ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ತೈಲ ಬೆಲೆ ಹೆಚ್ಚಳವಾಗುವ ಸಾಧ್ಯತೆ ನೀವು ದಿನಪತ್ರಿಕೆಗಳಲ್ಲಿ ಓದಿರಬಹುದು. ಅದರಲ್ಲೂ ಸೂರ್ಯ ಕಾಂತಿ ಎಣ್ಣೆ ಕುರಿತು ವರದಿ ಬಂದಿವೆ. ಇಂತಹ ಸಂದರ್ಭದಲ್ಲಿ ದೇಶೀ ಎಣ್ಣೆ ತಯಾರಕರನ್ನು ಉತ್ತೇಜಿಸುವುದು ಸೂಕ್ತ.
ಸವದತ್ತಿಯಲ್ಲಿ ಅನೇಕ ಮನೆತನಗಳು ಗಾಣಿಗ ವೃತ್ತಿಯಿಂದ ಬದುಕನ್ನು ನಡೆಸುತ್ತಿವೆ.
ಅದರಲ್ಲೂ ದೇಸಿ ಸೊಗಡನ್ನು ಉಳಿಸಿಕೊಂಡು ಮೂಲ ವೃತ್ತಿಯನ್ನು ಕಟ್ಟಿಗೆಯ ಮತ್ತು ಆಧುನಿಕ ತಂತ್ರಜ್ಞಾನದ ಗಾಣದೊಂದಿಗೆ ಗುರ್ಲಹೊಸೂರಿನ ನಡುವಿನ ಹಳ್ಳಿ ಎಂಬ ಸ್ಥಳದಲ್ಲಿ ಮಹಾಂತೇಶ ಶಂಕರಪ್ಪ ಗಾಣಿಗೇರ ಎಂಬ ಗಾಣಿಗ ಮನೆತನದ ಕುಟುಂಬದ ಗಾಣದ ಎಣ್ಣೆ ತಗೆಯುವ ಕಾಯಕ ನಿಜಕ್ಕೂ ಶ್ಲಾಘನೀಯ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಾದ್ಯಂತ ಗಾಣಿಗ ಸಮಾಜದ ಮನೆತನಗಳಿವೆ. ತಮ್ಮ ವೃತ್ತಿಯ ಜೊತೆಗೆ ವ್ಯಾಪಾರ, ಕೃಷಿ, ವೈದ್ಯಕೀಯ, ಶಿಕ್ಷಣ. ಬ್ಯಾಂಕ್ವಾಣಿಜ್ಯೋದ್ಯಮ.ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧಕರಾಗಿ ಕೂಡ ಸಮಾಜದ ಮುಂಚೂಣಿಯಲ್ಲಿರುವರು. ಇವರ ನಡುವೆ ಸವದತ್ತಿ ಗುರ್ಲಹೊಸೂರಿನ ಚಿದಂಬರೇಶ್ವರ ದೇವಾಲಯದ ನಂತರ ಬರುವ ನಡುವಿನ ಹಳ್ಳಿ ಪ್ರದೇಶದಲ್ಲಿ ಗಾಣದ ಎಣ್ಣೆಯ ಮೂಲಕ ತಮ್ಮ ಬದುಕನ್ನು ನಡೆಸುತ್ತಿರುವ ಮಹಾಂತೇಶ ಶಂಕರಪ್ಪ ಗಾಣಿಗೇರ ತಮ್ಮ ಕುಲಕಸುಬನ್ನು ಆಧುನಿಕ ಮತ್ತು ಹಳೆಯ ತಂತ್ರಜ್ಞಾನದ ಮೂಲಕ ಬದುಕನ್ನು ನಡೆಸುತ್ತಿರುವರು.
ನಾವಿಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಅಡುಗೆ ಎಣ್ಣೆಯ ತಯಾರಿಕೆಯನ್ನು ವಿವಿಧ ರೀತಿಯ ಎಣ್ಣೆಯನ್ನು ಜಾಹೀರಾತುಗಳಲ್ಲಿ ಗಮನಿಸುತ್ತೇವೆ. ಬಹುರಾಷ್ಟ್ರೀಯ ಕಂಪನಿಗಳು ಎಣ್ಣೆ ಕ್ಷೇತ್ರಕ್ಕೆ ಕಾಲಿಟ್ಟು ಹಳೆಯ ಸಂಪ್ರದಾಯದ ಗಾಣಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮನೆತನದ ಕುಲಕಸುಬನ್ನು ವೃತ್ತಿ ಬದುಕಾಗಿಸಿಕೊಂಡವರು ಸಿಗುವುದು ವಿರಳ.
ಅದಕ್ಕೆ ಹತ್ತು ಹಲವು ಕಾರಣಗಳಿವೆ ಕೂಡ. ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ ಎಣ್ಣೆ ಎಂದರೆ ಅದನ್ನು ಗಾಣದವರೇ ತಯಾರಿಸಬೇಕಿತ್ತು. ಗಾಣಕ್ಕೆ ಎತ್ತುಗಳನ್ನು ಕಟ್ಟಿ ಎಣ್ಣೆ ತಗೆಯುವುದೇ ಅವರ ಕುಲಕಸುಬಾಗಿತ್ತು. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿತ್ತು.
ಸ್ವಾತಂತ್ರ್ಯಾ ನಂತರ ಗಾಣಗಳು ಕಣ್ಮರೆಯಾಗತೊಡಗಿದವು. ಬಹುರಾಷ್ಟ್ರೀಯ ಕಂಪನಿಗಳು ಸ್ವದೇಶಿ ವಸ್ತುಗಳು ನೂತನ ತಂತ್ರಜ್ಞಾನದ ಆಕರ್ಷಣೆಯ ಮೂಲಕ ಮೂಲ ಕುಲಕಸುಬಿನ ಜನ ತಮ್ಮ ಉದ್ಯೋಗಗಳನ್ನು ಬದಲಿಸುವಂತಾಯಿತು. ಆದರೂ ಇಂದಿಗೂ ಹಳೆಯ ಗಾಣಗಳನ್ನು ಗಾಣಿಗಮನೆತನಗಳಲ್ಲಿ ನಾವು ಕಾಣಬಹುದು.
ಈ ದಿಸೆಯಲ್ಲಿ ಸವದತ್ತಿ ಹೃದಯಭಾಗದಲ್ಲಿ ಹಳೇಮನಿಯವರ ಮನೆತನವು ಕೂಡ ಇಂದಿಗೂ ಗಾಣದ ಎಣ್ಣೆಯ ತಯಾರಿಕೆಯಲ್ಲಿ ತಮ್ಮ ಕುಲಕಸುಬನ್ನು ಉಳಿಸಿಕೊಂಡು ಬಂದಿರುವುದನ್ನು ಇಲ್ಲಿ ಉಲ್ಲೇಖಿಸುವೆನು.
ಇದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಗಾಣದ ಎಣ್ಣೆಯ ತಯಾರಿಕೆಯ ಮೂಲಕ ಬದುಕನ್ನು ಕಟ್ಟಿಕೊಂಡ ಮಹಾಂತೇಶ ಶಂಕರಪ್ಪ ಗಾಣಿಗೇರ ಅವರ ಸ್ವದೇಶಿ ಅಭಿಮಾನದ ಕತೆಯನ್ನು ತಿಳಿಸಬಯಸುವೆನು. ನಾನು ಇತ್ತೀಚಿಗಷ್ಟೇ ಸುರೇಬಾನಕ್ಕೆ ಹೋಗಿದ್ದೆ ಅಲ್ಲಿ ಸುರೇಬಾನ ಸಮೀಪ ಶಬರಿ ಗಾಣದ ಎಣ್ಣೆಯ ತಯಾರಿಕೆಯ ಘಟಕವನ್ನು ಕಂಡು ಅಲ್ಲಿ ತಯಾರಾದ ಸೇಂಗಾ ಎಣ್ಣೆ ಖರೀದಿಸಿ ಬಂದಿದ್ದೆನು. ಸವದತ್ತಿಯ ಹಳೇಮನಿಯವರ ಮತ್ತು ಮುನವಳ್ಳಿಯ ಗಾಣಿಗೇರ ಮನೆಯಲ್ಲಿ ಕೊಬ್ಬರಿ ಗಾಣ ಆಡಿಸಿ ಕೊಬ್ಬರಿ ಎಣ್ಣೆಯನ್ನು ಕಳೆದ ಹತ್ತು ವರ್ಷಗಳಿಂದ ಬಳಕೆ ಮಾಡುತ್ತಿದ್ದೆನು. ಈಗ ಮಹಾಂತೇಶ ಶಂಕರಪ್ಪ ಗಾಣಿಗೇರ ಅವರ ಗಾಣದ ಎಣ್ಣೆಯ ಉದ್ಯೋಗದ ಬಗ್ಗೆ ಪರಿಚಯಿಸುವೆನು.
ಆನುವಂಶಿಕ ವೃತ್ತಿ:
ಇವರು ತಮ್ಮ ತಂದೆಯ ಕಾಲದಿಂದಲೂ ಈ ವೃತ್ತಿಯನ್ನು ನೆಚ್ಚಿಕೊಂಡು ಬದುಕನ್ನು ನಡೆಸುತ್ತಿರುವರು. ಇವರ ಮೂಲ ಸ್ಥಳ ಖಾನಾಪೂರ ಹತ್ತಿರದ ಗಂದಿಗವಾಡ. ಗುರ್ಲಹೊಸೂರಿನ ಖಾದಿ ಕೇಂದ್ರದಲ್ಲಿ ಇವರ ತಂದೆ ಗಾಣವನ್ನು ನಡೆಸುವ ಉದ್ಯೋಗದಲ್ಲಿ ಇದ್ದ ಕಾರಣ ಇವರ ಕುಟುಂಬ ಗುರ್ಲಹೊಸೂರಿಗೆ ಸ್ಥಳಾಂತರವಾಗಿದ್ದು ಈಗ ಇತಿಹಾಸ. ತಂದೆಯೊಡನೆ ಮಗನೂ ಕೂಡ ಗಾಣಕ್ಕೆ ಹೋಗಿ ತಂದೆಯೊಡನೆ ಸಹಾಯಕನಾಗಿ ಗಾಣವನ್ನು ಆಡಿಸುತ್ತಿದ್ದ.
ಜೊತೆಗೆ ಹಳ್ಳಿಗಳಿಗೆ ಹೋಗಿ ಎಣ್ಣೆಯ ಮಾರುವ ಕಾಯಕ ವೃತ್ತಿಯನ್ನು ಕೂಡ ಮಾಡತೊಡಗಿದ್ದ. ತಂದೆಯನಿಧನಾನಂತರ ಮಗನನ್ನು ಕೇಂದ್ರದವರು ಕೆಲಸಕ್ಕೆ ಕರೆದುಕೊಂಡರೂ ಕೂಡ ಕೆಲಸ ಖಾಯಂ ಆಗುವಂತಿರದ ಕಾರಣ ಸ್ವಂತ ಕಾಲಮೇಲೆ ನಿಲ್ಲಬೇಕು ಎಂದು ಹಳ್ಳಿ ಹಳ್ಳಿಗೆ ತಿರುಗುತ್ತ ಕುಸುಬಿ ವ್ಯಾಪಾರ ಮಾಡಿ ಅದನ್ನು ಗಾಣಕ್ಕೆ ಹಾಕಿಸಿ ಕುಸುಬಿ ಎಣ್ಣೆ ಮಾರಾಟ ಮಾಡುತ್ತ ಬದುಕನ್ನು ಸಾಗಿಸತೊಡಗಿದರು.
ಇವರ ಈ ಕಾಯಕ ಹೀಗೆ ಸಾಗಿರುವಾಗ ಗುರ್ಲಹೊಸೂರಿನ ನಡುವಿನ ಹಳ್ಳಿಯ ತಮ್ಮ ಸ್ವಂತ ನಿವೇಶನದಲ್ಲಿ ಗಾಣ ಹಾಕಿ ಸ್ವಂತ ಎಣ್ಣೆಯ ತಗೆಯಬಾರದೇಕೆ.? ಎಂಬ ಆಲೋಚನೆ ಇವರ ತಲೆಯಲ್ಲಿ ಸುಳಿಯಿತು. ಅದರ ಪರಿಣಾಮ ಹಳೆಯ ಮನೆಯನ್ನು ನವೀಕರಣಗೊಳಿಸಿ ಗಾಣಗಳನ್ನು ಸ್ವಂತ ಖರ್ಚಿನಲ್ಲಿ ಅಳವಡಿಸಿ ಕಷ್ಟಪಟ್ಟು ಆಧುನಿಕ ತಂತ್ರಜ್ಞಾನದ ಗಾಣಗಳಿಂದ ಎಣ್ಣೆ ತಗೆಯುತ್ತ ಬದುಕನ್ನು ಸಾಗಿಸತೊಡಗಿದರು. ಇವರ ಪತ್ನಿ ಇವರೊಂದಿಗೆ ಕೈ ಜೋಡಿಸಿದರು.
ಜೊತೆಗೆ ಮಗನೂ ಕೂಡ ತಂದೆಯ ಕಾಯಕಕ್ಕೆ ಕೈ ಜೋಡಿಸಿದ. ಆದರೆ ಮಾರುಕಟ್ಟೆ ಬೇಕಲ್ಲವೇ.? ಮೊದಲು ದ್ವಿಚಕ್ರ ವಾಹನ ಬಳಸಿ ಸವದತ್ತಿ ಸುತ್ತಮುತ್ತಲಿನ ಸಿಂಗಾರಗೊಪ್ಪ.ಕರೀಕಟ್ಟಿ.ಹಿರೇ ಉಳ್ಳಿಗೇರಿ.ಅಸುಂಡಿ.ಹೂಲಿ ಹೀಗೆ ಹಲವು ಊರುಗಳಲ್ಲಿ ತಾವು ತಯಾರಿಸಿದ ಎಣ್ಣೆಯನ್ನು ಮಾರಿ ಬಂದ ಹಣದಿಂದ ಉಪಜೀವನ ಸಾಗಿಸತೊಡಗಿದರು. ಇಷ್ಟಕ್ಕೆ ಕುಟುಂಬ ನಿರ್ವಹಣೆ ಸಾಲಬೇಕಲ್ಲವೇ.? ಎಣ್ಣೆ ತಯಾರಿಕೆಗೆ ಬೇಕಾಗುವ ಕುಸುಬಿ, ಶೇಂಗಾ, ಕೊಬ್ಬರಿ, ಹೀಗೆ ವಿವಿಧ ದಾನ್ಯಗಳನ್ನು ಖರೀದಿಸಬೇಕು. ನಂತರ ಅವುಗಳ ಎಣ್ಣೆ ತಗೆಯಬೇಕು. ಅದಕ್ಕೆ ಗ್ರಾಹಕರು ಬರಬೇಕು, ದೇಸಿ ಸೊಗಡಿನ ಬೆಲೆಯಲ್ಲಿ ಸ್ವಚ್ಚ ಮತ್ತು ಪಾರದರ್ಶಕತೆ ಇದ್ದಾಗಲೂ ಕೂಡ ಬೆಲೆಯ ಹೆಚ್ಚಳವನ್ನು ಗಮನಿಸಿ ಗ್ರಾಹಕರು ಕಡಿಮೆ ಬೆಲೆಯ ಎಣ್ಣೆಯತ್ತ ಆಕರ್ಷಿತರಾಗಿ ಮೂಲ ವೃತ್ತಿಗರು ಹಾಕಿದ ಭಂಡವಾಳ ಮರಳಿ ಪಡೆಯುವಷ್ಟರಲ್ಲಿ ಹೈರಾಣಾಗಿ ಬದುಕು ದುಸ್ತರವಾಗುತ್ತಿರುವ ಇಂತಹ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಶುದ್ಧ ಎಣ್ಣೆ ಘಟಕವನ್ನು ಕಳೆದ ಎರಡು ವರ್ಷಗಳ ಹಿಂದೆ ಇರುವ ಕಟ್ಟಡವನ್ನು ಹೊಸ ರೂಪದಲ್ಲಿ ವಿನ್ಯಾಸಗೊಳಿಸಿ ಬಂಡವಾಳ ಹೂಡಿ ಮೂರು ವಿವಿಧ ಮಾದರಿಯ ಗಾಣಗಳನ್ನು ಅಳವಡಿಸಿದರು.
ಕಷ್ಟ ಸುಖದ ನಡುವಿನ ಬದುಕು:
ಪ್ರಾಮಾಣಿಕತೆಯ ಇವರ ವ್ಯಕ್ತಿತ್ವಕ್ಕೆ ದಿನಗಳೆದಂತೆ ಸ್ವದೇಶಿ ಅಂದೋಲನಕ್ಕೆ ಕಟ್ಟು ಬಿದ್ದ ಗ್ರಾಹಕರು ಇವರ ಮನೆಯವರೆಗೂ ಬಂದು ಎಣ್ಣೆಯನ್ನು ತಗೆದುಕೊಳ್ಳತೊಡಗಿದರು. ಕೋರೋನಾ ಬದುಕಿನ ಹತ್ತು ಹಲವು ಪಾಠಗಳನ್ನು ಕಲಿಸಿದಾಗ ರಾಸಾಯನಿಕ ಯುಕ್ತ ಆಹಾರಗಳನ್ನು ದೂರ ಮಾಡತೊಡಗಿದ ಜನತೆ ಕುಸುಬಿ ಎಣ್ಣೆ. ಸೇಂಗಾ ಎಣ್ಣೆ. ಕೊಬ್ಬರಿ ಎಣ್ಣೆ. ಸಾಸಿವೆ ಎಣ್ಣೆಗಳತ್ತ ತಮ್ಮ ಚಿತ್ತ ಹರಿಸತೊಡಗಿದರು.
ಇವರ ಗಾಣಗಳಲ್ಲಿ ಕಟ್ಟಿಗೆಯ ಗಾಣ.ಕೊಬ್ಬರಿ ಎಣ್ಣೆಯ ಗಾಣ. ಕುಸುಬಿ ಒಡೆಯುವ ಯಂತ್ರ ಅದನ್ನು ಸಾರಣಿಗೆ ಮಾಡುವ ಯಂತ್ರ. ಗಾಳಿಯ ಯಂತ್ರ. ಹೀಗೆ ಹಲವು ಯಂತ್ರಗಳಿವೆ.ಜೊತೆಗೆ ಹೊರಗಿನಿಂದ ದಾನ್ಯಗಳನ್ನು ತಂದವರಿಗೆ ಕೂಡ ಎಣ್ಣೆಯನ್ನು ನಿಗದಿತ ದರದಲ್ಲಿ ಹಾಕಿ ಕೊಡುವ ವ್ಯವಸ್ಥೆ ಇದೆ. ಸ್ವಚ್ಚ ಮತ್ತು ಯಾವುದೇ ಕಲಬೆರಕೆ ಇಲ್ಲದ ಎಣ್ಣೆ ತಗೆಯುವ ಇವರ ಸೇವಾ ವೃತ್ತಿ ಸುತ್ತ ಮುತ್ತಲಿನ ಜನರಿಗೆ ಇಷ್ಟವಾಗಿ ಇವರ ಮನೆಯವರೆಗೂ ಬಂದು ಎಣ್ಣೆಯನ್ನು ತಗೆದುಕೊಳ್ಳುವಂತಾಗಿದ್ದು ಈ ಎರಡು ವರ್ಷಗಳಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಾಗುತ್ತಿಲ್ಲ ಎಂದು ಹೆಮ್ಮೆಯಿಂದಹೇಳುವ ಮಟ್ಟಿಗೆ ಇವರ ಗಾಣದ ಎಣ್ಣೆಯ ವ್ಯವಹಾರ ಸಾಗಿರುವುದನ್ನು ಹೇಳುವಾಗ ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿರುವುದನ್ನು ಗಮನಿಸಿದೆ.
ಅಷ್ಟೇ ಅಲ್ಲ ಕಷ್ಟದ ದಿನಗಳನ್ನು ಕೂಡ ಮೆಲಕು ಹಾಕಿದರು ೧೯೯೭ ರಲ್ಲಿ ೪೦೦ ಬಂಡವಾಳ ಹಾಕಿ ಎಣ್ಣೆಯನ್ನು ಬೇರೆಯವರ ಗಾಣದಲ್ಲಿ ತಗೆಯಿಸಿ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡಿದಾಗ ೨೦೦ ರೂಪಾಯಿ ವ್ಯವಹಾರವಾಗಿ ೨೦೦ ರೂಪಾಯಿ ಲುಕ್ಸಾನ ಆಗಿದ್ದನ್ನು ನೆನೆದು ಕಣ್ಣೀರು ತಂದ ಮಹಾಂತೇಶರಿಗೆ ಈಗ ಐವತ್ತು ವಯಸ್ಸು. ಪತ್ನಿ ಪಾರ್ವತಿ ಕೂಡ ಕೈ ಜೋಡಿಸಿ ಗಾಣದ ಎಣ್ಣೆಯ ತಯಾರಿಕೆಯಲ್ಲಿ ಮಗ್ನಳಾಗಿರುವಳು.
ಕೌಟುಂಬಿಕ ಬದುಕು:
ಇವರಿಗೆ ನಾಲ್ಕು ಜನ ಮಕ್ಕಳು ಚಂದ್ರಿಕಾ, ಚೈತ್ರಾ, ಮನೋಜ, ಹೇಮಾ, ಮಕ್ಕಳನ್ನು ಚನ್ನಾಗಿ ಓದಿಸಿರುವ ದಂಪತಿ. ಓರ್ವ ಮಗಳನ್ನು ಬಿ.ಎಸ್.ಸಿ ನರ್ಸಿಂಗ್ ಓದಿಸಿದ್ದರೆ. ಮತ್ತೊಬ್ಬ ಮಗಳು ಕೂಡ ಬಿ.ಕಾಂ ಪದವಿ ಮುಗಿಸಿ ಎ.ಎನ್ಎಂ ಟ್ರೇನಿಂಗ ಮಾಡಿದ್ದು ಇನ್ನೋರ್ವ ಮಗಳು ವಾಣಿಜ್ಯ ಪದವಿ ಮುಗಿಸಿರುವಳು ಮಗ ಶಿಕ್ಷಣದ ಜೊತೆಗೆ ತಂದೆಯ ಉದ್ಯೋಗಕ್ಕೆ ಕೈ ಜೋಡಿಸಿರುವನು. ಕುಲಕಸುಬು ನಿಲ್ಲಬಾರದು ಎಂದು ಯೋಚಿಸಿ ಈಗ ಬುಲೋರೋ ಖರೀದಿಸಿ ಅದರಲ್ಲಿ ಎಣ್ಣೆಯನ್ನು ತಗೆದುಕೊಂಡು ಸವದತ್ತಿ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಸ್ವದೇಶಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಗಾಣದಲ್ಲಿ ತಯಾರಾಗುವ ಎಣ್ಣೆಯನ್ನು ಬಳಸಿ ಎಂದುಕೊಂಡು ಎಣ್ಣೆಯ ಮಾರಾಟದ ಕಾರ್ಯದಲ್ಲಿ ತೊಡಗಿರುವನು.
ಇತಿಹಾಸ ದಲ್ಲಿ ಗಾಣಿಗರು “ಎಳ್ಳು ಗಾಣಿಗ ಬಲ್ಲ. ಊರಿಗೊಬ್ಬ ಗಾಣಿಗ ಶ್ರೇಷ್ಠ. ಗಾಣಿಗರಿಲ್ಲದ ಊರಿಲ್ಲ.”ಎಂದೆಲ್ಲ ಇ ನಾವು ಗಾಣಿಗರ ಮಹತ್ವವನ್ನು ಕಾಣುತ್ತೇವೆ.
ಅಷ್ಟೇ ಏಕೆ.?ಕ್ಷತ್ರೀಯ ರಾಜ ವಿಕ್ರಮಾದಿತ್ಯನ ಕತೆಯಲ್ಲಿ ಶನಿದೇವನ ದೃಷ್ಟಾಂತದಲ್ಲಿ ವಿಕ್ರಮಾದಿತ್ಯನಿಗೆ ಪ್ರತ್ಯಕ್ಷನಾದ ಶನಿದೇವನು ಏನಾದರೂ ವರವನ್ನು ಬೇ “ಹೇ ದೇವಾ ಗಾಣಿಗರು ನನ್ನನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.ನನಗೆ ಆಸರೆ
ಬ ನೀಡಿದ್ದಾರೆ.
ಕಾರಣ ನೀನು ಅವರನ್ನು ಕಾಡುವುದಿಲ್ಲವೆಂದು ವರವನ್ನು ಕೊಡು”ಎಂದು ಕೇಳಿದನಂತೆ ಇದು ಗಾಣಿಗರ ಮಹತ್ವವನ್ನು ಸಾರುತ್ತದೆ. ಅಷ್ಟೇ ಏಕೆ ಕರಿ ಕುಲ ಗಾಣಿಗರ ಕುರಿತು ಬದಾಮಿ ಚಾಲುಕ್ಯರ ಸಾಮಂತರೆನಿಸಿಕೊಂಡ ವಿನಯಾದಿತ್ಯ ನಿ ಆನೆಗಳನ್ನು ಮೇಯಿಸುತ್ತಿದ್ದನಂತೆ ಎಂದು ಪಂಪ ತನ್ನ ಕೃತಿಯಲ್ಲಿ ಹೇಳಿರುವನು.
ಕರಿಯ ಕುಲದವರು ಸಮಾಜದಲ್ಲಿ ನ್ಯಾಯಗಳ ತೀರ್ಪು ನೀಡುವ ಸ್ಥಾನದಲ್ಲಿದ್ದರು ಎಂದು ದಾಖಲೆಗಳಲ್ಲಿ ದೊರೆಯುತ್ತದೆ. ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿ ಗಜ ಪಡೆಯ ಉಸ್ತುವಾರಿಯನ್ನು ಕರಿಯ ಗಾಣಿಗರು ವಹಿಸಿಕೊಂಡಿದ್ದರಂತೆ. ನಾಡಿನ ತುಂಬೆಲ್ಲ ವಿವಿಧ ಹೆಸರಿನ ಗಾಣಿಗ ಸಮುದಾಯಗಳು ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಹೆಸರುಗಳಲ್ಲಿ ವಾಸಿಸುತ್ತಿರುವರು. ಮುನವಳ್ಳಿಯ ಐತಿಹಾಸಿಕ ಪಂಚಲಿಂಗೇಶ್ವರ ದೇವಾಲಯದಲ್ಲಿರುವ ದೇವಗಿರಿ ಯಾದವರ ಶಾಸನದಲ್ಲಿ ಕೂಡ ಗಾಣಿಗರು ದೇವಾಲಯಕ್ಕೆ ವರ್ಷಪೂರ್ತಿ ದೀಪಕ್ಕೆ ಎಣ್ಣೆ ನೀಡಲು ಉಂಬಳಿ ನೀಡಿದ ವಿವರಣೆಯನ್ನು ಉಲ್ಲೇಖಿಸಲಾಗಿದೆ.
ಪುರುಷೋತ್ತಮನ ಅನುಜ ಜೋಗದೇವ ಅತ್ಯಂತ ಭಕ್ತಿಯಿಂದ ಪಂಚಲಿಂಗೇಶ್ವರ ನೆಲೆನಿಂತ ಪುಣ್ಯದ ತಾಣ ಮುನವಳ್ಳಿಯನ್ನು ಶಿವಪುರವಾಗಿಸಲು ೧೬ ಶಿವಪುರ ವಿಪ್ರರಿಗೆ ದತ್ತಿ ಕೊಟ್ಟಿರುವನು.
ಪ್ರತಿ ವಿಪ್ರರಿಗೆ ಪ್ರತ್ಯೇಕ ತಮ್ಮ ೨೦೦ ರಂತೆ ಹಳೆಯ ಊರಿನ ಹದ್ದಿನಿಂದ ಸಿಂದವಿಗೆಯಲ್ಲಿ ನೂರು, ನಾಗಪುರದಲ್ಲಿ ಹದಿನಾರು, ವ್ಯಾಪ್ತಿಯನ್ನು ದ್ವಿಜರಿಗೆ ಬಿಟ್ಟುಕೊಡುವ ಮೂಲಕ ಮುನಿಪುರದ ತೋಟಿಗರು ವರ್ಷಂಪ್ರತಿ ಎಲೆಗಳು”, ಗಾಣದ ಎಣ್ಣೆ,ಹೂವುಗಳು ಪ್ರತಿಯೊಂದು ದಾನ್ಯಗಳನ್ನು ಪೂಜಾ ಕಾರ್ಯ ಸಾಂಗವಾಗಿ ಸಾಗಲು ವಹಿಸಿಕೊಟ್ಟಿರುವ ಬಗ್ಗೆ ಶಾಸನದಲ್ಲಿ ವಿವರಣೆಯಿದೆ.
ಅಂದರೆ ರಾಜ ಮಹರಾಜರುಗಳು ಗಾಣಿಗರು ವರ್ಷಂಪೂರ್ತಿ ದೇವಾಲಯಕ್ಕೆ ವಿವಿಧ ವೃತ್ತಿಯವರು ಪೂಜಾ ಕಾರ್ಯಗಳು ವ್ಯವಸ್ಥಿತವಾಗಿ ಸಾಗಲು ಉಂಬಳಿ ಕೊಟ್ಟಿರುವ ದಾಖಲೆಯನ್ನು ಶಾಸನಗಳಲ್ಲಿ ಕಾಣುತ್ತೇವೆ. ಅದೇನೇ ಇರಲಿ ಸವದತ್ತಿ ಮತ್ತು ಸುತ್ತಮುತ್ತಲಿನ ಜನರು ಗಾಣದಲ್ಲಿ ತಯಾರಾದ ದೇಹದ ಆರೋಗ್ಯಕ್ಕೆ ಪೂರಕವಾದ ಎಣ್ಣೆಯನ್ನು ಬಳಕೆ ಮಾಡುವ ಮೂಲಕ ತಮ್ಮ ಶರೀರದ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳುವುದಲ್ಲದೇ ಮೂಲ ಕಸುಬನ್ನು ಉತ್ತೇಜಿಸಿದರೆ ಸಮಾಜದಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಉದ್ಯೋಗಗಳು ಪುನಶ್ಚೇತನ ಪಡೆದು ಮತ್ತೆ ನಮ್ಮತನ ನಮ್ಮ ಬದುಕನ್ನು ಉಳಿಸಲು ಸಾಧ್ಯ. ಈ ದಿಸೆಯಲ್ಲಿ ಶ್ರೀ ಸಿದ್ದೇಶ್ವರ ಶುದ್ಧ ಗಾಣದ ಎಣ್ಣೆ ತಯಾರಿಕಾ ಘಟಕವನ್ನು ಸಂಪರ್ಕಿಸಿ ಅವರ ಈ ವೃತ್ತಿ ಬದುಕಿಗೆ ಪ್ರೋತ್ಸಾಹ ನೀಡಿ. ಮಹಾಂತೇಶ ಶಂಕರೆಪ್ಪ ಗಾಣಿಗೇರ ಇವರ ಸಂಪರ್ಕ ಸಂಖ್ಯೆ. ೯೯೦೦೧೧೯೫೪೯
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು