ಬೆಳಗಾವಿ: ಬೆಳಗಾವಿಯ ಶ್ರೀಮತಿ ರುದ್ರಾಂಬಿಕಾ ಮಹಾಂತೇಶ ಯಾಳಗಿ ಅವರಿಗೆ ಲಾವಣಿ ಪದ ಮುಂತಾದ ಜಾನಪದ ಹಾಡುಗಳಿಗಾಗಿ ೨೦೨೧-೨೨ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದ್ದಕ್ಕೆ ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಸಂತಸ ವ್ಯಕ್ತ ಪಡಿಸಿದ್ದಾರೆ.
ಶ್ರೀಮತಿ ರುದ್ರಾಂಬಿಕಾ ಯಾಳಗಿ ಅವರ ಸೇವೆ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಇಡೀ ಬೆಳಗಾವಿ ಜಿಲ್ಲೆಯ ಗೌರವ ಇಮ್ಮಡಿಸಿದೆ ಎಂದು ಅವರು ಹೇಳಿದರು. ಶ್ರೀಮತಿ ಯಾಳಗಿ ಅವರು ಕಳೆದ ಮೂರು ದಶಕಗಳಿಂದ ಲಾವಣಿ ಪದಗಳ ಮೂಲಕ ಜಾನಪದ ಸಾಹಿತ್ಯ ಸಾಮಾನ್ಯ ಜನರ ಮನದಲ್ಲಿ ಜೀವಂತವಾಗಿರಿಸಿದ್ದು ಇಡೀ ರಾಜ್ಯಕ್ಕೆ ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ಅನೇಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡು ನವ ಪೀಳಿಗೆಗೆ ಜಾನಪದ ಸಾಹಿತ್ಯದ ಅರಿವು ಮೂಡಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.