Homeಸುದ್ದಿಗಳುಸಂಕ್ರಾಂತಿ ಆಚರಣೆ

ಸಂಕ್ರಾಂತಿ ಆಚರಣೆ

ಮುನವಳ್ಳಿ : ಸಮೀಪದ ಸಿಂದೋಗಿ ಗ್ರಾಮದ ಮಾರುತಿ ಬಡಾವಣೆ ಯ ಮಾರುತಿ ಮಂದಿರದಲ್ಲಿ ಸಂಕ್ರಾಂತಿ ಯನ್ನು ಜನಪದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಚರಿಸಲಾಯಿತು.

ಇದಕ್ಕಾಗಿ ಕಳೆದ ನಾಲ್ಕೈದು ದಿನದಿಂದ ಪೂರ್ಣ ಸಿದ್ದತೆ ಮಾಡಿಟ್ಟು ಕೊಳ್ಳಲಾಗಿತ್ತು. ಸೆಗಣಿಯಿಂದ ಕುಳ್ಳು ತಯಾರಿಸಿ ಒಣಗಿಸಿ ಮನೆಯ ಅಂಗಳವನ್ನು ಸಾರಿಣಿಗೆಯ ಮಾಡಿ ಅದರಲ್ಲಿ ಸೂರ್ಯ ನ ಚಿತ್ತಾರ ಬರೆದು ರಂಗವಲ್ಲಿ ಹಾಕಿ. ಒಣಗಿದ ಕುಳ್ಳು ಸೂರ್ಯನ ಆಕೃತಿಯ ಸುತ್ತಲೂ ಇಟ್ಟು ಸಣ್ಣ ಬಟ್ಟಲಿನಲ್ಲಿ ಗೋವಿನ ಹಾಲು ತಗೆದುಕೊಂಡು ಸೂರ್ಯದೇವನ ಆರಾಧನೆ ಮಾಡಿ ಕರ್ಪೂರ ದಿಂದ ಅಗ್ನಿ ಸ್ಪರ್ಶ ಕೈಗೊಂಡು ಅಲ್ಲಿ ಹಾಲು ಉಕ್ಕಿಸುವ ಜೊತೆಗೆ ಉರಿಯುವ ಬೆಂಕಿಯಲ್ಲಿ ಕಪ್ಪು ಮತ್ತು ಬಿಳಿ ಎಳ್ಳು ಹಾಕುತ್ತಾ ದೇವರಲ್ಲಿ ಭೂಮಿಯ ಮೇಲೆ ಮಳೆ ಬೆಳೆ ಚನ್ನಾಗಿ ಬರಲಿ. ಪ್ರಕೃತಿ ಮಾತೆ ಮುನಿಸಿಕೊಳ್ಳದಿರಲಿ ಎಂದು ಪ್ರಾರ್ಥಿಸಿ ನಂತರ ಮನೆಯಲ್ಲಿ ತಯಾರಿಸಿದ ಎಳ್ಳು ಬೆಲ್ಲ ನೈವೇದ್ಯ ಮಾಡಿ. ತೆಂಗಿನಕಾಯಿ ಒಡೆದು ಕೊಬ್ಬರಿ ಇಟ್ಟು ಆರಾಧಿಸುವ ಮಕರ ಸಂಕ್ರಾಂತಿ ಸಿಂದೋಗಿ ಮಾರುತಿ ಬಡಾವಣೆ ಯಲ್ಲಿ ಮಾರುತಿ ಮಂದಿರದಲ್ಲಿ ಇಂದು ಜರುಗಿತು. ಅಳಿದು ಹೋಗುತ್ತಿರುವ ಈ ಸತ್ಸಂಪ್ರದಾಯದ ಆಚರಣೆ ಯ ಮಹತ್ವ ಮುಂದಿನ ಪೀಳಿಗೆಗೆ ಪರಿಚಯಿಸುವಂತಾಗಲಿ ಎಂದು ಹನುಮಾನ್ ಮಂದಿರ ಅರ್ಚಕರಾದ ಶಾಮರಾವ್ ಕುಲಕರ್ಣಿ ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ, ಶರಣೆ ಶಿವಬಸಮ್ಮ ಜಂತಲಿ,ಮಹಾದೇವಿ ಹಾಗೂ ಗಂಗಮ್ಮ ಕಡಕೋಳ ಸೇರಿದಂತೆ ಮಾರುತಿ ಬಡಾವಣೆ ನಾಗರಿಕರು ಸಂಕ್ರಾಂತಿ ಆಚರಣೆ ಯಲ್ಲಿ ಪಾಲ್ಗೊಂಡಿದ್ದರು.ಉತ್ತರ ಕರ್ನಾಟಕದಾದ್ಯಂತ ಮಕರ ಸಂಕ್ರಾಂತಿ ಹಬ್ಬ ವನ್ನು ಮೂರು ದಿನಗಳ ಕಾಲ ಭೋಗಿ,ಸಂಕ್ರಮಣ,ಕರಿ ಎಂದು ಆಚರಿಸುವರು.ಮೊದಲ ದಿನ ಎಳ್ಳು ಅರಿಷಿಣ ಹಚ್ಚಿ ಕೊಂಡು ತಲೆ ಸ್ನಾನ ಮಾಡಿ ಕಡಲೇಕಾಯಿ ಅವರೇಕಾಳು ಮೊದಲಾದ ಎಲ್ಲಾ ರೀತಿಯ ಕಾಯಿಪಲ್ಯ ಕೂಡಿಸಿ ಲಿಂಬೆರಸ ಮಿಶ್ರಣ ಮಾಡಿ ಬದನೆಕಾಯಿ ಭರ್ತ ಹಾಗೂ ಸಜ್ಜೆ ರೊಟ್ಟಿ ಬೆಲ್ಲದ ಮಾದಲಿ ತಯಾರಿಸುವ ಮೂಲಕ ನೈವೇದ್ಯ ಮಾಡುವ ಎರಡನೇ ದಿನ ನದಿ ತೀರದಲ್ಲಿ ಮನೆಯವರೆಲ್ಲರೂ ಸೇರಿ ಸ್ನಾನ ಮಾಡಿ ನದಿ ಪೂಜೆ ಮಾಡಿ ವಿವಿಧ ಖಾದ್ಯ ತಯಾರಿಸಿಕೊಂಡು ಬದನೆಕಾಯಿ ಪಲ್ಯ ಅವರೇಕಾಳು ಪಲ್ಯ ಖಾರ, ಚಟ್ನಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ ಮೊಸರನ್ನ ಅನ್ನ ಸಾರು ಹೀಗೆ ಅಡುಗೆಯೊಂದಿಗೆ ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಊಟ ಮಾಡಿ ಬರುವ ಜೊತೆಗೆ ಎಳ್ಳು ಬೆಲ್ಲ ಸೇರಿಸಿ ಮಿಶ್ರಣ ನೀಡುತ್ತ ನಾವು ನೀವು ಎಳ್ಳು ಬೆಲ್ಲ ದ ಹಾಗೆ ಇರೋಣ ಎಂದು ಭಾವೈಕ್ಯತೆ ಮೂಡಿಸುವ ಸಂಕ್ರಾಂತಿ ಜರುಗಿದರೆ,ಮಾರನೆಯ ದಿನ ಕರಿ ಹಬ್ಬ ಮಾಡುವರು. ಮನೆಯಲ್ಲಿ ಕರಿದ ಪದಾರ್ಥ ಉದಾಹರಣೆಗೆ ದೋಸೆ ಮಾಡಿ ಚೊಚ್ಚಲ ಮಕ್ಕಳ ಬೆನ್ನಿಗೆ ಬಡಿದು ಎಡಗೈಯಿಂದ ಮೂರು ಸಲ ನಿವಾಳಿಸಿ ಮನೆಯ ಮಾಳಿಗೆಯ ಮೇಲೆ ಚಲ್ಲುವ ಮೂಲಕ ಮನೆಯವರೆಲ್ಲರೂ ದೋಸೆ ಸವಿಯುವ ಮೂಲಕ ಕರಿ ದಿನ ಆಚರಿಸುವ ಸಂಪ್ರದಾಯ ಉತ್ತರ ಕರ್ನಾಟಕ ಲ್ಲಿ ಇಂದಿಗೂ ಜರುಗುವ ಮೂಲಕ ಸಂಕ್ರಾಂತಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕರಿ ದಿನವನ್ನು ಕೆಟ್ಟ ಕರಿ ಎಂದೂ ಕರೆಯುತ್ತಾರೆ. ಈ ದಿನ ಯಾವ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅನಿಷ್ಟ ದಿನ ಎಂಬ ಪ್ರತೀತಿ ಇದೆ.


ವೈ. ಬಿ. ಕಡಕೋಳ
ಶಿಕ್ಷಕ, ಸಾಹಿತಿಗಳು
ಮುನವಳ್ಳಿ

RELATED ARTICLES

Most Popular

error: Content is protected !!
Join WhatsApp Group