ರಾಜ್ಯೋತ್ಸವದಂದು ಹುಣಶ್ಯಾಳ ಪಿ.ವಾಯ್ ಗ್ರಾಮದಲ್ಲಿ ಕಾರ್ಯಕ್ರಮ
ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದಲ್ಲಿರುವ ಆರೂಢಜ್ಯೋತಿ ಚೈತನ್ಯ ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಪ್ರಧಾನ ಗುರುಗಳಾದ ಅಶೋಕ ಎಸ್.ಅಮಾತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಂಥ ಲೋಕಾರ್ಪಣೆಗೊಳಿಸಿದ ಪ್ರಧಾನ ಗುರುಗಳಾದ ಅಶೋಕ ಅಮಾತಿ ಅವರು ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಹಿತಿಗಳು, ಕವಿಗಳು, ಜ್ಞಾನಪೀಠ ವಿಜೇತರು, ಶರಣರ ಕುರಿತು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಮಹಾನ್ ದಾರ್ಶನಿಕ ಬಸವಣ್ಣ* ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೋಚಿಂಗ್ ವಿಭಾಗದ ಶಿಕ್ಷಕರಾದ, ಉದಯೋನ್ಮುಖ ಕವಿ, ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ(ಇಂಚಲ) ಅವರು ಮಾತನಾಡಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ಶಿಕ್ಷಕಿಯಾದ ಶ್ರೀಮತಿ ಸುಜಾತಾ ಮಂಗಸೂಳಿಯವರು ಮಾತನಾಡಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಗ್ರಂಥವು ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ ತಲುಪುವ ಮೂಲಕ, ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.
ಬಸವ ಅಭಿಮಾನಿ ಸಹಶಿಕ್ಷಕಿ ಶ್ರೀಮತಿ ಶೃತಿ ಜಾಡರ ಅವರು ಸ್ವಾಗತಿಸಿದರು, 7ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು, ಎಲ್ಲ ತರಗತಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ವಿದ್ಯಾ ಹೊಸಮನಿಯವರು ವಂದಿಸಿದರು.
ಶಿಕ್ಷಕಿಯರಾದ ಹೇಮಾ ನಾಡಗೌಡರ, ನಾಗಶ್ರೀ ಗೌಡ, ಮಂಜುಳಾ ಕೆ, ಲಕ್ಷ್ಮೀ ಅಮಾತಿ, ಸವಿತಾ ಕರಿಗಾರ,ಕಾಂಚನಾ ಆರ್,ರೇಣುಕಾ ನಾಯ್ಕ ಹಾಗೂ ಸಹ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

