ಸಿಂದಗಿ: ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರದ ನಾರಿ ಶಕ್ತಿ ಯೋಜನೆಯು ಒಂದಾಗಿದೆ. ಇದರಲ್ಲಿ ಈಗ ೫೦೦ ಕೋಟಿ ಮಹಿಳೆಯರು ಸಂಚರಿಸುವ ಮೂಲಕ ಸರ್ಕಾರಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಅದರಲ್ಲಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಬಸ್ ಪ್ರಮಾಣ ಮಾಡುತ್ತಿದ್ದು, ಅದು ೫೦೦ ಕೋಟಿ ತಲುಪಿದ್ದು ಸಂಭ್ರಮ. ಸರ್ಕಾರದ ಬಳಿ ಹಣ ಇಲ್ಲ ಎಂದು ಟೀಕೆ ಮಾಡುವವರಿಗೆ ಇದು ಉತ್ತರ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ೫೦೦ ಕೋಟಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಸಂಚರಿಸಿದ ನಿಮಿತ್ತವಾಗಿ ಆಯೋಜಿಸಿದ್ದ ನಾರಿ ಶಕ್ತಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ನಾರಿ- ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೂ ೫೦೦ ಕೋಟಿ ಮಹಿಳೆಯರು ಸದುಪಯೋಗ ಪಡೆದುಕೊಂಡ ಹಿನ್ನೆಲೆಯಲ್ಲಿ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉಚಿತ ಪ್ರಯಾಣಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿಯೇ ೧೩ ಕೋಟಿಗೂ ಅಧಿಕ ಮಹಿಳೆಯರು ಇದುವರೆಗೂ ಪ್ರಯಾಣ ಮಾಡಿದ್ದಾರೆ. ಇದರ ವಹಿವಾಟು ರೂ. ೪೪೯ ಕೋಟಿ ಆಗಿದೆ. ಸಿಂದಗಿ ಘಟಕದಲ್ಲಿ ೧,೩೪,೭೭,೭೭೬೫ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರ ವೆಚ್ಚ ೫೧ ಕೋಟಿ ೫೮ ಲಕ್ಷ ರೂಪಾಯಿ ಆಗಿದೆ. ಗ್ಯಾರಂಟಿಗಳಿಗೆ ಹಣವಿಲ್ಲ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಅನ್ನೋರಿಗೆ ಇದು ಉತ್ತರ. ೨೦೨೫-೨೬ನೇ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ರೂ ೫೮ ಸಾವಿರದ ೬೦೦ ಕೋಟಿಗಳನ್ನು ಮುಖ್ಯಮಂತ್ರಿಗಳು ಮೀಸಲಿಟ್ಟಿದ್ದಾರೆ. ಇದರಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ದಲ್ಲಾಳಿಗಳು ಇಲ್ಲ ಎಂದರು.
ಈ ವೇಳೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸಿಹಿ ತಿನಿಸಲಾಯಿತು. ಬಸ್ ಡಿಪೋ ಮ್ಯಾನೇಜರ್ ಎಂ.ಆರ್.ಲಮಾಣಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶ್ರೀಶೈಲ ಕವಲಗಿ, ಸದಸ್ಯರಾದ ಸುನಂದಾ ಯಂಪೂರೆ, ಎಸ್.ಬಿ ಖಾನಾಪೂರ, ರಜತ್ ತಾಂಬೆ, ಪರಶುರಾಮ ಗೌಂಡಿ, ಶಿವಾನಂದ ಹಡಪದ, ಮೋಹಸಿನ ಬೀಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ, ಕೆಡಿಪಿ ಜಿಲ್ಲಾ ಸದಸ್ಯರಾದ ನೂರ್ ಅಹ್ಮದ್, ಮಹಾನಂದ ಬಮ್ಮಣ್ಣಿ, ಯೋಜನಾ ಪ್ರಾಧಿಕಾರದ ಸದಸ್ಯ ಅಂಬರೀಶ ಚೌಗಲೆ, ಕೆಇಬಿ ನಾಮನಿರ್ದೇಶನ ಸದಸ್ಯೆ ಶಶಿಕಲಾ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.