ಸಿಂದಗಿ- ಇಂದಿನ ಸಮಾಜ ಸಾಮಾಜಿಕವಾಗಿ ವಿಘಟನೆಯಾಗುತ್ತಿದೆ ಇದು ಖೇದಕರ ಸಂಗತಿ. ದ್ವಿತೀಯ ಪಿಯುಸಿ ನಂತರ ಭಾರತ ಸರ್ಕಾರ ಮಿಲಿಟರಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಎಸ್ಎನ್ಡಿ ಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ೨೦೨೫-೨೬ ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕೋರುವ ಮತ್ತು ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಕಲೆ ಮೂಡಬೇಕು ಇದು ನಮ್ಮ ಭವಿಷ್ಯವನ್ನು ಧನಾತ್ಮಕದ ಕಡೆಗೆ ಕೊಂಡ್ಯೊಯುತ್ತದೆ. ಉತ್ತಮ ಆರೋಗ್ಯ, ಶಿಸ್ತು, ಸಮಯ ಪಾಲನೆಗಳಂತಹ ಗುಣಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಈ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ವಿಜಯಪುರದ ಎಸ್.ಬಿ.ಕರಿಯರ್ ಅಕ್ಯಾಡಮಿಯ ಸಂಚಾಲಕ ಶರಣಯ್ಯ ಭಂಡಾರಿಮಠ ಮಾತನಾಡಿ, ಪಿಯುಸಿ ಹಂತ ಜೀವನದಲ್ಲಿಯೆ ಆದರ್ಶ ಹಂತವಾಗಿದೆ. ಈ ಹಂತದಲ್ಲಿ ಕನಸುಗಳು, ಸಾಧಿಸುವ ಛಲಗಳು ಮುಡುವುದರಿಂದ ವಿದ್ಯಾರ್ಥಿಗಳು ಓದಿನ ಕಡೆಗೆ ಮತ್ತು ಭವಿಷ್ಯದ ಕಡೆಗೆ ಗಮನ ಹರಿಸಬೇಕು. ಇಂದಿನ ಶಿಕ್ಷಣದ ಮೌಲ್ಯ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ ಎಂದ ಅವರು ಶಿಕ್ಷಣದಲ್ಲಿ ಯೋಗ್ಯ ಮೌಲ್ಯಗಳು ಬರಬೇಕು. ಜಗತ್ತಿಗೆ ಮಾರ್ಗದರ್ಶನ ನೀಡುವ ಪವಿತ್ರದೇಶ ಭಾರತ ನಾವೆಲ್ಲ ಚೆನ್ನಾಗಿ ಓದಿ ಭವಿಷ್ಯವನ್ನು ಗಟ್ಟಿಯಾಗಿ ನಿರ್ಮಿಸಿಕೊಳ್ಳುವ ಸಾಮಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಜ್ಞಾನ ಮತ್ತು ಸೃಜನಶೀಲತೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಂದಿನ ಜಗತ್ತು ಕೌಶಲ್ಯಭರಿತವಾಗಿದೆ ಜ್ಞಾನದಜೊತೆಯಾಗಿ ಅನೇಕ ಕ್ಷೇತ್ರಗಳಲ್ಲಿನ ಕೌಶಲ್ಯಗಳನ್ನು ತಿಳಿಯುವುದು ಅವಶ್ಯವಾಗಿದೆ ಎಂದರು.
ವೇದಿಕೆಯ ಮೇಲೆ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಅತನೂರ ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಫ್.ಎ.ಹಾಲಪ್ಪನವರ, ಸಿದ್ದಲಿಂಗ ಕಿಣಗಿ, ಮುಕ್ತಾಯಕ್ಕ ಕತ್ತಿ, ಎ.ಆರ್.ಸಿಂದಗಿಕರ, ಡಾ.ಶಾಂತಿಲಾಲ ಚವ್ಹಾಣ, ಸತೀಶ ಬಸರಕೋಡ, ಎ.ಬಿ.ಪಾಟೀಲ, ಜಿ.ಎಸ್.ಪವಾರ, ಜ್ಯೋತಿರ್ಲೇಖಾ ಚೆನ್ನೂರ ಸೇರಿದಂತೆ ಇತರರು ಇದ್ದರು.