ಫೆ.26 ರಿಂದ ಸಿಂಹ, ನಂದಿ, ಹುಲಿ, ಗಜ, ಅಶ್ವ ವಾಹನೋತ್ಸವ ಸೇರಿ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು
ಧಾರವಾಡ: ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿ ಕ್ಷೇತ್ರದ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವವು ಮಾರ್ಚ 5 ರಂದು ಸಂಜೆ 4 ಗಂಟೆಗೆ ಜರುಗಲಿದೆ.
ಪ್ರತೀ ವರುಷ ರಾಯಚೋಟಿ ವೀರಭದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವದಲ್ಲಿ ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಅಸಂಖ್ಯ ಭಕ್ತಗಣವು ಶೃದ್ಧಾಭಕ್ತಿಗಳಿಂದ ಪಾಲ್ಗೊಳ್ಳುತ್ತದೆ. ನಂದ್ಯಾಲ ನಂದುಲಮಠದ ಶಶಿಭೂಷಣ ಸಿದ್ಧಾಂತಿ ಶ್ರೀಗಳ ನೇತೃತ್ವದಲ್ಲಿ ಫೆ.26 ರಿಂದ 11 ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಫೆ.26 ರಂದು ಮಹಾಗಣಪತಿ ಪೂಜೆ, ದೀಕ್ಷಾಕಂಕಣ, ಧರ್ಮಧ್ವಜಾರೋಹಣ, ತ್ರಿಶೂಲ ಉತ್ಸವ. ಫೆ.27 ಕಲ್ಯಾಣ ಉತ್ಸವ, ಮಯೂರ ವಾಹನೋತ್ಸವ. ಫೆ.28 ಯಾಳಿ ಮತ್ತು ಸಿಂಹ ವಾಹನೋತ್ಸವ. ಮಾ.1 ಪುರುಷಾಮೃಗೋತ್ಸವ, ಮಹಾಶಿವರಾತ್ರಿ ಅಭಿಷೇಕ, ಗಜ ವಾಹನೋತ್ಸವ. ಮಾ.2 ಹುಲಿ ಮತ್ತು ರಾವಣ ವಾಹನೋತ್ಸವ ಮತ್ತು ಅಮವಾಸ್ಯೆ ವಿಶೇಷ ಪೂಜೆ. ಮಾ.3 ಚಂಡಿ ಹೋಮ, ಶೇಷ ಮತ್ತು ಚಂದ್ರಪ್ರಭ ವಾಹನೋತ್ಸವ, ಪುಷ್ಪಯಾಗ. ಮಾ.4 ಸೂರ್ಯಪ್ರಭ ಉತ್ಸವ, ಶ್ರೀವೀರಭದ್ರಸ್ವಾಮಿಗೆ ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಚಿನ್ನದ ಕಿರೀಟ ಧಾರಣೆ, ನಂದಿವಾಹನೋತ್ಸವ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಹೋರಾತ್ರಿ ಭಜನೆ ಜರುಗುವವು.
ರಥೋತ್ಸವ: ಮಾ.5 ರಂದು (ಶನಿವಾರ) ಪ್ರಾತಃಕಾಲ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11-45 ರ ಶುಭ ಮುಹೂರ್ತದಲ್ಲಿ ಶ್ರೀ ವೀರಭದ್ರಸ್ವಾಮಿಗೆ ವಜ್ರದ ತ್ರಿನೇತ್ರ ಧಾರಣ ಹಾಗೂ ಮಹಾನೈವೇದ್ಯ ನಡೆಯಲಿದೆ. ಅದೇ ದಿನ ಸಂಜೆ 4 ಗಂಟೆಗೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದ ಆಗಮಿಸುವ ಭಕ್ತಗಣದ ಜಯಘೋಷದ ಮಧ್ಯೆ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ವಾರ್ಷಿಕ ಮಹಾ ರಥೋತ್ಸವವು ರಾಯಚೋಟಿ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಾ.6 ರಂದು ಮಹಾಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ, ಹಂಸವಾಹನೋತ್ಸವ, ಮಾ.7 ಅಶ್ವ ವಾಹನೋತ್ಸವ ಹಾಗೂ ಮಾ.8 ರಂದು ಪಲ್ಲಕ್ಕಿ ಮತ್ತು ಉಯ್ಯಾಲೆ ಉತ್ಸವ ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿಯೂ ಆಗಿರು ಕರ್ನಾಟಕ ರಾಜ್ಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ತಿಳಿಸಿದ್ದಾರೆ.
ಹುಬ್ಬಳ್ಳಿ ಭಕ್ತರ ರಥ: ಹುಬ್ಬಳ್ಳಿ ನಗರದ ಭಕ್ತ ವೃಂದದ ಗಣ್ಯರಾದ ನ್ಯಾಯವಾದಿ ಪ್ರಕಾಶ ಅಂದಾನಿಮಠ, ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಪಿ.ಎಂ. ಚಿಕ್ಕಮಠ, ಶಂಕರ ಕುರ್ತಕೋಟಿ, ಎಂ.ಐ. ದೇಶನೂರ, ರಾಚಯ್ಯ ಮಠಪತಿ, ಶಿವಾನಂದ ನಾಗಠಾಣ, ಅನಿಲ ಉಳ್ಳಾಗಡ್ಡಿ, ರಮೇಶ ಬುಡರಕಟ್ಟಿಮಠ ಮುಂತಾದವರ ಸಂಘತ ಪ್ರಯತ್ನದ ಫಲವಾಗಿ ಉತ್ತರಕರ್ನಾಟಕ ಭಾಗದ ಭಕ್ತರು 12 ವರ್ಷಗಳ ಹಿಂದೆಯೇ ಸುಮಾರು 9 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಪ್ರತೀ ವರ್ಷ ಕಲಬುರ್ಗಿ ಮತ್ತು ಹುಬ್ಬಳ್ಳಿಯ ಸಮಸ್ತ ಭಕ್ತಗಣ ಒಂದು ವಾರಕಾಲ ಕ್ಷೇತ್ರದಲ್ಲಿಯೇ ಇದ್ದು ಈ ಪ್ರಸಿದ್ಧ ಜಾತ್ರಾಮಹೋತ್ಸವದ ಸೇವೆಗಳಲ್ಲಿ ಪಾಲ್ಗೊಳ್ಳುವರೆಂದು ಕರ್ನಾಟಕ ರಾಜ್ಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.