ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ.
ಇಲ್ಲಿನ ಜಾಧವ ನಗರದ ಸತೀಶ ಅವರ ಮನೆಗೆ ಚುನಾವಣಾ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ನಿನ್ನೆ (ಆ.13) ನಡೆದ ಪಕ್ಷದ ಸಭೆಯಲ್ಲಿ, ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಆಧಾರದ ಮೇಲೆಯೇ ನಡೆಸಲು ತೀರ್ಮಾನಿಸಲಾಗಿದ್ದು, ಪಾಲಿಕೆ ಚುನಾವಣೆಗಾಗಿ ಜಿಲ್ಲೆಗೆ ಉಸ್ತುವಾರಿಗಳನ್ನು ಕೂಡ ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸತೀಶ ಅವರನ್ನು ಭೇಟಿ ಮಾಡಿದ ಅನೇಕ ಮುಖಂಡರು, ಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದರು. ಕೆಲವರು ಚುನಾವಣಾ ಮೀಸಲಾತಿಯ ಬಗ್ಗೆ ಸತೀಶ ಅವರ ಎದುರು ಅಳಲು ತೋಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.
ಸೋಮವಾರ ಚರ್ಚಿಸಿ ನಿರ್ಧಾರ: ಸತೀಶ ಜಾರಕಿಹೊಳಿ
ಸೋಮವಾರ (ಆ.16) ಪಕ್ಷದ ಬೆಳಗಾವಿ ಉಸ್ತುವಾರಿಯಾದ ಹಿರಿಯ ಮುಖಂಡ ಎಂ.ಬಿ. ಪಾಟೀಲ, ಹನುಮಂತಯ್ಯ ಹಾಗೂ ನಾಸೀರ ಹುಸೇನ್ ಅವರ ನೇತೃತ್ವದ ಸಮಿತಿ ಬೆಳಗಾವಿಗೆ ಆಗಮಿಸಲಿದ್ದು, ಬೆಳಿಗ್ಗೆ ಸ್ಥಳೀಯ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸತೀಶ ಜಾರಕಿಹೊಳಿ ಅವರು ಆಕಾಂಕ್ಷಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಸಮಿತಿ ಅಧ್ಯಕ್ಷ ರಾಜು ಸೇಠ್, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ್, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಪ್ರದೀಪ ಎಂ.ಜೆ. ಸೇರಿ ಇನ್ನಿತರರು ಇದ್ದರು.