Homeಲೇಖನಕಾಸಿದ್ದರೂ ಕೊಳ್ಳೋಕಾಗಲ್ಲ, ಕಾಸಿಗಿಲ್ಲಿ ಕಿಮ್ಮತ್ತಿಲ್ಲ!! ದುನಿಯಾದಲ್ಲಿ ದುಡ್ಡಿಗೂ ದಕ್ಕದ ವಸ್ತುಗಳಿವೆ!!

ಕಾಸಿದ್ದರೂ ಕೊಳ್ಳೋಕಾಗಲ್ಲ, ಕಾಸಿಗಿಲ್ಲಿ ಕಿಮ್ಮತ್ತಿಲ್ಲ!! ದುನಿಯಾದಲ್ಲಿ ದುಡ್ಡಿಗೂ ದಕ್ಕದ ವಸ್ತುಗಳಿವೆ!!

ಬಯಸಿದ್ದೆಲ್ಲವೂ ಸಿಗುವ ಹಾಗಿದ್ರೆ ಈ ಬದುಕು ಅದೆಷ್ಟು ಸುಂದರ ಅನಿಸುತ್ತಿತ್ತೇನೋ! ಖುಷಿ ನೆಮ್ಮದಿ ಗೆಲುವು ಹುಡುಕೋಕೆ ಕೈಯಲ್ಲಿ ದುಡ್ಡು ಹಿಡಿದುಕೊಂಡು ಹಗಲು ಹೊತ್ತಿನಲ್ಲಿ ಕೊರಳಿಗೆ ಕಂದೀಲು ಹಾಕಿಕೊಂಡು ಒಂದು ನಮೂನೆ ಹುಚ್ಚು ಹಿಡಿದವರ ತರ ತಿರುಗಿ ತಿರುಗಿ ಸುಸ್ತಾಗಿ ಬಿಡುತ್ತೇವೆ.

ಜೀವನದ ಜಂಜಾಟದೊಳಗ ಒಂದು ಅರೆ ಗಳಿಗೇನೂ ಒತ್ತಡ ಇಲ್ಲದೇ ಬದುಕುವ ಹಾಗಿಲ್ಲ ಅಂತ ಬೇಸರ ಪಟ್ಟುಕೊಂಡು ಗೊಣುಗುತ್ತ ಹಾಸಿಗೆ ಮೇಲೆ ಮೈ ಚೆಲ್ಲುತ್ತೇವೆ. ಇದು ಕೇವಲ ಒಂದು ದಿನದ ಕಥೆಯಲ್ಲ. ಪ್ರತಿ ದಿನದ ಕಥೆ ವ್ಯಥೆ. ಅರೆ! ಹೀಗೇಕಾಗಿದಿವಿ ನಾವು? ನಮಗೇನಾಗಿದೆ? ಅಂತ ಯೋಚಿಸೋಕೂ ಪುರುಸೊತ್ತಿಲ್ಲ.

ಯಾರೋ ಪ್ಮಣ್ಯಾತ್ಮರು ಹೇಳಿದಂತೆ ಹೇಳಬೇಕಂದ್ರೆ ನಮಗೆ ಸಾಯೋಕೂ ಪುರುಸೊತ್ತಿಲ್ಲ.ಅಂಥ ಧಾವಂತ ಸೃಷ್ಟಿ ಮಾಡಿಕೊಂಡಿದಿವಿ. ದುಡ್ಡು ಕೊಟ್ಟು ಗೆಲುವು ಖುಷಿ ನೆಮ್ಮದಿ ಪಡೆಯುವ ಹಾಗೆ ಇದ್ದಿದ್ದರೆ, ಬ್ಯಾಂಕಿನೊಳಗೆ, ಮಲಗು ಹಾಸಿಗೆ ಕೆಳಗೆ, ಮನೆಯ ಗೊಡೆ, ಸಂದಿ ಗೊಂದಿಯೊಳಗೆ, ಅಂಗಳದೊಳಗೆ ಹೊಲದೊಳಗೆ  ಮುಚ್ಚಿಟ್ಟ ದುಡ್ಡನ್ನೆಲ್ಲ ಸುರುವಿ ಈ ಎಲ್ಲವನ್ನೂ ಖರೀದಿಸಬಹುದಿತ್ತು ಅಲ್ಲವೇ? ಕೈ ತುಂಬಾ ಕಾಸಿದ್ದವರು ಸದಾ ಸುಖದ ಸುಪ್ಪತ್ತಿಗೆಯ ಮೇಲೆ ಸುಖಾಸೀನರಾಗಿ ಮೆರೆಯಬಹುದಿತ್ತಲ್ಲವೇ?

ಕೇವಲ ಮೂವತ್ತು ನಲ್ವತ್ತು ವರ್ಷದ ಕೆಳಗೆ ಕೈಯಲ್ಲಿ ದುಡ್ಡು ಕಡಿಮೆ ಇತ್ತು. ಜೀವನದಲ್ಲಿ ನೆಮ್ಮದಿ ಸಂತೃಪ್ತಿ ಕಾಲು ಚಾಚಿಕೊಂಡು ಕೂತಿತ್ತು. ಆದರೀಗ ನಮಗೆಲ್ಲ  ದುಡ್ಡಿನಿಂದ ಎಲ್ಲ ಕೊಂಡುಕೊಳ್ಳಬಹುದು ಅನ್ನುವ ಭ್ರಮೆ ತಲೆ ಹೊಕ್ಕಿದೆ. ನಿತ್ಯವೂ ಈ ಮರೀಚಿಕೆಯ ಹಿಂದೆ ಕುದುರೆಯ ಹಾಗೆ ಕಣ್ಣಿಗೆ ರಿಕಾಪು ಕಟ್ಟಿಕೊಂಡು ಬೆನ್ನು ಬಿದ್ದಿದ್ದೇವೆ. ಕಣ್ಣಿಗೆ ಕಂಡಿದ್ದನ್ನು ಕಾಸು ಚೆಲ್ಲಿ ಮನೆ ತುಂಬಿಸಿಕೊಳ್ಳುತ್ತೇವೆ.

ಆದರೂ ಅದೇನೋ ಅಸಮಾಧಾನ ಮನದ ಮೂಲೆಯಲ್ಲಿ ಕಟ್ಟಿಗೆ ಹುಳುವಿನಂತೆ ಸಣ್ಣಗೆ ಕೊರೆಯುತ್ತಲೇ ಇರುತ್ತದೆ.ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹೊಸ ಹೊಸ ಸಂಶೋಧನೆ ನಡೆಸಿ ಇದ್ದದ್ದು ಇಲ್ಲದನ್ನು ಕಂಡು ಹಿಡಿದ ಜಾಣ್ಮೆಗೆ ವಾವ್ ವಾವ್! ಎನ್ನಲೇಬೇಕು. ಆದರೂ ಬಯಸಿದ್ದೆಲ್ಲವನ್ನೂ ಚಿಟಿಕೆ ಹೊಡೆಯುವದರೊಳಗೆ ಕಣ್ಮುಂದೆ ಇರುವಂತೆ ಮಾಡಿದ ಮಾನವನ ಬುದ್ಧಿಮತ್ತೆಗೆ ಸವಾಲು ಹಾಕುವಂತಿವೆ ಈ ನೆಮ್ಮದಿ ಖುಷಿ ಸಂತೃಪ್ತಿ. ಇದನ್ನೆಲ್ಲ ನೋಡಿದಾಗ ಒಂದು ಪ್ರಸಂಗ ನೆನಪಿಗೆ ಬರುತ್ತದೆ.

ಒಮ್ಮೆ ಅಜ್ಜಿಯೊಬ್ಬಳು  ಸೂಜಿಯೊಂದನ್ನು ಕಳೆದುಕೊಳ್ಳುತ್ತಾಳೆ. ನದರು ಮಂಜು ಮಂಜಾಗಿದ್ದರಿಂದ ಎಷ್ಟು ಹುಡುಕಿದರೂ ಸಿಗಲಿಲ್ಲ. ಅದನ್ನು ಕಂಡ ದಾರಿ ಹೋಕರೆಲ್ಲ ಅವಳ ನೆರವಿಗೆ ಬಂದರು. ಅವರಲ್ಲೊಬ್ಬ ಕೇಳಿದ ಇಷ್ಟೆಲ್ಲ ಜನ ಹುಡುಕಿದರೂ ಸಿಗುತ್ತಿಲ್ಲ.

“ಅಜ್ಜಿ,ನೀವು ಸೂಜಿಯನ್ನು ಕಳೆದುಕೊಂಡಿದ್ದಾದರೂ ಎಲ್ಲಿ?” “ನಡುಮನೆಯಲ್ಲಿ ಕಳೆದುಕೊಂಡೆ ಅಲ್ಲಿ ಬೆಳಕು ಕಡಿಮೆ. ಅದಕ್ಕೆ ಹೊರಗೆ ಅಂಗಳದೊಳಗೆ ಹುಡುಕಿದರಾಯಿತು ಎಂದುಕೊಂಡು ಹುಡುಕತಿದಿನಿ.” ಎಂದು ಉತ್ತರಿಸಿದಳಂತೆ. ಕಳೆದುಕೊಂಡದ್ದನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕಲ್ಲವೇ? ಅಜ್ಜಿಯ ಹಾಗೆ ನಾವೂ ಎಲ್ಲೋ ಕಳೆದುಕೊಂಡಿದ್ದನ್ನು ಎಲ್ಲೋ ಹುಡುಕುತ್ತಿದ್ದೇವೆ.

ಘನವಾದ ಜೀವನದ ಸಾರ್ಥಕತೆಯನ್ನು ಗೆಲುವನ್ನು ಕಾಸು ಕೊಟ್ಟು ಖರೀದಿಸಬಹುದು ಎಂದು ದುಂಡಗಿರುವ ದುನಿಯಾದೊಳಗೆ ದುಡ್ಡು ಹಿಡಿದು ತಿರುಗುತ್ತಿದ್ದೇವೆ. 

ನೆತ್ತಿ ಸುಡುವ ಸೂರ್ಯನ ಕೆಳಗೆ ಬೆನ್ನು ಬಾಗಿಸಿ ಬೆವರು ಒರೆಸಿಕೊಂಡವರಿಗೆ ಅದೇನೋ ಸಮಾಧಾನದ ನಿದ್ದೆ. ಸ್ವರ್ಗ ಲೋಕದ ನಕಲು ಹೊಡೆದಂತಿರುವ ಮಲಗುವ ಕೋಣೆಯಲ್ಲಿ ಮೆತ್ತನೆಯ ತಲೆದಿಂಬಿನ ಮೇಲೆ ತಲೆ ಇಟ್ಟರೂ ಸಮಾಧಾನದ ನಿದ್ದೆ ಕಣ್ಣಿಂದ ದೂರವೇ ಉಳಿದು ರಾತ್ರಿಯೆಲ್ಲ ಉರುಳಾಡಿದ್ದೇ ಬಂತು. ಹಣ್ಣು ಹಾಲು ಹಂಪಲು ಏನೆಲ್ಲ ಕಣ್ಮುಂದೆ ಸಿಂಗರಿಸಿಟ್ಟಿದ್ದರೂ ಕೈ ಹಾಕಿ ತಿನ್ನುವ ಭಾಗ್ಯ ಇಲ್ಲ.

ಮೈಯಲ್ಲಿ ಎಲ್ಲಿಲ್ಲದ ರೋಗಗಳು ಮನೆ ಮಾಡಿಕೊಂಡು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡು ಹಗಲಿರುಳೆನ್ನದೇ ಮೆರವಣಿಗೆ ನಡೆಸಿವೆ. ಅದೆಲ್ಲೋ ತಿಪ್ಪೆಯಲ್ಲಿ ಬಿದ್ದಿರುವ ಅನ್ನವನ್ನು ಆಯ್ದುಕೊಂಡು ತಿನ್ನುವವರಿಗೆಲ್ಲ ಒಂದು ಹಿಡಿ ಅನ್ನ ಸಿಕ್ಕರೆ ಸ್ವರ್ಗ ಸಿಕ್ಕಷ್ಟು ಖುಷಿ. ಆರೋಗ್ಯದ ಖಜಾನೆಯ ಅಧಿಪತಿಗಳಿವರು. 

ಗುಡಿಸಲದಲ್ಲೂ ಗೊಳ್ಳೆಂದು ನಗುವ ಸದ್ದು ಕಿವಿ ತುಂಬುತ್ತದೆ. ಮೈ ತುಂಬ ಮನೆ ಮಾಡಿರುವ ಕಷ್ಟಗಳೆಲ್ಲ ಬದುಕಿನ ಏನೆಲ್ಲವನ್ನೂ ಕಿತ್ತುಕೊಂಡಿದ್ದರೂ ನಗು ನೆಮ್ಮದಿಯನ್ನು ಅದ್ಹೇಗೆ ಸಾಕಷ್ಟು ಎನ್ನುವಷ್ಟು ಬಿಸಾಕಿ ಹೋಗಿವೆ. ಎಂಬ ಪ್ರಶ್ನೆ ಕಾಡದೇ ಇರುವುದಿಲ್ಲ. ಧನ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿರುವವರ ಮನೆಯಲ್ಲಿ ನಗು ಸಂತಸಕ್ಕೆ ಪೂರಾ ಪೂರಾ ಕಡು ಬಡುತನ ದುಡ್ಡಿದ್ದರೆ ಜಗವೆಲ್ಲ ಮುಷ್ಟಿಯೊಳಗೆ  ಹಿಡಿಯಬಹುದು ಅನ್ನೋ ಮಾತು ಕಿವಿ ತೂತಾಗುವಷ್ಟು ಸಾರಿ ಕಿವಿಗೆ ಬಿದ್ದಿದೆ ಆದರೆ ಈ ಮುಷ್ಟಿಯೊಳಗೆ ಮನಃಶಾಂತಿ ಅನ್ನೋದು ಜಾರಿಕೊಂಡು ಹೋಗಿದೆ.ಎಂಥ ಭಗೀರಥ ಪ್ರಯತ್ನ ಪಟ್ಟರೂ ಈ ಮನಃಶಾಂತಿ ಅನ್ನೋದು ದುಡ್ಡಿನ ಬಲೆಯೊಳಗೇಕೆ ಬೀಳುತ್ತಿಲ್ಲ ಎನ್ನುವುದು ಧನವಂತರಿಗೆ ಮಿಲಿಯನ್ ಡಾಲರ್ ಕೊಟ್ಟರೂ ಸಿಗದ ಉತ್ತರವಾಗಿದೆ. 

ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸುವ ತಾಕತ್ತು ಹೊಂದಿದೆ. ಇದು ಸಾಕಷ್ಟು ಬಾರಿ ಸಾಬೀತೂ ಆಗಿದೆ.ಹೀಗೆ ಜನ್ಮ ಜನ್ಮದ ಅನುಬಂಧದ ಕತ್ತು ಹಿಸುಕೋ ತಾಕತ್ತು ದುಡ್ಡಿಗೆ ಮಾತ್ರ ಗೊತ್ತು. ಕಾಸಿಗೆ ಜಗತ್ತಿನ ಆಸೆಬುರುಕ ಜನರ ನಡೆ ನುಡಿಯ ಗತ್ತು ಗೊತ್ತು. “ಗೋಣು ಹಾಕಿ ಕೂಡಬ್ಯಾಡ ಗತ್ತಿನಾಗ ಬಾಳ ನೋಡ.” ಎನ್ನುವ ಕವಿವಾಣಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಂತಿದೆ ಈ ಕಾಗದದ ತುಂಡು.

ನಮ್ಮೆಲ್ಲರ ಜೀವದ ಜೀವನಾಡಿಯಾದ ಪ್ರೀತಿಯನ್ನು ಕ್ಷಣಾರ್ಧದಲ್ಲಿ ತುಂಡು ತುಂಡಾಗಿ ಕತ್ತರಿಸುವ ಕಸುವು ಕಾಸಿಗಿದೆ. ಹೀಗಾಗಿಯೇ ಜಗದ ತುಂಬ ಅಟ್ಟಹಾಸ ಮೆರೆಯುತ್ತಿದೆ. ಕಸವಾಗದೇ ಬದಲಾಗದ ಎಂದೆಂದೂ ಪಾದರಸದಂತೆ ಓಡಾಡುವ ಗುಣ ಹಣಕ್ಕೆ ಮಾತ್ರ ಇದೆ. ಇದು ನುಸುಳಿಕೊಂಡು ಹೋಗದ ಜಾಗವೇ ಇಲ್ಲ. ಇದಕ್ಕೆ ದೇವಾಲಯದಲ್ಲೂ ಜಾಗವುಂಟು. ಶೌಚಾಲಯದಲ್ಲೂ ಜಾಗವುಂಟು.

ಬದಲಾದ ಜಗತ್ತಿನಲ್ಲಿ ಸರ್ವಾಂತರ್ಯಾಮಿ ಪಟ್ಟ ಪಡೆದಿದ್ದರೂ ಶಾಂತಿ ನೆಮ್ಮದಿ ಖುಷಿಗಳ ಮನೆಯೊಳಗೆ ಇದಕ್ಕೆ ಒಂಚೂರು ಜಾಗ ದೊರೆತಿಲ್ಲ ಎನ್ನುವ ವಿಷಯದಲ್ಲಿ ದೊಡ್ಡ ಬುದ್ಧಿವಂತರೆಂದು ಕರೆಸಿಕೊಳ್ಳುವ ನಾವು ನೀವೆಲ್ಲ ನಮ್ಮ ಕಾಲವಶವಾಗುವ ಮುನ್ನವೇ ಕಣ್ಣು ತೆರೆಯಲೇಬೇಕಿದೆ.

ಕಾಲಕ್ಕೆ ತಕ್ಕಂತೆ ಕಾಲು ಹಾಕಬೇಕೆಂದು ಅರಿವಿನ ಕಣ್ಣು ಮುಚ್ಚಿ ಓಡಿದರೆ  ಜೀವನದ ಸಂತೆ ಮುಗಿದಿದ್ದೇ ಅರಿವಿಗೆ ಬರುವುದಿಲ್ಲ..ಬದುಕಿನ ಕೊನೆ ಗಳಿಗೆಯಲ್ಲಿ ಗಂಟು ಮೂಟೆ ಕಟ್ಟುವಾಗ ಅರಿವಿನ ಕಣ್ತೆರೆದರೆ ಎಳ್ಳಷ್ಟೂ ಪ್ರಯೋಜನವಿಲ್ಲ.ನಾವೆಲ್ಲ ಸದಾ ಬಯಸಿ ಬಯಸಿ ಅಂಗಲಾಚುತ್ತಿರುವ ಪ್ರೀತಿ ಸಮಾಧಾನ ಖುಷಿ ಗೆಲುವು ಸಂತೃಪ್ತಿ ನೆಮ್ಮದಿಗಳು ಎಂದೂ ತಮ್ಮನ್ನು ತಾವು ಕಾಗದದ ತುಂಡಿಗೆ ಮಾರಿಕೊಳ್ಳುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದಂತಿವೆ.

ದುನಿಯಾದಲ್ಲಿ ದುಡ್ಡಿಗೆ ದಕ್ಕಿಸಿಕೊಳ್ಳಲಾಗದ ವಸ್ತುಗಳು ಇವು ಮಾತ್ರ. ದುಡ್ಡಿದ್ದ ದೊಡ್ಡಪ್ಪನನ್ನು ಸಣ್ಣಪ್ಪನನ್ನಾಗಿಸುವ ಮಹಾ ಶಕ್ತಿ ಇವುಗಳಿಗಿದೆ. ಕಾಸಿದ್ದರೂ ಕೊಳ್ಳೋಕೆ ಆಗಲ್ಲ. ಕಾಸಿಗಿಲ್ಲಿ ಕಿಮ್ಮತ್ತಿಲ್ಲ. ಹಣದ ಸಿರಿವಂತಿಕೆಗೆ ಒಲಿಯದ ಮನದ ಸಿರಿವಂತಿಕೆಗೆ ಒಲಿದು ಓಡಿ ಬರುವ ಖುಷಿ ನೆಮ್ಮದಿಗಳಿಗೆ ತಲೆ ಬಾಗೋಣ. ಸುಖ ಸಂತೋಷ ನೆಮ್ಮದಿಯಿಂದ ಬದುಕುವ ಕಲೆ ನಮ್ಮದಾಗಿಸಿಕೊಳ್ಳೋಣವಲ್ಲವೇ?


ಜಯಶ್ರೀ.ಜೆ. ಅಬ್ಬಿಗೇರಿ  ಬೆಳಗಾವಿ 9449234142

RELATED ARTICLES

Most Popular

error: Content is protected !!
Join WhatsApp Group