ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಡಿಯಲ್ಲಿ ಡಾ.ಕಲ್ಯಾಣರಾವ.ಜಿ.ಪಾಟೀಲರ ಪ್ರಧಾನ ಸಂಪಾದಕತ್ವದಡಿಯಲ್ಲಿ ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜಶೇಖರ ಬಿರಾದಾರ ಸಂಪಾದಕತ್ವದಲ್ಲಿ ಪ್ರಕಟವಾದ ನವ್ಯ ಸಾಹಿತ್ಯ ಕೃತಿಯನ್ನು ಇತ್ತೀಚೆಗೆ ಸ್ನೇಹಿತ ಡಾ.ರಾಜಶೇಖರ ಬಿರಾದಾರ ಯರಗಟ್ಟಿಯಲ್ಲಿ ನನಗೆ ನೀಡಿದರು. ಕನ್ನಡ ಸಾಹಿತದಲ್ಲಿ ನವ್ಯಸಾಹಿತ್ಯದ ಅವಲೋಕನ ಇಲ್ಲಿ ಉತ್ತಮವಾಗಿ ಮೂಡಿ ಬಂದಿದೆ.ನವ್ಯ ಸಾಹಿತ್ಯ ಕಾಲಘಟ್ಟದ ಕಾವ್ಯ, ಸಣ್ಣಕತೆ,ನಾಟಕ,ಕಾದಂಬರಿ, ವಿಮರ್ಶೆ ಕುರಿತು ಇದುವರೆಗಿನ ವಿದ್ವಾಂಸರ ಚಿಂತನೆಗಳನ್ನು ಇಲ್ಲಿ ದಾಖಲಿಸಲಾಗಿದೆ.
ನವ್ಯ ಸಾಹಿತ್ಯದ ಪ್ರಧಾನ ಘಟಕದಂತಿರುವ ಯಶವಂತ ಚಿತ್ತಾಲ, ಕೀರ್ತಿನಾಥ ಕುರ್ತಕೋಟಿ, ಎ.ಕೆ.ರಾಮಾನುಜನ್, ಶಾಂತಿನಾಥ ದೇಸಾಯಿ, ಜಿ.ಎಸ್.ಸಿದ್ದಲಿಂಗಯ್ಯ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್, ಕೆ.ವಿ.ತಿರುಮಲೇಶ ಮುಂತಾದವರ ಚಿಕಿತ್ಸಕ ಮನೋಧರ್ಮದವರ ನೆಲೆ ನಿಲುವುಗಳನ್ನು ವಿವಿಧ ವಿದ್ವಾಂಸ ಲೇಖಕರಿಂದ ಬರೆದ ಬರಹಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ಇಲ್ಲಿ ಎರಡು ವಿಭಾಗಗಳಿವೆ. ಭಾಗ ೧ ರಲ್ಲಿ ೮ ಲೇಖನಗಳು ಎಡೆಪಡೆದಿವೆ.ಅವುಗಳಲ್ಲಿ ನವ್ಯ ಸಾಹಿತ್ಯಃ ಒಂದು ಅವಲೋಕನ. ಡಾ.ಎಚ್.ಎಸ್.ಶಿವಪ್ರಕಾಶ ಅವರ ಚಿಂತನಾರ್ಹ ಬರಹ ಮೊದಲ್ಗೊಂಡು ಡಾ.ಎಂ.ಎಸ್.ಮಾಗಣಗೇರಿಯವರ ನವ್ಯ ಸಾಹಿತ್ಯದ ಪ್ರೇರಣೆ ಹಾಗೂ ಧೋರಣೆಗಳು. ಡಾ.ರಾಜಶೇಖರ ಬಿರಾದಾರ ಅವರ ನವ್ಯ ಕಾವ್ಯ. ಡಾ.ಲಕ್ಷ್ಮೀಕಾಂತ ಪಂಚಾಳ ಅವರ ನವ್ಯ ಸಣ್ಣಕಥೆ. ಪ್ರೊ.ಬಾಪೂಜಿ ಕಾತರಕಿಯವರ ನವ್ಯ ಕಾದಂಬರಿ. ಡಾ.ಗುರುಸಿದ್ದಯ್ಯ ಸ್ವಾಮಿಯವರ ನವ್ಯ ನಾಟಕ. ಡಾ.ವಿಠ್ಠಲರಾವ್ ಟಿ ಗಾಯಕ್ವಾಡ್ ಅವರ ನವ್ಯ ವಿಮರ್ಶೆ, ಡಾ.ಭೀಮಾಶಂಕರ ಬಿರಾದಾರ ಅವರ ನವ್ಯ ವಿಮರ್ಶೆ ಮತ್ತು ಸಾಮಾಜಿಕತೆ ಎಂಬ ೮ ಲೇಖನಗಳು ನವ್ಯ ಸಾಹಿತ್ಯದ ಕುರಿತು ಚಿಂತನೆ ನಡೆಸಿವೆ.
ಭಾಗ ೨ ರಲ್ಲಿ ಡಾ.ವಿಠ್ಠಲರಾವ್ ಟಿ ಗಾಯಕ್ವಾಡ್ ಅವರ, ಗೋಕಾಕರ ನಾಟಕಗಳಲ್ಲಿ ಮಾನವೀಯ ಸ್ವರೂಪ ಹಾಗೂ ಅಡಿಗರ ಸಮಗ್ರ ಕಾವ್ಯ: ಒಂದು ಅಧ್ಯಯನ.ಡಾ.ಮೋಹನ ಕುಂಟಾರ್ ಅವರ ಯಶವಂತ ಚಿತ್ತಾಲರ ಸಣ್ಣ ಕಥೆಗಳು, ಶಿವಲಿಂಗ ಮಾಗಣಗೇರಿಯವರ ಚಿತ್ತಾಲರ ಆಟ ಕಥಾಸಂಕಲನದಲ್ಲಿ ವ್ಯಕ್ತವಾದ ಕಾಮ ಮತ್ತು ಸಾವು. ಪ್ರೊ.ಶ್ಯಾಮಲಾ ಎಸ್.ಸ್ವಾಮಿಯವರ ಕೀರ್ತಿನಾಥ ಕುರ್ತಕೋಟಿ, ಪ್ರೋ.ಭುವನೇಶ್ವರಿ ಟೊಂಗಳೆಯವರ ನವ್ಯ ಕವಿ ಎ.ಕೆ.ರಾಮಾನುಜನ್, ಪ್ರೊ.ರೇಣುಕಾ ಹೆಬ್ಬಾಳ ಅವರ ಶಾಂತಿನಾಥ ದೇಸಾಯಿಯವರ ಮುಕ್ತಿ, ನಿಕ್ಷೇಪ, ಸೃಷ್ಟಿ ಕಾದಂಬರಿಗಳ ವಿವೇಚನೆ. ಡಾ.ರಘುಶಂಖ, ಭಾತಂಬ್ರಾ ಅವರ ಸಮನ್ವಯ ಸಿದ್ಧಾಂತ ಪ್ರೋ.ಜಿ.ಎಸ್.ಸಿದ್ಧಲಿಂಗಯ್ಯ, ಡಾ.ಮೋಹನ.ಕುಂಟಾ ಅವರ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಗಳು, ಪ್ರೋ.ಶ್ರೀಮತಿ ರತ್ನಾ ಮೇಟಿಯವರ ನವ್ಯ ಬರಹಗಾರ ಪಿ.ಲಂಕೇಶ, ನಾಗಾರ್ಜುನ ಹಾಮಾ ಅವರ ಲಂಕೇಶ ಕಾದಂಬರಿಗಳ ವಸ್ತು ಮತ್ತು ಆಶಯ, ಡಾ.ರಾಜಶೇಖರ ಬಿರಾದಾರ ಅವರ ಚಂದ್ರಶೇಖರ ಕಂಬಾರರ ನಾಟಕಗಳು, ಶ್ರೀಮತಿ ವನಜಾಕ್ಷಿ ಬಡಿಗೇರ ಅವರ ಚಂದ್ರಶೇಖರ ಕಂಬಾರ ಅವರ ಕಾದಂಬರಿಗಳು. ಡಾ.ಎಂ.ಎಸ್.ಮಾಗಣಗೇರಿಯವರ ಗಿರೀಶ ಕಾರ್ನಾಡ ಪ್ರೋ.ರಾಮಣ್ಣ ಅವರ ನವ್ಯ ಸಾಹಿತಿ ಪೂರ್ಣಚಂದ್ರ ತೇಜಸ್ವಿಃ ಒಂದು ಅಧ್ಯಯನ. ಡಾ.ತಿಪ್ಪೇರುದ್ರ ಸಂಡೂರ ಅವರ ಕೆ.ವಿ.ತಿರುಮಲೇಶ ಅವರ ಕಾವ್ಯಃಒಂದು ವಿವೇಚನೆ. ಎಂಬ ಒಟ್ಟು ೧೬ ಬರಹಗಳು ಎಡೆಪಡೆದಿವೆ.
‘ನವ್ಯ ಸಾಹಿತ್ಯ : ಒಂದು ಅವಲೋಕನ’ ಎಂಬ ಲೇಖನದಲ್ಲಿ ಡಾ. ಎಚ್. ಎಸ್. ಶಿವಪ್ರಕಾಶ ಅವರು ನವ್ಯ ಸಾಹಿತ್ಯದ ಹುಟ್ಟು, ಪ್ರೇರಣಗಳ ವಿಶ್ಲೇಷಣೆಯೊಂದಿಗೆ, ಅಡಿಗ, ಗೋಕಾಕ, ನರಸಿಂಹಸ್ವಾಮಿ, ಎಕ್ಕುಂಡಿ, ಕಾರ್ನಾಡ ಮುಂತಾದವರ ಕೃತಿಗಳ ಉಲ್ಲೇಖದೊಂದಿಗೆ ಕನ್ನಡಲ್ಲಿ ನವ್ಯ ಸಾಹಿತ್ಯ ಬೆಳದು ಬಂದ ಬಗೆಯನ್ನು ಪರಾಮರ್ಶನ ಮಾಡಿದ್ದಾರೆ ಮತ್ತು ನವ್ಯ ಸಾಹಿತ್ಯದ ಭಿನ್ನತೆ, ಸಾಧನೆ – ಸಿದ್ಧಿಗಳನ್ನು ಪರಿಶೀಲಿಸಿದ್ದಾರೆ.
‘ನವ್ಯ ಸಾಹಿತ್ಯದ ಪ್ರೇರಣೆ-ಧೋರಣೆಗಳು’ ಎಂಬ ಲೇಖನದಲ್ಲಿ ಡಾ. ಎಂ. ಎಸ್. ಮಾಗಣಗೇರಿಯವರು ನವ್ಯ ಸಾಹಿತ್ಯದ ಅರ್ಥ, ವ್ಯಾಖ್ಯೆಗಳು, ನವ್ಯ ಸಾಹಿತ್ಯದ ಆರಂಭ, ನವ್ಯವಾದ ಕನ್ನಡ ಸಾಹಿತ್ಯದಲ್ಲಿ ನವ್ಯವಾದ, ನವ್ಯ ಸಾಹಿತ್ಯದ ಪ್ರೇರಣೆಗಳು, ನವ್ಯ ಸಾಹಿತ್ಯದ ಸ್ವರೂಪ, ಲಕ್ಷಣಗಳು, ನವ್ಯ ಸಾಹಿತ್ಯದ ಧೋರಣೆಗಳು ಮತ್ತು ನವ್ಯ ಸಾಹಿತ್ಯದ ಇತಿಮಿತಿಗಳು ಎಂಬ ಉಪಶೀರ್ಷಿಕೆಗಳಡಿಯಲ್ಲಿ ನವ್ಯ ಸಾಹಿತ್ಯದ ವಿಶ್ಲೇಷಣೆ ಮಾಡಿದ್ದಾರೆ.
‘ನವ್ಯಕಾವ್ಯ’ ಎಂಬ ಲೇಖನದಲ್ಲಿ ಡಾ.ರಾಜಶೇಖರ ಬಿರಾದಾರ ಅವರು, ನವ್ಯಕಾವ್ಯದ ವಿಶಿಷ್ಟ ಅಂಶಗಳ ಕುರಿತು ಚರ್ಚಿಸಿದ್ದಾರೆ. ಪ್ರಮುಖ ನವ್ಯ ಕವಿಗಳ ಕವಿತೆಗಳ ಉದ್ಧರಣೆಯೊಂದಿಗೆ ಹಿಂದಿನ ನವೋದಯ, ಪ್ರಗತಿಶೀಲ ಪಂಥದ ಕವಿತೆಗಳಿಗಿಂತ ನವ್ಯಕವಿತೆ ಹೇಗೆ ಭಿನ್ನ ಎಂಬುದುನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದ್ದಾರೆ.
‘ನವ್ಯ ಸಣ್ಣಕತೆಗಳು’ ಎಂಬ ಲೇಖನದಲ್ಲಿ ಡಾ. ಲಕ್ಷ್ಮೀಕಾಂತ ಪಂಚಾಳ ಅವರು, ನವ್ಯ ಸಣ್ಣಕತೆಗಳ ಸ್ವರೂಪ, ಪ್ರೇರಣ, ಧೋರಣೆ ಹಾಗೂ ಹಿಂದಿನ ಸಣ್ಣಕತೆಗಳಿಗಿಂತ ನವ್ಯ ಕತೆಗಳ ಭಿನ್ನತೆಗಳನ್ನು ವಿಶ್ಲೇಷಿಸಿದ್ದಾರೆ. ಬಿ. ಸಿ. ರಾಮಚಂದ್ರಶರ್ಮ, ಕೆ. ಸದಾಶಿವ, ಶಾಂತಿನಾಥ ದೇಸಾಯಿ, ಯು. ಆರ್. ಅನಂತಮೂರ್ತಿ, ಪಿ. ಲಂಕೇಶ್, ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಕ. ವೆಂ. ರಾಜಗೋಪಾಲಾಚಾರಿ, ಶ್ರೀಕೃಷ್ಣ ಆಲನಹಳ್ಳಿ, ಎಂ. ಎಸ್. ಕೆ. ಪ್ರಭು ಹಾಗೂ ಗಿರಡ್ಡಿ ಗೋವಿಂದರಾಜ ಅವರ ಕಥೆಗಳನ್ನು ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ.
ಡಾ. ಚಂದ್ರಶೇಖರ ಹೆಗಡೆಯವರು ‘ನವ್ಯಕಾದಂಬರಿ’ ಎಂಬ ಲೇಖನದಲ್ಲಿ, ನವ್ಯ ಪಂಥದ ಪ್ರಮುಖ ಕಾದಂಬರಿಗಳ ಉಲ್ಲೇಖದೊಂದಿಗೆ ನವ್ಯ ಕಾದಂಬರಿಗಳ ವೈಶಿಷ್ಟ್ಯವನ್ನು ಪರಾಮರ್ಶನ ಮಾಡಿದ್ದಾರೆ.
‘ನವ್ಯ ನಾಟಕಗಳು’ ಎಂಬ ಲೇಖನದಲ್ಲಿ ಡಾ. ಗುರುಸಿದ್ಧಯ್ಯ ಸ್ವಾಮಿ ಅವರು ನವ್ಯ ನಾಟಕಗಳ ವೈಶಿಷ್ಯ, ಅಸಂಗತ ನಾಟಕಗಳ ಅರ್ಥ, ಸ್ವರೂಪಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಡಾ. ವಿಠಲರಾವ್ ಟಿ. ಗಾಯಕ್ವಾಡ್ಅವರು ‘ನವ್ಯ ವಿಮರ್ಶೆ’ ಎಂಬ ಲೇಖನದಲ್ಲಿ, ನವ್ಯ ವಿಮರ್ಶೆಯ ಇತಿಹಾಸ, ಪ್ರಮುಖ ತತ್ವಗಳನ್ನು ಕುರಿತು ಚರ್ಚಿಸಿದ್ದಾರೆ.
‘ನವ್ಯ ವಿಮರ್ಶೆ ಮತ್ತು ಸಾಮಾಜಿಕತೆ’ ಎಂಬ ಲೇಖನದಲ್ಲಿ ಡಾ. ಭೀಮಾಶಂಕರ ಬಿರಾದಾರ ಅವರು, ಸಾಂಸ್ಕೃತಿಕ ದ್ವಂದ್ವ, ಅಸ್ತಿತ್ವವಾದ ರೂಪ, ಕಾಮ, ನಗರ ಪ್ರಜ್ಞೆ ಮತ್ತು ಪರಕೀಯತೆ ಎಂಬ ಅಂಶಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಿದ್ದಾರೆ.
ಎರಡನೆಯ ಭಾಗದಲ್ಲಿ ನವ್ಯ ಮಾರ್ಗದಲ್ಲಿ ಸಾಹಿತ್ಯರಚನೆ ಮಾಡಿದ ಪ್ರಮುಖ ಕವಿ, ಬರಹಗಾರರ ಕುರಿತ ಲೇಖನಗಳಿವೆ.
‘ಅಡಿಗರ ಸಮಗ್ರಕಾವ್ಯ : ಒಂದುಅಧ್ಯಯನ’ ಎಂಬ ಲೇಖನದಲ್ಲಿ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು, ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ಸಮಗ್ರ ಕಾವ್ಯವನ್ನು ವಿಶ್ಲೇಷಣೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಲೇಖನದಲ್ಲಿ ಅಡಿಗರ ಕಾವ್ಯವು ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸಿದ ಬಗೆಯನ್ನು ಸವಿವರವಾಗಿ ಚರ್ಚಿಸಿದ್ದಾರೆ. ಅಡಿಗರ ಕಾವ್ಯ ರಚನೆ ನಡೆದು ಬಂದ ದಾರಿ, ಅವರ ಕಾವ್ಯದ ವಸ್ತು ಮತ್ತು ದೃಷ್ಟಿ-ಧೋರಣೆಗಳು, ಅಡಿಗರ ಕಾವ್ಯದಲ್ಲಿ ಕಂಡುಬರುವ ವಾಸ್ತವತೆಯ ಪ್ರಜ್ಞೆ, ಪ್ರಾಮಾಣಿಕ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ, ಅಡಿಗರ ಕಾವ್ಯ, ಭಾಷೆ ಮತ್ತು ಛಂದಸ್ಸಿನ ದೃಷ್ಟಿಯಿಂದ ಮತ್ತು ಅಡಿಗರ ಕಾವ್ಯ ನವ್ಯ ಸಾಹಿತ್ಯ ಪಂಥದಲ್ಲಿ ಉಂಟು ಮಾಡಿದ ಪರಿಣಾಮ ಎಂಬ ಅಂಶಗಳ ಆಧಾರದ ಮೇಲೆ ತಮ್ಮ ಚರ್ಚೆಯನ್ನು ಮಾಡಿದ್ದಾರೆ.
‘ಯು. ಆರ್. ಅನಂತಮೂರ್ತಿಯವರ ಸಣ್ಣಕತೆಗಳು’ ಎಂಬ ಲೇಖನದಲ್ಲಿ ಡಾ. ಮೋಹನ ಕುಂಟಾರ್ ಅವರು. ಅನಂತಮೂರ್ತಿಯವರು ನವ್ಯ ಮಾರ್ಗದಲ್ಲಿ ರಚಿಸಿದ ‘ಎಂದೆಂದೂ ಮುಗಿಯದಕತೆ’, ‘ಪ್ರಶ್ನೆ’, ‘ಮೌನಿ’ ಹಾಗೂ ‘ಕ್ಲಿಪ್ಜಾಯಿಂಟ್’ ಸಂಕಲನಗಳಲ್ಲಿ ಕತೆಗಳನ್ನು ಆಧರಿಸಿ ಚರ್ಚಿಸಿದ್ದಾರೆ.
‘ಗೋಕಾಕರ ನಾಟಕಗಳಲ್ಲಿ ಮಾನವೀಯತೆಯ ಸ್ವರೂಪ’ ಎಂಬ ಲೇಖನದಲ್ಲಿ ಡಾ. ವಿಠಲರಾವ್ ಟಿ. ಗಾಯಕ್ವಾಡ್ಅವರು, ವಿ. ಕೃ. ಗೋಕಾಕರ ‘ಜನನಾಯಕ’, ‘ಯುಗಾಂತರ’, ‘ವಿಮರ್ಶಕ ವೈದ್ಯ’, ‘ಮುನಿದ ಮಾರಿ’ ನಾಟಕಗಳಲ್ಲಿ ವ್ಯಕ್ತವಾದ ಮಾನವೀಯತೆಯ ಸ್ವರೂಪವನ್ನು ಪರಾಮರ್ಶನ ಮಾಡಿದ್ದಾರೆ.
ಡಾ. ಮೋಹನ ಕುಂಟಾರ್ಅವರು ‘ಯಶವಂತ ಚಿತ್ತಾಲರ ಸಣ್ಣ ಕತೆಗಳು’ ಎಂಬ ಲೇಖನದಲ್ಲಿ, ನವ್ಯ ಮಾರ್ಗದ ಪ್ರಮುಖ ಕತೆಗಾರರಾದ ಯಶವಂತ ಚಿತ್ತಾಲರ ‘ಸಂದರ್ಶನ’, ‘ಅಬೋಲಿನ್’, ‘ಆಟ’, ‘ಕಥೆಯಾದಳು ಹುಡುಗಿ’ ಸಂಕಲನದ ಕತೆಗಳನ್ನು ವಿಶ್ಲೇಷಣೆ ಮಾಡಿದ್ದಾರೆ.
‘ಕೀರ್ತಿನಾಥ ಕುರ್ತಕೋಟಿ’ ಎಂಬ ಲೇಖನದಲ್ಲಿ ಪ್ರೊ. ಶಾಮಲಾ ಎಸ್. ಸ್ವಾಮಿ ಅವರು, ನವ್ಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರ ಮನೆತನದ ಹಿನ್ನೆಲೆ, ವೃತ್ತಿಜೀವನ ಮತ್ತು ಸ್ವಭಾವ ಚಿತ್ರಣದೊಂದಿಗೆ ಅವರ ಕೃತಿಗಳ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ.
‘ನವ್ಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ : ಒಂದು ಅಧ್ಯಯನ’ ಎಂಬ ಲೇಖನದಲ್ಲಿ ಪ್ರೊ. ರಾಮಣ್ಣ ಉಪ್ಪಾರ ಅವರು, ‘ತೇಜಸ್ವಿಯವರ ಬದುಕು ಮತ್ತು ಸಾಹಿತ್ಯ’ ಹಾಗೂ ‘ಕೃತಿಗಳ ವಿಶ್ಲೇಷಣೆ’ ಎಂಬ ಎರಡು ಭಾಗಗಳಲ್ಲಿ ತೇಜಸ್ವಿಯವರ ಬದುಕು-ಬರೆಹಗಳ ಪರಾಮರ್ಶನ ಮಾಡಿದ್ದಾರೆ.
‘ನವ್ಯ ಕವಿ ಎ. ಕೆ. ರಾಮಾನುಜನ್’ ಎಂಬ ಲೇಖನದಲ್ಲಿ ಭುವನೇಶ್ವರಿ ಟೊಂಗಳೆ ಅವರು, ರಾಮಾನುಜನ್ ಅವರ ಕವಿತೆಯ ವಿಶಿಷ್ಟತೆ, ಪ್ರೇರಣೆ, ಪ್ರಭಾವಗಳನ್ನು ಸೋದಾಹರಣವಾಗಿ ಚರ್ಚಿಸಿದ್ದಾರೆ.
ಪ್ರೊ. ಸವಿತಾ ಝಳಕಿಯವರು ‘ನವ್ಯ ಲೇಖಕಿಯರು’ ಎಂಬ ಲೇಖನದಲ್ಲಿ, ನವ್ಯ ಪಂಥದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಮಹಿಳೆಯರ ಸಂಕ್ಷಿಪ್ತ ಪರಿಚಯ ಮಾಡಿದ್ದಾರೆ. ‘ಶಾಂತಿನಾಥದೇಸಾಯಿಯವರ ಮುಕ್ತಿ, ವಿಕ್ಷೇಪ, ಸೃಷ್ಟಿ ಕಾದಂಬರಿಗಳ ವಿವೇಚನೆ’ ಎಂಬ ಲೇಖನದಲ್ಲಿ ರೇಣುಕಾ ಹೆಬ್ಬಾಳ ಅವರು, ಶಾಂತಿನಾಥ ದೇಸಾಯಿಯವರ ಜನನ, ಸಾಹಿತ್ಯ ದರ್ಶನದೊಂದಿಗೆ ಮುಕ್ತಿ, ವಿಕ್ಷೇಪ ಹಾಗೂ ಸೃಷ್ಟಿ ಕಾದಂಬರಿಗಳ ವಸ್ತು, ವಿನ್ಯಾಸ ಹಾಗೂ ಆಶಯಗಳ ಪರಾಮರ್ಶನ ಮಾಡಿದ್ದಾರೆ.
‘ಚಂದ್ರಶೇಖರ ಕಂಬಾರರ ಕಾದಂಬರಿಗಳು’ ಎಂಬ ಲೇಖನದಲ್ಲಿ ಶ್ರೀಮತಿ ವನಜಾಕ್ಷಿ ಬಡಿಗೇರ ಅವರು, ನವ್ಯ ಮಾರ್ಗದ ಪ್ರಮುಖ ಕವಿ, ನಾಟಕಕಾರ ಹಾಗೂ ಕಾದಂಬರಿಕಾರರಾಗಿರುವ ಚಂದ್ರಶೇಖರ ಕಂಬಾರರ ‘ಅಣ್ಣತಂಗಿ’, ‘ಕರಿಮಾಯಿ’, ‘ಸಿಂಗಾರೆವ್ವ ಮತು ್ತಅರಮನೆ’, ‘ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ’, ‘ಶಿಖರ ಸೂರ್ಯ’ ಹಾಗೂ ‘ಶಿವನ ಡಂಗುರ’ ಕಾದಂಬರಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟಿದ್ದಾರೆ.
‘ನವ್ಯ ಬರೆಹಗಾರ ಲಂಕೇಶ’ ಎಂಬ ಲೇಖನದಲ್ಲಿ ಶ್ರೀಮತಿ ರತ್ನಾ ಮೇಟಿಯವರು, ಲಂಕೇಶ ಅವರ ಜನನ, ವಿದ್ಯಾಭ್ಯಾಸ, ಉದ್ಯೋಗಗಳ ಪರಿಚಯದೊಂದಿಗೆ ಅವರ ಸಾಹಿತ್ಯ ಕೃತಿಗಳ ಪರಾಮರ್ಶನ ಮಾಡಿದ್ದಾರೆ.
‘ಗಿರೀಶಕಾರ್ನಾಡ’ ಎಂಬ ಲೇಖನದಲ್ಲಿ ಡಾ. ಎಂ. ಎಸ್. ಮಾಗಣಗೇರಿಯವರು, ಗಿರೀಶ ಕಾರ್ನಾಡರ ಜೀವನ, ವೃತ್ತಿಜೀವನ, ಸಾಹಿತ್ಯ ಕೃಷಿ, ಪ್ರಶಸ್ತಿ-ಸನ್ಮಾನಗಳು, ನಾಟಕಗಳು, ಚಿತ್ರರಂಗ ಎಂಬ ಅಂಶಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಿದ್ದಾರೆ.
ಡಾ. ತಿಪ್ಪೇರುದ್ರ ಸಂಡೂರು ಅವರು ‘ಕೆ. ವಿ. ತಿರುಮಲೇಶ’ ಎಂಬ ಲೇಖನದಲ್ಲಿ ನವ್ಯ ಮಾರ್ಗದ ಪ್ರಮುಖ ಕವಿಯಾಗಿರುವ ಕೆ. ವಿ. ತಿರುಮಲೇಶ ಅವರ ಜೀವನದ ಸಂಕ್ಷಿಪ್ತ ಪರಿಚಯದೊಂದಿಗೆ, ಅವರ ಕಾವ್ಯದಲ್ಲಿನ ನವ್ಯತೆಯ ಅಂಶಗಳನ್ನು ಪರಾಮರ್ಶನ ಮಾಡಿದ್ದಾರೆ.
‘ಸಮನ್ವಯ ಸಿದ್ಧಾಂತಿ : ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ’ ಎಂಬ ಲೇಖನದಲ್ಲಿ ಡಾ. ರಘುಶಂಖ ಭಾತಂಬ್ರಾ ಅವರು, ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಅವರ ಜೀವನ ಸಾಧನೆ, ಸಾಹಿತ್ಯಿಕ ಸಾಧನೆ, ಕಾವ್ಯಧೋರಣೆ, ಸಂಶೋಧನ ವಿಮರ್ಶೆ, ಜೀವನಚರಿತ್ರೆ, ಅನುವಾದಿತ ಕೃತಿಗಳು, ಸಂಪಾದನ ಸಾಹಿತ್ಯ, ಸಂಕೀರ್ಣ ಸಾಹಿತ್ಯ ಎಂಬ ಅಂಶಗಳ ಆಧಾರದ ಮೇಲೆ ಚರ್ಚಿಸಿದ್ದಾರೆ.
‘ಚಿತ್ತಾಲರ ಆಟ ಕಥಾಸಂಕಲನದಲ್ಲಿ ವ್ಯಕ್ತವಾದ ಕಾಮ ಮತ್ತು ಸಾವು’ ಎಂಬ ಲೇಖನದಲ್ಲಿ ಶಿವಲಿಂಗ ಮಾಗಣಗೇರಿ ಅವರು, ನವ್ಯ ಮಾರ್ಗದ ಪ್ರಮುಖ ಕತೆಗಾರ ಯಶವಂತ ಚಿತ್ತಾಲರ ‘ಆಟ’ ಕಥಾಸಂಕಲನದಲ್ಲಿ ಅಭಿವ್ಯಕ್ತಿಗೊಂಡಿರುವ ಕಾಮ ಮತ್ತು ಸಾವು ಪರಿಕಲ್ಪನೆಗಳ ಪರಾಮರ್ಶನ ಮಾಡಿದ್ದಾರೆ.
‘ಲಂಕೇಶರ ಕಾದಂಬರಿಗಳ ವಸ್ತು ಮತ್ತು ಆಶಯ’ ಎಂಬ ಲೇಖನದಲ್ಲಿ ನಾಗಾರ್ಜುನ ಹಾಮಾ ಅವರು, ಪಿ. ಲಂಕೇಶ್ ಅವರ ಜೀವನ ಹಾಗೂ ಸಾಹಿತ್ಯಿಕ ಸಾಧನೆಗಳ ಸಂಕ್ಷಿಪ್ತ ಪರಿಚಯದೊಂದಿಗೆ, ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ‘ಅಕ್ಕ’ ಕಾದಂಬರಿಗಳ ವಸ್ತು, ತಂತ್ರ ಹಾಗೂ ಆಶಯಗಳನ್ನು ಚರ್ಚಿಸಿದ್ದಾರೆ.
ಡಾ. ರಾಜಶೇಖರ ಬಿರಾದಾರ ಅವರು ‘ಚಂದ್ರಶೇಖರ ಕಂಬಾರರ ನಾಟಕಗಳು’ ಎಂಬ ಲೇಖನದಲ್ಲಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ, ನಾಟಕಕಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರ ಅವರ ಇದುವರೆಗಿನ ಸಮಗ್ರ ನಾಟಕಗಳ ಸಂಕ್ಷಿಪ್ತ ಪರಿಚಯನ್ನು ಮಾಡಿಕೊಟ್ಟಿದ್ದಾರೆ.
ಹೀಗೆ ನವ್ಯಸಾಹಿತ್ಯಕ್ಕೆ ಸಂಬಂಧಿಸಿದ ಔಚಿತ್ಯಪೂರ್ಣ ಕೃತಿ ಇದಾಗಿದ್ದು ಇದರ ಬೆಲೆಃ೩೦೦ ರೂಪಾಯಿಗಳು. ಡಾ.ಕಲ್ಯಾಣರಾವ ಜಿ ಪಾಟೀಲರ ಪ್ರಧಾನ ಸಂಪಾಕತ್ವದಲ್ಲಿ ಡಾ.ರಾಜಶೇಖರ ಬಿರಾದಾರ ಅವರು ಈ ಕೃತಿಯನ್ನು ಸಂಪಾದಿಸುವ ಮೂಲಕ ನವ್ಯಸಾಹಿತ್ಯಕ್ಕೆ ನ್ಯಾಯೋಚಿತವಾದ ವಿಚಾರಗಳನ್ನು ಆಯ್ದ ವಿದ್ವಾಂಸರಿಂದ ಬರಹಗಳನ್ನು ಆಮಂತ್ರಿಸಿ ಅವುಗಳನ್ನು ಪ್ರಕಟಿಸುವ ಜವಾಬ್ದಾರಿಯುತ ಸಂಪಾದನೆ ಮಾಡಿರುವುದು ಅಭಿನಂದನಾರ್ಹ.ಇಂತಹ ಕೃತಿಗಳ ಅವಶ್ಯಕತೆ ಇಂದಿನ ಯುವ ಪೀಳಿಗೆಗೆ ಇದೆ ಎಂದರೆ ಅತಿಶಯೋಕ್ತಿಯಾಗದು
ಡಾ.ರಾಜಶೇಖರ ಬಿರಾದಾರ
ಯರಗಟ್ಟಿಯ ಶ್ರೀ ಸಿ.ಎಂ.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜಶೇಖರ ಬಿರಾದಾರ ಅವರ ಪರಿಚಯ ನನಗೆ ಆಗಿದ್ದು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದಾಗ. ಇವರ ಉಪನ್ಯಾಸ ಮುಗಿದ ನಂತರ ಅವರನ್ನು ಪರಿಚಯಿಸಿಕೊಂಡೆ ನಂತರ ಅವರು ಯರಗಟ್ಟಿಗೆ ಹೋಗಿ ತಮ್ಮ ಕೃತಿ ‘ಸಾಹಿತ್ಯ ಆಸ್ವಾದನೆ’ಯನ್ನು ನನಗೆ ನೀಡಿದರು.
ಇವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಎಲೆಮರೆಯ ಕಾಯಿಯಂತೆ ಉಪನ್ಯಾಸಕ ವೃತ್ತಿಯ ಜೊತೆಗೆ ಸಾಹಿತ್ಯದ ಆಸ್ವಾದಕರು. ಮೂಲತಃ ಯಾದಗರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಎಂಬ ಗ್ರಾಮದವರು. ಎಲ್ಲಿಯ ಸುರಪುರ ಎಲ್ಲಿಯ ಯರಗಟ್ಟಿ ಎತ್ತಣಿದೆತ್ತ ಸಂಬಂಧವಯ್ಯ ಎನ್ನುತ್ತ ಇವರ ಬದುಕಿನ ಪರಿಚಯವನ್ನು ಕೇಳಿದಾಗ ಇವರಲ್ಲಿನ ಪ್ರತಿಭೆಗೆ ಹ್ಯಾಟ್ಸಾಫ್ ಹೇಳಲೇಬೇಕು.
ತಂದೆ ದಿವಂಗತ ಹಣಮಂತರಾಯಗೌಡ ತಾಯಿ ಗಂಗಮ್ಮ ದಂಪತಿಗಳ ಎರಡು ಗಂಡು ಮಕ್ಕಳಲ್ಲಿ ಎರಡನೆಯವರು ಡಾ.ರಾಜಶೇಖರ ಬಿರಾದಾರ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆ ತಾಯಿಯ ಅಕ್ಕರೆಯ ಮಗನಾಗಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋನ್ಹಾಳದಲ್ಲಿ ಒಂದರಿಂದ ಏಳನೆಯ ತರಗತಿಯವರೆಗೆ ವ್ಯಾಸಂಗ ಮಾಡಿ ನಂತರ ಪ್ರೌಢಶಾಲಾ ವ್ಯಾಸಂಗವನ್ನು ಸಗರನಾಡು ಪ್ರೌಢಶಾಲೆ ಅಮ್ಮಾಪುರದಲ್ಲಿ ಪೂರೈಸಿದರು. ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಶ್ರೀ ಪ್ರಭು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸುರಪುರದಲ್ಲಿ ಪೂರೈಸಿ ಬಿ.ಈಡಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮದರ್ ಥರೇಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮುಗಿಸಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ.ವ್ಯಾಸಂಗ ಮುಗಿಸಿ ಎನ.ಇ.ಟಿ ಹಾಗೂ ಜಿ.ಆರ್.ಎಫ್ ಮುಗಿಸಿದರು.
ಇವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಸಶಸ್ತ್ರ ಮೀಸಲು ಪಡೆಯಲ್ಲಿ ೨೦೦೭-೨೦೦೮ ರ ವರೆಗೆ ಪೇದೆಯಾಗಿ ವೃತ್ತಿಗೆ ಸೇರಿದರು. ನಂತರ ೨೦೦೮-೨೦೦೯ ರ ವರೆಗೆ ಚಿತ್ತಾಪುರ ಡಿಪೋದಲ್ಲಿ ಕೆ.ಎಸ್.ಆರ್.ಟಿ.ಸಿಯ ಸಂಚಾರ ನಿರೀಕ್ಷಕ ಹುದ್ದೆಯನ್ನು ನಿರ್ವಹಿಸಿದರು. ೨೦೦೯ ರಿಂದ ೨೦೧೨ ರವರೆಗೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸುರಪುರದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ತದನಂತರ ೨೦೧೨ ರಿಂದ ೨೦೧೩ ರ ವರೆಗೆ ಮೊರಾರ್ಜಿ ವಸತಿ ಶಾಲೆ ಹುಣಸಗಿಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು.ಇಷ್ಟಕ್ಕೆ ತೃಪ್ತರಾಗದ ಇವರು ಚಾಮನಾಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ೨೦೧೩ ರಲ್ಲಿ ಸೇವೆಗೆ ಸೇರಿ ೨೦೧೭ ರ ವರೆಗೆ ಉಪನ್ಯಾಸಕ ವೃತ್ತಿ ಕೈಗೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಡಾ.ವಿಠ್ಠಲರಾವ್.ಟಿ.ಗಾಯಕವಾಡ್ ಇವರ ಮಾರ್ಗದರ್ಶನದಲ್ಲಿ “ಶಿವರಾಮ ಕಾರಂತ ಹಾಗೂ ರವೀಂದ್ರನಾಥ ಠಾಗೂರ್ ಅವರ ಕಾದಂಬರಿಗಳಲ್ಲಿ ಆಧುನಿಕತೆ” ವಿಷಯದಲ್ಲಿ ಪಿ.ಎಚ್,ಡಿ ಪೂರೈಸಿದರು. ಸದ್ಯ ಯರಗಟ್ಟಿಯ ಸಿ.ಎಂ.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ೨೦೧೭ ರಿಂದ ಸೇವೆ ಸಲ್ಲಿಸುತ್ತಿರುವರು.
ಇವರ ಪ್ರಮುಖ ಕೃತಿಗಳೆಂದರೆ ವಿಮರ್ಶಾ ಸಂಕಲನ ಸಾಹಿತ್ಯ ಆಸ್ವಾದನೆ ಮತ್ತು ಕರಿಯು ಕನ್ನಡಿಯೊಳಗೆ. ವಚನ ಸಾಹಿತ್ಯ ಮರು ಓದು ಸಂಪಾದನ ಕೃತಿ.ಹಾಗೂ ನವ್ಯ ಸಾಹಿತ್ಯ ಸಂಪಾದನ ಕೃತಿ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಚಿತ್ರಣ ಒಳಗೊಂಡ ಕೃತಿ.ಸಂಶೋಧನ ಕೃತಿ ಮರೆತು ಹೋದ ಸ್ವಾತಂತ್ರ್ಯ ವೀರ ಸಾತಪ್ಪ ಟೋಪಣ್ಣವರ ಹೀಗೆ ಕತೆ ಕವನ ವಿಮರ್ಶೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯ ಛಾಪನ್ನು ಮೂಡಿಸುತ್ತ ಪದವಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವರು.
ಇವರು ಬರೆದ ಕಾಡುವ ಕಾಡೂರು ಎಂಬ ಲೇಖನವು ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ(ಗದಗ) ಆಯೋಜಿಸಿದ್ದ ರಾಜ್ಯ ಮಟ್ಟದ ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇಂತಹ ಅಪರೂಪದ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ಉಪನ್ಯಾಸಕರೊಬ್ಬರು ನಮ್ಮೊಂದಿಗಿರುವುದು ನಮಗೆ ಹೆಮ್ಮೆ.
ಡಾ.ರಾಜಶೇಖರ ಬಿರಾದಾರ ಅವರ ಸಂಪರ್ಕ ಸಂಖ್ಯೆ: ೯೭೪೦೯೫೪೧೪೦
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ