ಕಲಬುರಗಿ: ಗಾಂಧಿ ಚಿಂತಕ, ಶಾಂತಿ ಕಾರ್ಯಕರ್ತ ಹಾಗೂ ಹಿರಿಯ ಬರಹಗಾರರಾದ ಇ.ಪಿ. ಮೆನನ್ (80) ಅವರಿಗೆ ಸರ್ವ ಸೇವಾ ಸಂಘ, ವಾರ್ಧಾ ವತಿಯಿಂದ ರಾಷ್ಟ್ರೀಯ ಗಾಂಧೀ ಪುರಸ್ಕಾರ ಘೋಷಿಸಲಾಗಿದೆ. ಜನ್ಮಭೂಮಿ ಕೇರಳವಾದರೂ ಕಳೆದ ಆರು ದಶಕಗಳಿಂದ ಕರ್ನಾಟಕವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಗಾಂಧೀ ಭವನ ಪರಿಸರದಲ್ಲೇ ವಾಸಿಸುತ್ತಿರುವ ಮೆನನ್, ಅಹಿಂಸೆ–ಶಾಂತಿ ಸಂದೇಶವನ್ನು ಬದುಕಿನ ಮೂಲಕ ಸಾರಿದ ಶಾಂತಿ ಸೈನಿಕರಾಗಿದ್ದಾರೆ.
ಮೆನನ್ ಅವರು ತಮ್ಮ ಇಪ್ಪತ್ತರ ವಯಸ್ಸಿನಲ್ಲೇ (1962) ಮಿತ್ರ ಸತೀಶ್ ಕುಮಾರ್ ಅವರೊಂದಿಗೆ ಅಣ್ವಸ್ತ್ರ ನಿಷೇಧ, ಶಾಂತಿ–ಸೌಹಾರ್ದಕ್ಕಾಗಿ 8,000 ಮೈಲುಗಳ ಪಾದಯಾತ್ರೆ ನಡೆಸಿ ಮಾಸ್ಕೋ, ಪ್ಯಾರಿಸ್, ಲಂಡನ್ ಮತ್ತು ವಾಷಿಂಗ್ಟನ್ ನಗರಗಳಿಗೆ ತಲುಪುವ ಮೂಲಕ ಜಾಗತಿಕ ಗಮನ ಸೆಳೆದಿದ್ದರು. ಆ ಸಾಹಸಯಾತ್ರೆಯ ಅನುಭವಗಳನ್ನು ಅವರು ಬರಹ ರೂಪದಲ್ಲಿ ದಾಖಲಿಸಿದ್ದು, ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದ್ದು, ಭಾರತದಲ್ಲಿ ಸರ್ವೋದಯ ಇಂಟರ್ನ್ಯಾಷನಲ್ ಕೇಂದ್ರದಿಂದ ಮರುಪ್ರಕಟಣೆ ಕಂಡಿದೆ.
ಉತ್ತರ ಪ್ರದೇಶದ ಗಾಂಧಿ ಅನುಯಾಯಿ ದಂಪತಿ ಮದನ್ ಮೋಹನ್ ವರ್ಮಾ–ಚಿತ್ರಾ ವರ್ಮಾ ಅವರ ಹೆಸರಿನಲ್ಲಿ ರೂ.1 ಲಕ್ಷ ನಗದು ಮತ್ತು ಸನ್ಮಾನ ಫಲಕ ನೀಡಲಾಗುವುದು. ಈ ಪುರಸ್ಕಾರವನ್ನು ಜನವರಿ 30ರಂದು ಕಲಬುರಗಿಯಲ್ಲಿ, ಹುತಾತ್ಮ ಅಪ್ಪಾರಾವ್ ಪಾಟೀಲ್ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಲಿರುವ ದಕ್ಷಿಣ ರಾಜ್ಯಗಳ ಸರ್ವೋದಯ ಸಮಾವೇಶದಲ್ಲಿ ಪ್ರದಾನಿಸಲಾಗುವುದು ಎಂದು ಅಖಿಲ ಭಾರತ ಸರ್ವೋದಯ ಮಂಡಲಗಳ ಅಧ್ಯಕ್ಷ ಚಂದನ್ ಪಾಲ್ ತಿಳಿಸಿದ್ದಾರೆ.
ಈ ಪುರಸ್ಕಾರಕ್ಕೆ ಹಿಂದಿನ ವರ್ಷಗಳಲ್ಲಿ 2021 – ಅಸ್ಸಾಂನ ಕುಸುಮಾ ಬೋರಾ ಮುಖರ್ಜಿ, 2022 – ಮಹಾರಾಷ್ಟ್ರದ ಅಣ್ಣಾ ಯಾದವ್, 2023 – ಒಡಿಶಾದ ಕೃಷ್ಣ ಮೋಹಂತಿ ಭಾಜನರಾಗಿದ್ದಾರೆ.

