ಹಾಸನ : ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್ನ ಪಾತ್ರ ನಿರ್ವಹಿಸಿದ್ದರು.
ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್ರಿಂದ ಪೋನ್ ಬಂತು. ಸಾರ್, ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ ಇಂಗಿತ ತಿಳಿಯಿತು. ನಿಮ್ಮ ರಂಗಭೂಮಿ ಸೇವೆ ಕುರಿತಾಗಿ ಬರೆಯುವ, ಈ ದಿಶೆಯಲ್ಲಿ ಮಾಹಿತಿ ಕಳಿಸಿ ಎಂದೆ. ಅವರು ಒಂದಿಷ್ಟು ವಿಡಿಯೋ ಕಳಿಸಿದರು. ಡೌನ್ಲೋಡ್ ಮಾಡಿ ನೋಡಿದೆ. ನೀವು ರಂಗಕ್ಷೇತ್ರದ ಹಾದಿಯಲ್ಲಿ ಸಾಗಿಬಂದ ಮಾಹಿತಿ ಕಳಿಸಿ ಎಂದೆ. ಸಾರ್, ನೀವು ಹಾಸನದಲ್ಲಿ ಎಲ್ಲಿ ಸಿಗ್ತೀರಾ ಎಂದರು. ನಿಮ್ಮ ಮನೆ ಎಲ್ಲಿ ಎಂದೆ. ಹಾಸನದ ಚನ್ನಪಟ್ಟಣದಲ್ಲಿ ಎಂದರು. ಸರಿ, ನಾನು ಬೆಂಗಳೂರಿನಿಂದ ಬರುತ್ತಿರುವೆ ಬಸ್ ಸ್ಟಾಂಡ್ ನಲ್ಲಿ ನನ್ನ ಬೈಕ್ ಇದೆ. ನೀವು ಅಲ್ಲಿಗೆ ಬನ್ನಿ ಎಂದೆ. ಬಂದಿದ್ದರು. ಇಬ್ಬರು ಬೈಕ್ನಲ್ಲಿ ಹೊರಟು ಹಾಸನದ ಹೋಟೆಲ್ ಹೊಕ್ಕೆವು. ಕಾಫಿ ಕುಡಿಯುತ್ತಾ ಮಾತಿಗೆಳೆದೆ.
ನಾನು ೨೫ ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ನನ್ನ ಜನ್ಮ ದಿನಾಂಕ ೩೦-೫-೧೯೭೩. ನನ್ನ ಪ್ರೈಮರಿ ವಿದ್ಯಾಭ್ಯಾಸ ಸುಳಗೋಡು ಗ್ರಾಮದಲ್ಲಿ, ಪಕ್ಕದ ಗಂಜಿಗೆರೆಯಲ್ಲಿ ಮಿಡಲ್ ಸ್ಕೂಲ್. ಆಲೂರು ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ. ಡಿಪ್ಲೋಮ ಮಾಡಿದ್ದು ಹಾಸನದ ಎಲ್.ವಿ.ಪಾಲಿಟೆಕ್ನಿಕ್ನಲ್ಲಿ. ತಂದೆ ಹೆಸರು ಕರಿಯಯ್ಯ. ತಾಯಿ ದೇವಮ್ಮ. ೨೦೦೦ರಲ್ಲಿ ಕೆಲಸಕ್ಕೆ ಸೇರಿದೆ. ೧೯೮೪-೮೫ರಲ್ಲಿ ಸುಳಗೋಡಿನಲ್ಲಿ ಹತ್ತರ ಪ್ರಾಯದಲ್ಲಿ ರಾಮಾಯಣ ನಾಟಕದ ಚಿಕ್ಕ ಪಾತ್ರದಲ್ಲಿ ರಂಗ ಪ್ರವೇಶಿಸಿದ್ದೆ. ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಟಿ.ದಾಸರಹಳ್ಳಿಯಲ್ಲಿ ೧೯೯೭ರಲ್ಲಿ ಕೆಲವು ಪೌರಾಣಿಕ ನಾಟಕಗಳ ದೃಶ್ಯಾವಳಿಯಲ್ಲಿ ನಟಿಸಿದ್ದೆ. ಆಲೂರು ಟೌನ್ನಲ್ಲಿ ೨೦೧೦, ೧೨ರಲ್ಲಿ ನನ್ನ ನೇತೃತ್ವದಲ್ಲಿ ೨ ಬಾರಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಗಿದೆ. ಯಕ್ಷಗಾನವೇ ಪ್ರಧಾನವಾಗಿರುವ ದಕ್ಷಿಣ ಕರ್ನಾಟಕದ ಕಡಬದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಲಕ್ಕೆ ಎ.ಸಿ.ರಾಜು ನಿರ್ದೇಶನದಲ್ಲಿ ಅಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿ ಹರಿಶ್ಚಂದ್ರನ ಪಾತ್ರ ನಿರ್ವಹಿಸಿದ್ದೆ. ಕಡಬ ತಾ. ಸವಣೂರಿನಲ್ಲಿ ಕುರುಕ್ಷೇತ್ರ ಆಡಿಸಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ರಾಮಾಯಣ, ಕುರುಕ್ಷೇತ್ರ ನಾಟಕಗಳ ಪಾತ್ರಗಳ ತರಬೇತಿ ನೀಡಿ ಶಾಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಶ್ರಮಿಸಿದೆ.
ಸರಿ, ನೀವು ಇದುವರೆಗೆ ಯಾವ್ಯಾವ ನಾಟಕಗಳಲ್ಲಿ ಏನೇನು ಪಾತ್ರಗಳನ್ನು ನಿರ್ವಹಿಸಿದ್ದೀರಿ..? ಟೀ ಸೀಪ್ ಮಾಡುತ್ತಾ ಒಂದು ಪ್ರಶ್ನೆ ಒಗೆದೆ. ಸತ್ಯ ಹರಿಶ್ಚಂದ್ರ, ಕುರುಕ್ಷೇತ್ರ, ದೇವಿ ಮಹಾತ್ಮೆ, ರಾಮಾಯಣ ನಾಟಕದಲ್ಲಿ ೧೦ ಬಾರಿ ಶ್ರೀಕೃಷ್ಣನ ಪಾತ್ರ, ಶಕುನಿಯಾಗಿ ೧೪ ಸಲ, ೧೫ ಬಾರಿ ವಿಧುರ, ಭೀಷ್ಮ ದ್ರೋಣ ತಲಾ ಹತ್ತು ಸಲ, ನಾರದನಾಗಿಯೂ ಹತ್ತು, ದೃತರಾಷ್ಟ್ರ- ೮, ಸಾತ್ಯಕಿ-೫, ಕರ್ಣ-೪, ಅರ್ಜುನ-೨, ಸೂತ್ರದಾರಿ, ದುರ್ಯೋಧನ, ಆಂಜನೇಯ, ಭರತ, ಡಂಗೂರಿ, ಮಾರೀಚ ಹೀಗೆ ಪಾತ್ರಗಳ ಪರಕಾಯ ಪ್ರವೇಶ ಹೇಳುತ್ತಾ ಹೋದರು. ಅದು ಸರಿ, ಸತ್ಯ ಹರಿಶ್ಚಂದ್ರನ ಪಾತ್ರ ಎಷ್ಟು ಬಾರಿ ಎಂದೆ. ಮೂರು ಸರ್ತಿ ಅಷ್ಟೇ. ಈ ಸತ್ಯ ಹರಿಶ್ಚಂದ್ರ ನಾಟಕವನ್ನು ಹಾಸನದ ಕಲಾಭವನದಲ್ಲಿ ಪ್ರದರ್ಶಿಸಬೇಕೆಂಬ ಆಸೆ ಇದೆ ಎಂದರು. ಖಂಡಿತ ಮಾಡಿ. ನಾನು ನೋಡುವೆ ಎಂದೆ.
—
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.