ಸಿಂದಗಿ; ರಕ್ತದಾನದಿಂದ ದಾನಿಗಳ ಆರೋಗ್ಯ ಉತ್ತಮಗೊಳ್ಳುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಹೊಸ ರಕ್ತಕಣಗಳ ಉತ್ಪಾದನೆಗೆ ಸಹಕಾರವಾಗುತ್ತದೆ. ರಕ್ತದಾನವು ಸಂಪೂರ್ಣ ಸುರಕ್ಷಿತವಾಗಿದ್ದು, ದಾನಿಗಳಿಗೆ ಯಾವುದೇ ಹಾನಿಯಿಲ್ಲ ಎಂದು ಸರಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೂಪಾಲಿ ಸ್ಪಷ್ಟಪಡಿಸಿದರು.
ನಗರದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರ ಹಾಗೂ ಯುವಕ-ಯುವತಿಯರಿಗೆ ಮಾಹಿತಿ ಹಕ್ಕು ಅಧಿನಿಯಮ-೨೦೦೫ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫಾದರ್ ಸಂತೋಷ ಅವರು ಮಾತನಾಡಿ ರಕ್ತದಾನವು ಮಾನವೀಯ ಸೇವೆಯ ಶ್ರೇಷ್ಠ ರೂಪವಾಗಿದ್ದು, ಒಬ್ಬರ ರಕ್ತ ಮತ್ತೊಬ್ಬರ ಅಮೂಲ್ಯ ಜೀವ ಉಳಿಸುತ್ತದೆ ಎಂದು ಹೇಳಿದರು. ಯುವಜನರು ರಕ್ತದಾನ ಮಾಡುವ ಮೂಲಕ ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ದಸಂಸ ವಿದ್ಯಾರ್ಥಿ ಒಕ್ಕೂಟದ ಹರ್ಷವರ್ಧನ ಪೂಜಾರಿ ವಕೀಲರು ಮಾತನಾಡಿ, ಯುವಕ-ಯುವತಿಯರನ್ನು ಉದ್ದೇಶಿಸಿ ಮಾತನಾಡಿ, ರಕ್ತದಾನವು ಕೇವಲ ಆರೋಗ್ಯ ಸೇವೆಯಷ್ಟೇ ಅಲ್ಲದೆ, ಸಾಮಾಜಿಕ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದೆ ಎಂದು ಹೇಳಿದರು.
ಓಂಕಾರ ಕರಿಯರ್ ಅಕಡೆಮಿಯ ಶಿಕ್ಷಕ ಪರಶುರಾಮ ಬಿರಾದಾರ, ಮಾತನಾಡಿ, ಯುವಕ-ಯುವತಿಯರಿಗೆ ಮಾಹಿತಿ ಹಕ್ಕು ಅಧಿನಿಯಮ-೨೦೦೫ ಕುರಿತು ತರಬೇತಿ ನೀಡಿದರು. ಮಾಹಿತಿ ಹಕ್ಕು ಅಧಿನಿಯಮದ ಉದ್ದೇಶ, ಅರ್ಜಿ ಸಲ್ಲಿಸುವ ವಿಧಾನ, ಸಮಯಮಿತಿ, ಅಪೀಲು ಪ್ರಕ್ರಿಯೆ ಮತ್ತು ಯುವಕರು ಈ ಹಕ್ಕನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ವಿವರಿಸಿದರು.
ಆರಿಫ್ ಹವಾಲ್ದಾರ್, ನಬಿ ಬೀಳಗಿ, ಮಹೇಶ ಕಟಕದೊಂಡ ಸರಕಾರಿ ಜಿಲ್ಲಾ ಆಸ್ಪತ್ರೆಯ ಶ್ರೀಮತಿ ಪಿ.ಕೆ. ಮೈಸೂರು, ಪ್ರಯೋಗ ಶಾಲಾ ತಂತ್ರಜ್ಞರು-ತಾಲೂಕು ಆಸ್ಪತ್ರೆ, ಸಿಂದಗಿ, ಯುವಕ-ಯುವತಿಯರು ಉಪಸ್ಥಿತರಿದ್ದರು. ರಾಜು ಕುರಿಮನಿ ನಿರೂಪಿಸಿದರು, ಕುಮಾರ್ ಉಮೇಶ್ ದೊಡಮನಿ ಸ್ವಾಗತಿಸಿದರು. ಮಹೇಶ್ ಚವ್ಹಾಣ್ ವಂದಿಸಿದರು.

