ಮುನವಳ್ಳಿ: ಪೆಬ್ರುವರಿ ೧೬ ಮುನವಳ್ಳಿ ಪಟ್ಟಣದ ದಾನಮ್ಮದೇವಿ ಜಾತ್ರೆ ಜರಗುವುದು. ಮುನವಳ್ಳಿ ಅನೇಕ ಮನೆತನಗಳ ಕುಲದೇವತೆಯಾದ ಶ್ರೀ ದಾನಮ್ಮದೇವಿ ಮಂದಿರ ವೈಶಿಷ್ಟ್ಯಮಯವಾಗಿದೆ. ೧೯೮೦ರ ದಶಕದಲ್ಲಿ ಗುಡ್ಡಾಪುರ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಸಿ.ಪಿ.ಬಾಳಿ ಹಾಗೂ ಪರಿವಾರದವರು ಸಂಘಟಿಸುವ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿದರು.ನಂತರದ ದಿನಗಳಲ್ಲಿ ಪಾದಯಾತ್ರೆಯ ನಿರಂತರವಾಗಿ ಜರುಗತೊಡಗಿ ಭಕ್ತರಲ್ಲಿ ದೇವಿಯ ಆರಾಧನೆಯ ಸ್ಫೂರ್ತಿ ಹೆಚ್ಚುತ್ತ ಸಾಗಿತು. ಮುನವಳ್ಳಿಯಿಂದ ಪ್ರತಿ ವರ್ಷ ಗುಡ್ಡಾಪುರ ದಾನಮ್ಮದೇವಿಗೆ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಪಾದಯಾತ್ರೆಯ ಹೋಗುತ್ತಿದ್ದರು.ಅದು ಕ್ರಮೇಣ ಮುನವಳ್ಳಿಯಲ್ಲಿಯೇ ಒಂದು ದೇವಾಲಯದ ಸ್ಥಾಪನೆಗೆ ಕಾರಣೀಭೂತವಾಯಿತು. ದೇವಸ್ಥಾನ ನಿರ್ಮಾಣಗೊಂಡ ನಂತರ ಪ್ರತಿ ದಿನ ಗುಡ್ಡಾಪುರದಲ್ಲಿ ಜರುಗುವ ರೀತಿಯಲ್ಲಿಯೇ ಇಲ್ಲಿಯೂ ಪೂಜೆ ಪುನಸ್ಕಾರಗಳು ಜರುಗತೊಡಗಿದವು.ಜೊತೆಗೆ ಭಾರತ ಹುಣ್ಣಿಮೆ ಸಂದರ್ಭದಲ್ಲಿ ಪ್ರತಿವರ್ಷ ಜಾತ್ರಾಮಹೋತ್ಸವ ಮಹಿಳೆಯರಿಗೆ ಉಡಿ ತುಂಬುವುದು,ಕಂಕಣ ಕಟ್ಟುವುದು ನಂತರ ಮಹಾಪ್ರಸಾದ ಜರುಗುತ್ತ ಬರುತ್ತಿದ್ದು. ಪೆಬ್ರುವರಿ ೧೬ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಒಂಬತ್ತು ಗಂಟೆಯಿಂದ ಮಹಿಳೆಯರಿಂದ ಉಡಿ ತುಂಬುವ ಕಾರ್ಯ ಜರುಗುತ್ತದೆ.ನಂತರ ಮಹಾಪ್ರಸಾದ ಕೂಡ ಮುನವಳ್ಳಿಯ ದಾನಮ್ಮದೇವಿ ದೇವಸ್ಥಾನ ಸಮಿತಿಯವರು ಏರ್ಪಡಿಸಿರುವರು.
ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಭಕ್ತರು ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ, ಮದುವೆಯಾಗದ ಕನ್ಯೆಯರಿಗೆ ಕಂಕಣ ಭಾಗ್ಯ,.ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿ ದೊರೆಯುವದೆಂಬ ಪ್ರತೀತಿಯಿಂದ ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು. ಎಂದು ಅರ್ಚಕ ಗುರುಬಸಯ್ಯ ಶಾಸ್ತ್ರಿಗಳು ಹಿರೇಮಠ ತಿಳಿಸಿರುವರು.
ಈ ದಿನ ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ನೈವೇದ್ಯದೊಂದಿಗೆ ದೇವಾಲಯಕ್ಕೆ ಆಗಮಿಸಿ ಪಲ್ಲಕ್ಕಿಗೆ ಆರತಿಯನ್ನು ಬೆಳಗಿ,ಒಂದೆಡೆ ಕುಳಿತು ದೇವಾಲಯಕ್ಕೆ ಆಗಮಿಸುತ್ತಿರುವ ಮಹಿಳೆಯರಿಗೆ ಕಂಕಣ ಕಟ್ಟುವುದು ಮತ್ತು ಉಡಿ ತುಂಬುವ ಕಾರ್ಯವನ್ನು ಬಾಳಿ ಮನೆತನದ ಬಂಧುಗಳು ನೆರವೇರಿಸುವರು ಜಾತ್ರೆಯ ದಿನದಂದು ಗುಡ್ಡಾಪುರ ಮಾದರಿಯಲ್ಲಿಯೇ ಪೂಜೆ ಅನ್ನ ಸಂತರ್ಪಣೆ ವಿವಿಧ ಆಚರಣೆಗಳು ಇಲ್ಲಿ ಜರಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.