ಬೆಳಗಾವಿ – ಸಂಚಾರಿ ಗುರುಬಸವ ಬಳಗ ಬೆಳಗಾವಿ ವತಿಯಿಂದ ಬಸವ ಪಂಚಮಿ ನಿಮಿತ್ತ ಪ್ರತಿ ವರ್ಷದಂತೆ ಸಮೃದ್ಧ ಅಂಗವಿಕಲರ ಸಂಸ್ಥೆ ಜಯನಗರ ಬೆಳಗಾವಿ ಇಲ್ಲಿನ ವಿಕಲಚೇತನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವೈಚಾರಿಕತೆಯಿಂದ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ ವಹಿಸಿದ್ದರು. ಪ್ರಶಾಂತ ಪೋತದಾರ ಸ್ವಾಗತಿಸಿದರು.
ಸಂಚಾರಿ ಗುರು ಬಸವ ಬಳಗದ ಶಿವಾನಂದ ಲಾಳಸಿಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರ ಪಂಚಮಿ ದಿನದಂದು ಕಲ್ಲು ಹಾಗೂ ಮಣ್ಣಿನ ಮೂರ್ತಿಗಳಿಗೆ ಹಾಲು ಹಾಕಿ ಅಮೃತಕ್ಕೆ ಸಮನಾದ ಹಾಲನ್ನು ವ್ಯರ್ಥ ಮಾಡದೆ ಹಸಿದವರಿಗೆ ರೋಗಿಗಳಿಗೆ ಮಕ್ಕಳಿಗೆ ಹಾಗೂ ವೃದ್ಧರಿಗೆ ಕೊಟ್ಟು ವೈಚಾರಿಕ ಪ್ರಜ್ಞೆಯಿಂದ ವಿಶೇಷವಾಗಿ ಬಸವ ಪಂಚಮಿಯನ್ನು ಆಚರಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಕಾರ್ಯದರ್ಶಿ ಸುರೇಶ ನರಗುಂದ ಜಾಗತಿಕ ಲಿಂಗಾಯತ ಮಹಾಸಭೆಯ ಖಜಾಂಚಿ M M ಬಾಳಿ ಮಾತನಾಡಿ, ಹಾವು ಮಾಂಸಾಹಾರಿ ಸರೀಸೃಪ ಹಾಲನ್ನು ಕುಡಿಯುವದಿಲ್ಲ. ಈ ರೀತಿಯಾಗಿ ಮಕ್ಕಳಿಗೆ ಹಾಲು ಕೊಡುವುದರ ಮೂಲಕ ಮೂಢನಂಬಿಕೆಯಿಂದ ಜನರು ಹೊರಗೆ ಬಂದು ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಮಂಜುನಾಥ ಕಡಲಗಿ, ಈಶ್ವರ ತಿಮ್ಮಾಪೂರ, ಸಂಚಾರಿ ಗುರು ಬಸವ ಬಳಗದ ಶರಣ ಶರಣೆಯರು ಉಪಸ್ಥಿತರಿದ್ದರು. ಉಮಾ ದುಂಡಪ್ಪ ಸಂಕೇಶ್ವರ ಮಕ್ಕಳಿಗೆ ಮುಂಜಾನೆ ಅಲ್ಪೋಪಹಾರ ದಾಸೋಹ ಮಾಡಿದರು. ಅಧ್ಯಕ್ಷರಾದ ಮಹಾಂತೇಶ ತೋರಣಗಟ್ಟಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು