Homeಸುದ್ದಿಗಳುತಾಯಿಯ ಋಣ ತೀರಿಸುವುದು ಕಷ್ಟ. ತಂದೆ ತಾಯಿಯ ಸೇವೆ ಮಾಡಿರಿ - ಸದ್ಗುರು ಮುಕ್ತಾನಂದ ಪೂಜ್ಯರು

ತಾಯಿಯ ಋಣ ತೀರಿಸುವುದು ಕಷ್ಟ. ತಂದೆ ತಾಯಿಯ ಸೇವೆ ಮಾಡಿರಿ – ಸದ್ಗುರು ಮುಕ್ತಾನಂದ ಪೂಜ್ಯರು

ಸವದತ್ತಿ – ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ ಎಂದು ಮಾತಾಪಿತೃ ಆಚಾರ್ಯರನ್ನು ದೇವರ ಸಮಾನ ಎನ್ನುವ ನಮ್ಮ ದೇಶದಲ್ಲಿ ತಾಯಿಯ ಋಣ ಬಹಳಷ್ಟು ಇದೆ ಎಂದು ಶ್ರೋತ್ರೀಯ ಬ್ರಹ್ಮನಿಷ್ಠ ಜಗದ್ಗುರು ಮುಕ್ತಾನಂದ ಸ್ವಾಮೀಜಿ ಹೇಳಿದರು.

ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಗೂಗಲ್ ಮೀಟ್ ಸತ್ಸಂಗದಲ್ಲಿ ಮಾತಾ ಪಿತೃ ಋಣ ವಿಷಯವನ್ನು ಕುರಿತು ಆಧ್ಯಾತ್ಮಿಕ ಪ್ರವಚನವನ್ನು ನೀಡಿದರು.
ಒಬ್ಬ ಭಕ್ತ ತನ್ನ ತಾಯಿಯನ್ನು ಕೇದಾರನಾಥ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿಯ ಬೆಟ್ಟದಲ್ಲಿ ತನ್ನ ತಾಯಿಯನ್ನು ಹೊತ್ತುಕೊಂಡು ಹೋಗಿ ದರ್ಶನ ಮಾಡಿಸಿದ. ನಂತರ ತನ್ನ ಊರಿಗೆ ಮರಳಿದನು. ಊರಿನ ಜನ ಕೇದಾರನಾಥ ದರ್ಶನ ಕುರಿತು ಕೇಳಿದಾಗ ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ದರ್ಶನ ಮಾಡಿಸಿದ ಸಂಗತಿಯನ್ನು ಜಂಭದಿಂದ ಹೇಳತೊಡಗಿದನು.

ಅದು ಅತಿರೇಕವಾಗುವಷ್ಟು ಆದಾಗ ಒಂದು ದಿನ ಮನೆಯ ಪಕ್ಕದವರ ಮುಂದೆ ಈ ಸಂಗತಿ ಹೇಳುವುದನ್ನು ಕೇಳಿದ ತಾಯಿ. ಮಗನೇ ನೀನು ಒಂದು ಸಲ ಕೇದಾರನಾಥ ದರ್ಶನಕ್ಕೆ ಹೋಗಿ ಅಲ್ಲಿ ನಡೆಯಲಾಗದ ನನ್ನನ್ನು ನಿನ್ನ ಹೆಗಲ ಮೇಲೆ ಹಲವು ಕಿ.ಮೀಗಳಷ್ಟು ಹೊತ್ತುಕೊಂಡು ಹೋಗಿರುವುದನ್ನು ಬಹಳ ದೊಡ್ಡ ಸಂಗತಿ ಎನ್ನುವಂತೆ ಹೇಳುತ್ತಿರುವೆಯಲ್ಲ. ನಾನು ನಿನ್ನನ್ನು ನನ್ನ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊತ್ತು ನನ್ನ ಗರ್ಭದಿಂದ ಹೊರಬರುವವರೆಗೂ ಏನೆಲ್ಲ ಕಷ್ಟ ಪಟ್ಟಿರುವೆ. ಯಾವತ್ತಾದರೂ ಈ ಸಂಗತಿ ಯಾರ ಬಳಿಯಲ್ಲಿ ಹೇಳಿದ್ದೇನೆಯೇ,? ಎಂದಾಗ ಆತ ತನ್ನ ತಪ್ಪನ್ನು ಕಂಡು ಪೆಚ್ಚಾಗಿ ನಿಂತು ತಾಯಿಯ ಋಣ ನನ್ನ ಮೇಲೆ ಬಹಳ ಇದೆ. ನನ್ನ ಜೀವಿತಾವಧಿಯವರೆಗೂ ನನ್ನ ತಾಯಿಯ ಸೇವೆ ನಿಸ್ವಾರ್ಥದಿಂದ ಮಾಡುವುದಾಗಿ ತಿಳಿಸಿದನು.

ಇದು ಒಂದು ದೃಷ್ಟಾಂತ. ನಮ್ಮ ಜೀವನದಲ್ಲಿ ಬದುಕಿರುವವರೆಗೂ ತಂದೆ ತಾಯಿಯ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದನ್ನು ಜಂಭ ಕೊಚ್ಚಿಕೊಳ್ಳಬಾರದು.ನಮ್ಮ ಭಾರತದ ಸಂಸ್ಕೃತಿಯು ನಮಗೆ ಉತ್ತಮ ಸಂಸ್ಕಾರ ನೀಡಿದೆ.ನಾವು ಎದ್ದ ತಕ್ಷಣ ಮೊದಲು ಭೂತಾಯಿಯನ್ನು ಸ್ಮರಿಸುತ್ತೇವೆ,ನಂತರ ಹೆತ್ತ ತಂದೆ ತಾಯಿಯರನ್ನು ನಮಸ್ಕರಿಸುವ ಮೂಲಕ ಬದುಕನ್ನು ರೂಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು. ತೋರಿಕೆಗೆ ಮಾತ್ರ ಗೌರವಿಸುವುದು ಆಗಬಾರದು.
ಒಮ್ಮೆ ವಿವೇಕಾನಂದರು ಉತ್ತರಾಂಚಲದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಹಲವು ದಿನಗಳು ಊಟವಿಲ್ಲದೇ ಇದ್ದರು.ನಿಸ್ತೇಜರಾಗಿದ್ದ ಅವರು ಒಂದು ಜಮೀನಿನಲ್ಲಿ ಸಂಚರಿಸುತ್ತಿದ್ದಾಗ ಇವರ ಸ್ಥಿತಿಯನ್ನು ಕಂಡ ಬಡವ,ತನ್ನ ಜಮೀನಿನಲ್ಲಿ ಬೆಳೆದ ಸವತೇಕಾಯಿನನ್ನು ಅವರಿಗೆ ನೀಡಿ ಉಪಚರಿಸಿದನು.ಜೊತೆಗೆ ಇನ್ನಷ್ಟು ಸವತೇಕಾಯಿ ನೀಡಿ ಬೀಳ್ಕೊಟ್ಟನು. ಅವನು ಕಡು ಬಡವನಾಗಿದ್ದ. ಆತನ ಆ ಬಡತನದಲ್ಲಿಯೂ ಸಂಸ್ಕಾರವಂತನಾಗಿರುವುದು ವಿವೇಕಾನಂದರಿಗೆ ಸಂತಸ ತಂದಿತು.

ನಂತರ ಹತ್ತಾರು ವರ್ಷಗಳ ಕಳೆದ ಮೇಲೆ ಆ ಸ್ಥಳಕ್ಕೆ ವಿವೇಕಾನಂದರು ಬಂದಾಗ ತಾವು ಮಾತನಾಡುತ್ತಿದ್ದ ವೇದಿಕೆಯಿಂದ ದೂರದಲ್ಲಿ ಕುಳಿತಿದ್ದ ಆ ಬಡವನನ್ನು ಕಂಡು ವೇದಿಕೆಗೆ ಕರೆದು ಹಿಂದೆ ನಡೆದ ಸಂಗತಿಯನ್ನು ತಿಳಿಸಿ ಆತನಿಗೆ ಸತ್ಕರಿಸಿದರು. ಇದು ನಮ್ಮ ಭಾರತೀಯ ಸಂಸ್ಕೃತಿ ಆಪತ್ಕಾಲದಲ್ಲಿ ನಮ್ಮನ್ನು ಉಪಚರಿಸಿದವರಿಗೆ ನಾವು ಕೃತಜ್ಞತೆಯನ್ನು ತೋರಿಸುವುದನ್ನು ಸ್ಮರಿಸುವುದನ್ನು ಮರೆಯಬಾರದು. ಎಂದು ಮುಕ್ತಾನಂದ ಪೂಜ್ಯರು ತಿಳಿಸಿದರು.

ಅಷ್ಟೇ ಅಲ್ಲದೇ ಶಿಶುಪಾಲ ವಧೆಯ ಉದಾಹರಣೆಯನ್ನು ನೀಡುತ್ತ ನಾಳೆಯ ದಿನ ದೇವರ ಹುಬ್ಬಳ್ಳಿ ಪೂಜ್ಯರ ರಚಿತ ಕನ್ನಡ ಭಾಗವತವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ಮಹಾರಾಷ್ಟ್ರದಲ್ಲಿ ಆಗಿಹೋದ ಸಂತ ಡೋಂಗ್ರೆ ಮಹಾರಾಜರ ಆದರ್ಶಮಯ ಬದುಕಿನ ಕುರಿತು ಇದೇ ಸಂದರ್ಭದಲ್ಲಿ ತಿಳಿಸಿದರು.

ಗೂಗಲ್ ಮೀಟ್ ಅಂತರ್ಜಾಲದ ಈ ಸತ್ಸಂಗದಲ್ಲಿ ಮುನವಳ್ಳಿ ಸಿಂದೋಗಿ ಬೈಲಹೊಂಗಲ ಸವದತ್ತಿ ಯಕ್ಕುಂಡಿ ಚಿಕ್ಕುಂಬಿ ಬಾಗಲಕೋಟೆ ಬೆಂಗಳೂರು. ಧಾರವಾಡ ಹುಬ್ಬಳ್ಳಿ ಬೆಳಗಾವಿ ದೇವರಹುಬ್ಬಳ್ಳಿ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಪೂನಾದಲ್ಲಿ ನೆಲೆಸಿರುವ ಸತ್ಸಂಗ ಬಳಗದ ಸದ್ಬಕ್ತರು ಸೇರಿದಂತೆ 50 ಕ್ಕೂ ಹೆಚ್ಚು ಸತ್ಸಂಗಿಗಳು ಪಾಲ್ಗೊಂಡಿದ್ದರು.ಈ ಸತ್ಸಂಗದ ಪ್ರಾರಂಭದಲ್ಲಿ ಶ್ರೀಗೌರಿ ನಾಗೇಶ ಹೊನ್ನಳ್ಳಿ ವಿದ್ಯಾರ್ಥಿನಿಯಿಂದ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನ ಗಾಯನ ಜರುಗಿತು.

ನಂತರ ಸವಿತಕ್ಕ ಕೆಂದೂರ ಇವರಿಂದ ಆನಂದ ಸಾಗರ ಮುರಳೀಧರ ಪ್ರಾರ್ಥನಾ ಗೀತೆ ಜರುಗಿತು. ಕೊನೆಯಲ್ಲಿ ಮುಕ್ತಾನಂದ ಪೂಜ್ಯರಿಂದ ಸ್ವಾಗತಂ ಕೃಷ್ಣಾ ಭಜನೆ ಜರುಗಿತು. ಈ ಕಾರ್ಯಕ್ರಮವನ್ನು ವೀರಣ್ಣ ಕೊಳಕಿ ಶಿಕ್ಷಕರು ಸ್ವಾಗತ ಮತ್ತು ವಂದನಾರ್ಪಣೆಗೈಯುವುದರೊಂದಿಗೆ ನಿರೂಪಿಸಿದರು

ವರದಿ – ವೈ.ಬಿ.ಕಡಕೋಳ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ

RELATED ARTICLES

Most Popular

error: Content is protected !!
Join WhatsApp Group