ಎಲ್ಲಿಂದ ನೀ ಬಂದಿ ? ಎತ್ತಕಡೆ ನೀ ಹೊರಟಿ ?
ನೀನಾರು ? ನಿನಗಿಲ್ಲಿ ಕೆಲಸವೇನು?
ಈ ಪ್ರಶ್ನೆಗಳಿಗೆ ನೀನುತ್ತರವನರಸಿದರೆ
ದೊರೆತಂತೆ ಪರಮಾರ್ಥ – ಎಮ್ಮೆತಮ್ಮ
ಶಬ್ಧಾರ್ಥ
ಪರಮಾರ್ಥ = ಮೋಕ್ಷ
ತಾತ್ಪರ್ಯ
ಶಂಕರಾಚಾರ್ಯರು ತಮ್ಮ ಭಜಗೋವಿಂದಂ ಭಜನೆಯಲ್ಲಿ
ಕಸ್ತ್ವಂ ಕೋಹಂ ಕುತ ಆಯಾತ ಎಂದು ಪ್ರಶ್ನಿಸುತ್ತಾರೆ.ಅಂದರೆ
ನೀನು ಯಾರು ?ನಾನು ಯಾರು ? ಎಲ್ಲಿಂದ ಬಂದಿ ? ಇದನ್ನು
ಅರಿತುಕೊಂಡರೆ ಮಾತ್ರ ಜ್ಞಾನ ಲಭಿಸಿತ್ತದೆ. ಇದನ್ನೆ ಕನಕದಾಸರು ಎಲ್ಲಿಂದ ಬಂದೆ ಮುಂದೆತ್ತ ಪಯಣ ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ಎಂದು ಕೇಳುತ್ತ ತಾಯಿಯ
ಗರ್ಭದಲ್ಲಿ ಮಲಮೂತ್ರದಲ್ಲಿ ಹೊರಳಾಡಿ ಬಂದಿ ಮತ್ತು
ಮುಂದಾವ ಪಥವ ಸೇರುವೆ ಮರುಳೆ ಎನ್ಮುತ್ತ ಆಧ್ಯಾತ್ಮದ
ಕಡೆಗೆ ತಿರುಗಲು ಹೇಳುತ್ತಾರೆ. ರಮಣ ಮಹರ್ಷಿಗಳು ಸಹ
ನಾನಾರು ಎಂದು ಚಿಂತಿಸುತ್ತ ಮನೆಬಿಟ್ಟು ತಿರುವಣ್ಣಮಲೈ
ಸೇರಿ ಸಾಧಿಸಿ ಮಹಾಯೋಗಿಗಳಾದರು.ತತ್ತ್ವಮಸಿ ಎಂಬುದು
ವೇದಾಂತದಲ್ಲಿ ಬರುವ ಮಹಾವಾಕ್ಯ.ತತ್ ತ್ವಂ ಅಸಿ ಅಂದರೆ
ಅದು ನೀನೆ ಆಗಿದ್ದೀಯ. ಅಹಂ ಬ್ರಹ್ಮಾಸ್ಮಿ ಅರ್ಥವನ್ನು
ಕೊಡುತ್ತದೆ. ನಾನು ಭೂಮಿಗೆ ಎಲ್ಲಿಂದ ಬಂದೆ? ಯಾತಕ್ಕೆ
ಬಂದೆ? ಇಲ್ಲಿ ನನ್ನ ಕೆಲಸವೇನು? ಮುಂದೆ ಮತ್ತೆ ನಾನೆಲ್ಲಿ
ಸೇರುವೆ ? ಹೀಗೆ ವಿಚಾರಮಾಡುತ್ತ ಚಿಂತಿಸುತ್ತ ಅದರ
ಮರ್ಮ ತಿಳಿದರೆ ಆಗ ನಿನಗೆ ನಿಜವಾದ ಮೋಕ್ಷ ಸಿಗುತ್ತದೆ.
ಇದು ಜ್ಞಾನಯೋಗದ ಮಾರ್ಗ. ಇದು ಅದ್ವೈತ ತತ್ತ್ವವನ್ನು
ಅರಿತುಕೊಳ್ಳುವ ವಿಧಾನ. ಹೀಗೆ ಪ್ರಶ್ನಿಸುತ್ತ ಉತ್ತರ ಪಡೆದರೆ
ಅದುವೆ ನಿಜವಾದ ಪರಮಾರ್ಥ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ ಮೊ.
9449030990