ್ಯ, ಸ್ವಾಮಿ ವಿವೇಕಾನಂದರ ನುಡಿಯಂತೆ ನಿನ್ನ ಜೀವನದ ಭಾಗ್ಯಶಿಲ್ಪಿ ನೀನೇ ಎಂಬಂತೆ ಪ್ರತಿಯೊಬ್ಬರು ಕಷ್ಟಪಟ್ಟು ಸತತ ಅಭ್ಯಾಸ, ಏಕಾಗ್ರತೆಯಿಂದ ವಿದ್ಯಾಭ್ಯಾಸವನ್ನು ನಡೆಸಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಮಾದಯ್ಯ, ಸಂಚಾಲಕರಾದ ಪುರುಷೋತ್ತಮ, ಸದಸ್ಯರಾದ ಎಂ.ಪಿ.ಸುಂದರೇಶನ್, ಮಹಾಲಿಂಗು, ನಿವೃತ್ತ ಮುಖ್ಯೋಪಾಧ್ಯಾಯರಾದ ಶಾಂತರಾಜು ಹಾಗೂ ಇನ್ನಿತರ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ ಬಾರಿ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು ಹಾಗೇಯೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಗಿನೆಲೆ ಬಿ.ಎಡ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಕೃಷ್ಣಸ್ವಾಮಿ ಹಾಗೂ ಅವರ ಪತ್ನಿ ಭಾರತಿ ಜೆ. ಅವರನ್ನು ಹಾಗೂ ರಾಷ್ಟç ಮತ್ತು ರಾಜ್ಯಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಸಂಸ್ಥೆಯಿಂದ ಪ್ರತಿನಿಧಿಸಿ ಪ್ರಶಸ್ತಿಗೆ ಭಾಜನರಾದ ಕ್ರೀಡಾ ದಿಗ್ಗಜರಾದ ಈಶ್ವರ್.ಎನ್, ಕೆ.ಎಂ.ಶ್ರೀಕಂಠಮೂರ್ತಿ, ಮಹಾದೇವ.ಪಿ ಹಾಗೂ ಮಹದೇವಸ್ವಾಮಿ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬುದ್ಧ ವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮುಖ್ಯೋಪಾಧ್ಯಾಯರಾದ ನಿವೃತ್ತ ಹೆಚ್.ಎಂ.ಶಾಂತರಾಜು ನಿರೂಪಿಸಿದರು. ಸಂಘದ ಸದಸ್ಯರಾದ ಪುರುಷೋತ್ತಮ ವಂದಿಸಿದರು.

