Homeಸುದ್ದಿಗಳುಕೃತಿ ಪರಿಚಯ: ಕಾದಂಬರಿ ' ಹವನ '

ಕೃತಿ ಪರಿಚಯ: ಕಾದಂಬರಿ ‘ ಹವನ ‘

ಹವನ – ೨೦೦೧ ರಲ್ಲಿ ಬಂದ ಶ್ರೀ ಮಲ್ಲಿಕಾರ್ಜುನ ಹಿರೇಮಠ ಅವರು ಬರೆದಿರುವ ಕಾದಂಬರಿ. ಸಾಂಸ್ಕೃತಿಕ ಅಧ್ಯಯನ ದೃಷ್ಟಿಯಿಂದ ಇದೊಂದು ಉತ್ತಮ ಕಾದಂಬರಿ. ಶೋಷಣೆಗೊಳಗಾದ ಲಂಬಾಣಿ ಜನಾಂಗದ ಆಚಾರ ವಿಚಾರ ಸಂಸ್ಕೃತಿ ಮತ್ತು ಆಧುನಿಕತೆಗೆ ಸಿಲುಕಿ ಈ ಜನಾಂಗವು ಅನುಭವಿಸುವ ಸಾಂಸ್ಕೃತಿಕ ಪಲ್ಲಟಗಳನ್ನು ದಿಟ್ಟವಾಗಿ ನಿರೂಪಿಸುತ್ತದೆ. ಲಂಬಾಣಿ ಜನಾಂಗದ ಬಗ್ಗೆಯೇ ಬರೆದಂಥ ಕತೆ ಕಾದಂಬರಿಗಳು ವಿರಳ. ಅದರಲ್ಲಿ ಹಿರೇಮಠ ಅವರ ಪ್ರಯತ್ನ ಪ್ರಶಂಸನೀಯ. ಕಾದಂಬರಿ ಓದುತ್ತ ಹೋದಂತೆ ಲಂಬಾಣಿ ಜನಾಂಗದ ಇತಿಹಾಸ, ಅವರ ಮೂಲ ಪುರುಷ ಸೇವಾಲಾಲ, ಅವರ ವಲಸೆ, ವಲಸೆಯಿಂದುಂಟಾದ ಕಷ್ಟಗಳನ್ನು ಎದುರಿಸುವ ರೀತಿ, ಏನೇ ಆಳುಮಟ್ಟದ ಕೆಲಸ ಮಾಡಿದರೂ ತಂತಮ್ಮ ಸಂಸ್ಕೃತಿ ಆಚರಣೆಗಳನ್ನು ಅಪ್ಪಿಕೊಂಡು ಆಚರಿಸುವ ರೀತಿ…ಹೀಗೆ ಸಾಕಷ್ಟು ವಿಚಾರಗಳು ಓದಲು, ಅವನ್ನು ದರ್ಶಿಸಲು ಸಿಕ್ಕವು.

ಇಲ್ಲಿ ಮುಖ್ಯವಾಗಿ ಭಾಷೆ ಮತ್ತು ನಿರೂಪಣಾ ಕ್ರಮ ನನಗೆ ತುಂಬಾ ಪ್ರಾಮಾಣಿಕವೆನಿಸಿತು. ಎಲ್ಲಿಯೂ ಸಿನಿಕತನವಿಲ್ಲ, ಮಾಂತ್ರಿಕ ಎನುವಂಥ ಭಾಷೆಯಿಂದ ಓದುಗನನ್ನು ಚಕಿತಗೊಳಿಸುವ ಅನಗತ್ಯ ಪಾಂಡಿತ್ಯ ಪ್ರದರ್ಶನವಿಲ್ಲ. ತಮ್ಮ ಅನುಭವದ ಹಿನ್ನೆಲೆಯಲ್ಲಿ ತಮಗೆ ದಕ್ಕಿದ ಸಂಗತಿಗಳನ್ನು ಕತೆಗೊಳಪಡಿಸಿ, ಅದನ್ನು ಶಾಂತವಾಗಿ ಹರಿವ ನೀರಿನಂತೆ ನಿರೂಪಿಸುತ್ತ ಹೋಗುತ್ತಾರೆ. ಕಾದಂಬರಿಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗ ಲೇಖಕರು ಉತ್ತಮ ಪುರುಷ ನಿರೂಪಣೆಯಲ್ಲಿ ಬರೆದಿರುವುದು, ಎರಡನೆಯ ಭಾಗ ಕತೆಯ ಕೆಲ ಮುಖ್ಯ ಪಾತ್ರಗಳು ತಾವಾಗೇ ತಮ್ಮ ನೆಲೆಯಲ್ಲಿ ಕಂಡಿದ್ದನ್ನು ಹೇಳುವುದು. ಕತೆಯ ಮೊದಲಲ್ಲಿ ಲೇಖಕರು ತಾವೇ ಬಂದು ಮಾತಾಡಿ ಹೋಗುತ್ತಾರೆ, ಆಮೇಲೆ ಉಳಿದ ಪಾತ್ರಗಳ ಕೈಲಿ ಮಾತಾಡಿಸುತ್ತಾರೆ. ನಿರೂಪಣೆ ದೃಷ್ಟಿಯಿಂದ ಇದೊಂದು ಒಳ್ಳೆಯ ಪ್ರಯೋಗ. ಇದರ ಮೂಲಕ ಅವರು ಲೇಖಕರು ತಮ್ಮ ವಿಚಾರಗಳನ್ನು ಕತೆಗಳ ಮಧ್ಯೆ ತೂರಿಸುವುದರಿಂದ ಬಚಾವಾಗುತ್ತಾರೆ. ಸಾಮಾನ್ಯವಾಗಿ ಕಾದಂಬರಿಗಳೆಂದರೆ ಅಲ್ಲಿ ವರ್ಣನೆ, ವಿವರಣೆ ಸಹಜ. ಅದರಲ್ಲೂ ಕವಿ ಕಾದಂಬರಿಕಾರನಾಗಿದ್ದರೆ ಅಲ್ಲಿ ಸಾಕಷ್ಟು ಕವಿತೆ ರೂಪದ ಸಾಲುಗಳು ಸಿಕ್ಕುತ್ತವೆ, ವರ್ಣನೆಯಲ್ಲಿ ರುಚಿ ತುಸು ಹೆಚ್ಚೇ ಇರುತ್ತದೆ. ಅದು ಕತೆಗೆ ತಕ್ಕಷ್ಟು ಇದ್ದರೆ ಅನುರೂಪವಾಗಿರುತ್ತದೆ, ಮತ್ತು ಓದುಗರಿಗೆ ಅದೊಂದು ಮುದನೀಡುವ ವಿಷಯವೂ ಹೌದು. ಆ ಮೂಲಕ ಓದುಗನಿಗೆ ಆ ಸನ್ನಿವೇಶದ ಪರಿಸರ ಇನ್ನೂ ಚೆನ್ನಾಗಿ ವಿದಿತವಾಗುತ್ತದೆ. ಈ ಕಾದಂಬರಿಯಲ್ಲಿ ಲೇಖಕರಿಗೆ ಕತೆ ಹೇಳುವುದು ಮುಖ್ಯವಾಗಿರುವುದರಿಂದ ಅಂತಹ ಅನಗತ್ಯ ವಿವರಣೆ ವರ್ಣನೆಗಳ ಗೋಜಿಗೆ ಹೋಗುವುದಿಲ್ಲ. ಅದರ ಇಲ್ಲದಿರುವಿಕೆಯೂ ಒಂದು ರೀತಿಯ ಸಮಾಧಾನ ಮಾತು ನಿರಾಳತೆ. ಅದು ಕತೆಯ ಓಟಕ್ಕೆ ಭಂಗ ಬರುವುದಿಲ್ಲ. ಓದುಗನೂ ಕತೆಯಲ್ಲಿ ತಲ್ಲೀನನಾಗುವುದರಿಂದ ಅಂತಹ ವಿವರಣೆಗಳೂ ಬೇಕೆನಿಸುವುದಿಲ್ಲ. ಆದರೆ ಲಂಬಾಣಿ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಕಷ್ಟು ವಿಚಾರಗಳನ್ನು, ಅವರ ಕೆಲ ಆಚರಣೆಗಳಲ್ಲಿ ಅವರು ಹಾಡುವ ಹಾಡುಗಳನ್ನು ಅವರದೇ ಭಾಷೆಯಲ್ಲೇ ದಾಖಲಿಸುತ್ತಾರೆ. ಇಂಥ ವಿವರಗಳು ಕತೆಗೆ ಪೂರಕವಾಗಿವೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ ಒಟ್ಟು ಕಥಾ ಹಂದರ ಇಷ್ಟು –  ತನ್ನೂರು ಕಲ್ಲೂರಿಗೆ ಸಮೀಪದ ಬೆಟ್ಟದಲ್ಲಿ ಬೀಡುಬಿಟ್ಟ ಹವನ ತಾಂಡಾಕ್ಕೆ ಬಸಪ್ಪ ಎಂಬುವವನು ಅಲ್ಲಿನ ಶಾಲೆಗೆ ಮಾಸ್ತರರಾಗಿ ಹೋಗುವುದರಿಂದ ಕತೆ ಶುರುವಾಗುತ್ತದೆ. ನಿರೀಕ್ಷೆಯಂತೆ ಮಾಸ್ತರರು ಆ ತಾಂಡಾದಲ್ಲಿ ತಾವು ಅನುಭವಿಸುವ ಕಷ್ಟಗಳು, ತಾಂಡಾದ ನಾಯಕ ಸೊಮಲ್ಯಾನ ಪ್ರೀತಿ, ಅಲ್ಲಿನ ಜನಗಳ ನೋವುಗಳನ್ನು ಅರ್ಥ ಮಾಡಿಕೊಂಡು ಆರ್ಥಿಕವಾಗಿ ಅವರನ್ನು ಮೇಲೆತ್ತಬೇಕೆಂದು ಕಲ್ಲೂರಿನ ಸಾವುಕಾರರ ವಿರೋಧ ಕಟ್ಟಿಕೊಂಡು ಬಸಪ್ಪ ಮಾಸ್ತರರು ಲಂಬಾಣಿಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಮಾಸ್ತರರು ಆದರ್ಶದ ವ್ಯಕ್ತಿ. ಹಾಗಾಗಿ ಅವರಲ್ಲಿ ಇಂತಹ ಕ್ರಾಂತಿಕಾರಿ ಮಾಸ್ತರರೊಬ್ಬರು ಸಿಕ್ಕಿದ್ದು ತಾಂಡಾದ ನಾಯಕ ಸೊಮಲ್ಯಾನಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಊರಹೊರಗೆ ಪಾಳುಬಿದ್ದ ಗೋಮಾಳ ಜಾಗವನ್ನು ತಾಂಡಾದ ಮಂದಿಗೆ ಕೊಡಿಸುವಲ್ಲಿ ಮಾಸ್ತರರು ಯಶಸ್ವಿಯಾಗುವ ಹೊತ್ತಿಗೇ ಕಲ್ಲೂರಿನ ಸಾವುಕಾರ ಕುಳಗಳ ಕುತಂತ್ರದಿಂದ ಇಡೀ ತಾಂಡಾವೇ ನಾಶವಾಗುತ್ತದೆ. ಸೊಮಲ್ಯಾ ನಾಯಕ ನುಜ್ಜುಗುಜ್ಜಾಗುತ್ತಾನೆ. ಅವನ ಹಿರಿಮಗ ಸ್ವಲ್ಪ ಸಾಲಿ ಕಲಿತು ವಿಜಾಪುರದಲ್ಲಿ ನೌಕರಿಗಿರುತ್ತಾನೆ, ಅವನೇ ‘ದಾಗದಾರಿಗೆ’ (ಡಾಕ್ಟರಿಗೆ) ತೋರಿಸುತ್ತಾನೆಂದು ಅವನ ಹತ್ತಿರ ಹೋಗುತ್ತಾನೆ. ಇತ್ತ ಸೊಮಲ್ಯಾ‌ನ ಕಿರಿ ಮಗ ಊರ ಸಾವುಕಾರ ಮಂದಿಯೊಳಗೆ ಮಸಲತ್ತು ಮಾಡಿ ರಾಜಕೀಯ ಪ್ರವೇಶ ಮಾಡುತ್ತಾನೆ. ಯಾವಾಗ ಅವನ ರಾಜಕೀಯ ಪ್ರವೇಶವಾಗುತ್ತೋ ಆಗ ತಮ್ಮ ಮಂದಿಯನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ಅವರಿಗೆ ಇಲ್ಲದ ಆಸೆ ತೋರಿಸಿ, ಹವನ ತಾಂಡಾದ ಇಡೀ ಬೆಟ್ಟವನ್ನು ಗಣಿಗಾರಿಕೆ ಮಾಡಲು ಅನುವು ಮಾಡಿಕೊಟ್ಟು ತಾನು ಮಾತ್ರ ಶ್ರೀಮಂತನಂತೆ ಮೆರೆಯುತ್ತಾನೆ. ಸೇವಾಲಾಲನ ಪರಮಭಾಕ್ತನಾದ ಸೊಮಲ್ಯಾ ಅತ್ತ ಹಿರಿಸೊಸೆ, ಮಗನ ಕಾಟ ತಾಳದೆ ತಾಂಡಾಕ್ಕೆ ಬಂದರೆ ಅದರ ಸ್ವರೂಪವೇ ಸಂಪೂರ್ಣ ಬದಲಾಗಿ ಬಿಟ್ಟಿರುತ್ತದೆ. ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಈಗ ಗಣಿಗಾರಿಕೆಯಿಂದ ಪಾತಾಳ ಮುಟ್ಟಿರುತ್ತದೆ, ಅದರ ಧೂಳಿನಲ್ಲಿ ಒಬ್ಬರಿಗೊಬ್ಬರು ಕಾಣದಿರುವಷ್ಟು ಹಾಳಾಗಿರುತ್ತದೆ. ಅಷ್ಟೇ ಹಾಳಾದ ಅವನ ಕಿರಿಮಗನ ದರ್ಪ ಅಹಮ್ಮಿಕೆಯನ್ನು ತಾಳದೆ ಸೊಮಲ್ಯಾ ಎಂಬ ನಾಯಕ ತುಂಬ ದುಃಖಭರಿತನಾಗಿ ಸಾವನ್ನಪ್ಪುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಡಿ. ಆರ್. ನಾಗರಾಜ್ ಅವರು ತಮ್ಮ ದಲಿತ ಕಥನಗಳ ಹೋರಾಟದ ಪುಸ್ತಕ ‘ಉರಿ ಚಮ್ಮಾಳಿಗೆ’ಯಲ್ಲಿ ಸಾಂಸ್ಕೃತಿಕ ಸ್ಮೃತಿ ನಾಶ ಎಂದು ಹೇಳಿರುವುದನ್ನು ಈ ಕತೆಯ ಹಿನ್ನೆಲೆಯಲ್ಲಿ ನೋಡಬಹುದು. ಸಾಂಸ್ಕೃತಿಕ ಸ್ಮೃತಿಗಳು ಆಧುನಿಕತೆಯ ಲೋಲುಪತೆಯಲ್ಲಿ, ವಿಚಿತ್ರ ಆಶೆಗಳ ಮಂಪರಿನಲ್ಲಿ ಮುಳುಗಿರುವ ವಿಕೃತ ಮನಸಿನವರಿಗೆ ಅದೊಂದು ಸಂಗತಿಯೇ ಅಲ್ಲ. ಇಂದಿಗೂ ನಾವು ಸಾಂಸ್ಕೃತಿಕವಾಗಿ ದರಿದ್ರರಾಗಲು ಇಂತಹ ಎಷ್ಟೋ ವಿಕೃತಿಗಳ ಕೈವಾಡವಿದೆ. ಸಹಜವಾಗಿಯೇ ಹಿರೇಮಠ ಅವರಂತಹ ಸೂಕ್ಷ್ಮ ಮನಸಿನ ಲೇಖಕರಿಗೆ ಇಂತಹ ಕಾಳಜಿಗಳು ಬಹುಮುಖ್ಯವೆನಿಸುತ್ತವೆ.

ಸೇವಾಮನೋಭಾವದ ಲಂಬಾಣಿ ಜನಾಂಗದ ಜೀವಪರ ಕಾಳಜಿಯನ್ನು ಲೇಖಕರು ಪರಿಣಾಮಕಾರಿಯಾಗಿ ಹೇಳುತ್ತಾರೆ. ಅದಕ್ಕೆ ಉದಾಹರಣೆಯಾಗಿ ಕಾದಂಬರಿಯ ಈ ಘಟನೆಯನ್ನು ಓದಿ – ಒಳಗ ಕೂಸು ಅಳಾಕ ಹತ್ತಿತ್ತು. “ತಡಿ ಎಪ್ಪಾ ಬರ್ತೀನಿ” ಅನ್ನುತ್ತ ಒಳಹೋಗಿ ಕೂಸನ್ನ ಎತ್ತಿಕೊಂಡು ಬಂದು ತೊಡಿ ಮ್ಯಾಲ ಹಾಕೊಂಡು ಅಳ್ಳಾಡಿಸ್ತಾ ಇದ್ರೂ ಸುಮ್ಮನಾಗಲಿಲ್ಲ. ಸುಮ್ಮನಾದ ಮ್ಯಾಲ “ಖೋಡಿ ಪಾರ ನನ್ನ ಮಲ್ಯಾಗ ಹಾಲಿಲ್ಲದಿದ್ರೂ ಚಟಕ್ಕ ಚೀಪತೈತಿ ” ಅಂದಳು. “ಇದು ನಿಂದ ಮಗು?” ..ಅಂದೆ. “ಅಯ್ಯೋ!.. ಅಲ್ಲೋ..ಎಪ್ಪಾ..ಒಂದು ತಿಂಗಳ ಹಿಂದ ನನಗ ಜೋಡಾಗೇತಿ. ಇದರ ಯಾಡಿಗೆ ಗಾಳಿ ಸೆಖಾ ಆಗಿ ಪೇಚಾಡಿ ಸತ್ತು ಹ್ವಾದಾಳು. …ಆಕಿಯ ಗಂಡ ಮೊದಲ ಹ್ವಾಗಿದ್ದ. ಯಾನ್ಮಾಡೋದು? ಇಲ್ಲದವರ ಮಕ್ಕಳು ಇದ್ದವರ ಉಡಿಯಾಗ ಅಂದಂಗ ಜ್ವಾಪಾನ ಮಾಡೀನಿ… ಈ ಭೂಮಿ ಮ್ಯಾಲ ಒಂದ ಜೀವ ಹುಟ್ಟಿ ಬಂದೇತಿ ಅಂದ್ಮೇಲೆ ಅದನ್ನ ಉಳಿಸೋದು ಮನಸ್ಯಾನ ಧರ್ಮ ಅಲ್ರೀ ಮಾಸ್ತರ? ಆಡಿನ ಹಾಲು ತಂದ ಹಾಕ್ತೀನಿ…ಇರಲಿ, ಮುಂದ ನಮ್ಮ ಕೂಡ ಇದ್ರ ನಾವು ಉಂಡರ ಉಣತೈತಿ, ಇರದಿದ್ರ ಉಪಾಸ ಬೀಳತೈತಿ” ಅಂದಳು.

ತಾಂಡಾದಲ್ಲಿ ಸಾರಾಯಿ ಮಾರುವ ಬಜಾರಿ ಹೆಂಗಸು ಡುಗ್ಲಿಬಾಯಿಯ ಮಾತುಗಳಿವು. ಈ ಸನ್ನಿವೇಶ ನೆನೆಸಿಕೊಂಡರೆ ಯಾರಿಗಾದರೂ ಹೃದಯ ಆರ್ದ್ರವಾಗದೇ ಇರದು. ಅಂತೆಯೆ ಹಿಂದೆ ಒಮ್ಮೆ ದು.ನಿಂ. ಬೆಳಗಲಿಯವರ ಒಂದು ಸಣ್ಣ ಕತೆ ‘ಹಸುಳೆ ಮತ್ತು ಸೂಳೆ’ ಓದಿದ್ದೆ. ಅದು ಈ ಸನ್ನಿವೇಶದಲ್ಲಿ ನೆನಾಪಾಯಿತು. ಆ ಕತೆಯಲ್ಲಿ – ಬಸ್ಸಿನಲ್ಲಿ ಅಪ್ಪನೊಂದಿಗೆ ಬಂದಿರುವ ಒಂದು ಹಸುಳೆ ತುಂಬಾ ಅಳುತ್ತಿರುತ್ತದೆ. ಆ ಬಸ್ಸಿನಲ್ಲಿರುವ ಯಾವ ಸಜ್ಜನ ಹೆಣ್ಣುಮಕ್ಕಳೂ ಆ ಮಗುವನ್ನು ಎತ್ತಿಕೊಳ್ಳಲು ಮುಂದೆ ಬರದೇ ಇದ್ದಾಗ ಸೂಳೆ ಎನಿಸಿಕೊಂಡವಳೊಬ್ಬಳು ಆ ಮಗುವನ್ನು ಎತ್ತಿ ಮುದ್ದಾಡಿ ಆಟ ಆಡಿಸಿ ಮಗುವಿನ ಅಳುವನ್ನು ನಿಲ್ಲಿಸುತ್ತಾಳೆ. ಮಾನವೀಯತೆಗೆ ಒಣ ದೌಲತ್ತು, ಸಜ್ಜನಿಕೆಗಳು ಬೇಕಿಲ್ಲ. ಬೇಕಿರುವುದು‌ ಸಹೃದಯತೆ ಮಾತ್ರ. 

ಉತ್ತರ ಕರ್ನಾಟಕದ ಭಾಷಾ ಲಯದಲ್ಲೇ ಸಾಗುವ ಕತೆಯಲ್ಲಿ ಆ ಭಾಷೆಯೊಂದಿಗೆ ಅನಾಯಾಸ ಒದಗುವ ಕೆಲ ನುಡಿಗಟ್ಟುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಒಂದು ಸನ್ನಿವೇಶದಲ್ಲಿ , ತಾಂಡಾದ ಕೆಲ ಜನ ಮಂತ್ರಿಗಳನ್ನು ಭೇಟಿಯಾಗಲು ಹೋಗಿರುತ್ತಾರೆ. ಅವರ ದರ್ಶನ ಭಾಗ್ಯ ಸಿಗದೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಯುತ್ತಲೇ ಇರುತ್ತಾರೆ. ಆಮೇಲೆ ಹಿರಾಲಾಲನೆಂಬುವವ ಇನ್ನೂ ಯಾಕೆ ಭೇಟಿಯಾಗಿಲ್ಲ, ಎನ್ಮಾಡಿದ್ರಿ ಇಷ್ಟೊತ್ತು ಎಂದು ಕೇಳುತ್ತಾನೆ. ಆಗ ಸೊಮಲ್ಯಾ ‘ಏನ್ಮಾಡೋದು, ಮಾರಿ ಒಣಗಿಸಿಕೊಂಡು ಕುಂತಿವಿ ನೋಡ್ರಿ’ ಎಂದು ದೈನ್ಯನಾಗಿ ಹೇಳುತ್ತಾನೆ. 

ಇನ್ನೊಂದು ಸನ್ನಿವೇಶದಲ್ಲಿ – “ಗೋಮಾಳದ ಪಟ್ಟಾ ನಿಮ್ಹೆಸರಿಲೆ ಆಗೇತೇನು?” ಅಂತ ಪೋಲಿಸ್ ಅಧಿಕಾರಿ ನಮಗ ಈ ಹಿಂದ ಕೇಳಿದ್ದ ಮಾತು ನನಗ ಒಳಗೊಳಗ ಕೊರೆಯತೊಡಗಿತು. ನಮ್ಮ ಹೆಸರಿಲೆ ಪಟ್ಟಾ ಆದರ ಚಿಂತಿ ತಪ್ಪತೈತಿ ಅಂತ ನಿರ್ಧಾರಕ್ಕೆ ಬಂದೆ. “ಈಗ ನಾವು ಬೆಳಿ ತೊಗೊತಿದ್ದೀವಿ ಅಂತ ಸುಮ್ಮನ ಇರಬಾರದು. ಊರ ಮಂದಿಯ ಸ್ವಭಾವನೂ ಯಾವಾಗಲೂ ಒಂದ ತರ ಇರಾಕಿಲ್ಲ. ಕುದಿಯೂದರಾಗ ಇಪ್ಪತ್ತ ಸಲ ಹಳಸೋ ಮಂದಿ” ಎಂದು ಯೋಚಿಸುತ್ತಾನೆ. 

ಇಂತಹ ಕೆಲ ಅಪರೂಪದ ಸಾಲುಗಳನ್ನು ಲೇಖಕರು ಅಲ್ಲಲ್ಲಿ ಸಮರ್ಥವಾಗಿ ಬಳಸಿದ್ದಾರೆ. ಕತೆಯ ನೇಟಿವಿಟಿಯ ದೃಷ್ಟಿಯಿಂದ ಉತ್ತರ ಕರ್ನಾಟಕದ ಭಾಷೆಯನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ಬಳಸಿದ್ದಾರೆ. ಕೆಲವು ಕಡೆ ಉತ್ತರ ಕರ್ನಾಟಕದ ಭಾಷೆಯ ಜೊತೆಜೊತೆಗೇ ಗ್ರಾಂಥಿಕ ಭಾಷೆ ಅಥವ ನಾವು ಸಾಮಾನ್ಯವಾಗಿ ಹೇಳುವಂತೆ ಬೆಂಗಳೂರು ಕನ್ನಡದ ಪದಗಳು ಸೇರಿಕೊಂಡಿವೆ. ಇದು ಲೇಖಕರ ಅರಿವಿಗೆ ಬಾರದೇ ಸಹಜವಾಗಿ ಬಂದಂಥ ಭಾಷೆ ಇರಬಹುದು. ಹಾಗಾಗಿ ಅದನ್ನು ತಕರಾರು ಎಂದು ಹೇಳಲಾರೆ.

ಹವನ ಎಂದರೆ ಬರಿಯ ಬೆಂಕಿಯಲ್ಲ. ಅದೊಂದು ಯಜ್ಞ. ಇಲ್ಲಿ ಅದೊಂದು ತಾಂಡಾದ ಹೆಸರು ಮತ್ತು ಆ ತಾಂಡಾ ಆಳದಲ್ಲಿ ತನ್ನ ಭವಿಷ್ಯವನ್ನು ಮೊದಲೇ ಊಹಿಸಿದಂತೆ ಅಲ್ಲಿನ ವಿಕೃತ ಮನಗಳಲ್ಲಿ ಹೊತ್ತಿಕೊಂಡ ಜ್ವಾಲೆ. ಈ ಹವನಕ್ಕೆ ಅಲ್ಲಿನ ಜನರ ಸಂಸ್ಕೃತಿ, ಜೀವನ, ಕೊನೆಗೆ ಸೊಮಲ್ಯಾ ಎಂಬ ನಾಯಕನೂ ಅರ್ಪಿತವಾಗುತ್ತಾನೆ. ಲಂಬಾಣಿಗಳ ಅಂತಃಸತ್ವವನ್ನು ತನ್ನ ಕಾವಿನೊಳಗೆ ಎಳೆದುಕೊಳ್ಳುವ ಈ ಹವನ ಅವರ ದುರಾಶೆಗಳ ಹವಿಸ್ಸನ್ನು ಅರ್ಪಿಸಿಕೊಂಡು ತಮ್ಮವರನ್ನೇ ನಾಶಮಾಡುತ್ತದೆ. ಹಾಗಾಗಿ ಇದು ವಿಕೃತರ ಹವನ. ಅದನ್ನೇ ಒಡೆದು ಬರೆಯುವುದಾದರೆ, ವನ ಎಂದರೆ ಕಾಡು, ಹಸಿರು; ಹ ಎಂದರೆ ಆಹುತಿ ಎಂದುಕೊಂಡರೆ ಹವನದ ಅರ್ಥ ಈ ಕಾದಂಬರಿಗೆ ಪೂರಕವಾಗುತ್ತದೆ. 

ಒಟ್ಟಿನಲ್ಲಿ ಇದೊಂದು ಸ್ಪಷ್ಟ ನಿಲುವಿನ, ಸ್ಪಷ್ಟ ನಿರೂಪಣೆಯ, ಅಷ್ಟೇ ಸ್ಪಷ್ಟ ಕಾಳಜಿಯ ಕಾದಂಬರಿ. ಇದನ್ನು ಓದುವಾಗ ಸಾಕಷ್ಟು ವಿಚಾರಗಳ ದಂಡೇ ನನ್ನ ತಲೆಯೊಳಗೆ ಹೊಕ್ಕಿತ್ತು. ಅದನ್ನೆಲ್ಲ ಹೇಳುತ್ತಾ ಹೋದರೆ ಕಾದಂಬರಿಯ ಸ್ವಾರಸ್ಯವೇ ಹಾಳಾದೀತು. ಮೇಲಾಗಿ ಓದುವ ಸುಖ ಕೊಡುವ ಅನುಭವವನ್ನು ಅಕ್ಷರಗಳಲ್ಲಿ ಹಿಡಿಯುತ್ತಾ  ಹೋದಷ್ಟೂ ಸ್ವಾರಸ್ಯ ರೋಮಾಂಚನ ಎಂಬ ಪದಗಳ ಅರ್ಥವೇ ಹೊರಟುಹೋಗುತ್ತದೆ. ಹಾಗಾಗಿ ನನ್ನ ಸದ್ಯದ ತಿಳಿವಳಿಕೆಗೆ ನಿಲುಕಿದ ಅನುಭವಗಳನ್ನು ಮಾತ್ರ ಇಲ್ಲಿ ಹಂಚಿಕೊಂಡಿದ್ದೇನೆ. ಇಂತಹ ಸೊಗಸಾದ ಕಾದಂಬರಿಯನ್ನು ಕೊಟ್ಟಂತಹ ಹಿರೇಮಠ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಅವರು ಇನ್ನೂ ಇಂತಹ ಕಾದಂಬರಿಗಳನ್ನು ನಮಗಾಗಿ ಬರೆಯಲಿ ಎಂದು ಆಶಿಸುತ್ತೇನೆ. 

ಸಾಧ್ಯವಾದರೆ ಹವನ ಕಾದಂಬರಿಯನ್ನು ನೀವೂ ಒಮ್ಮೆ ಓದಿ.

ಧನ್ಯವಾದಗಳು.


ಆನಂದ ಕುಂಚನೂರ, ಬನಹಟ್ಟಿ

RELATED ARTICLES

Most Popular

error: Content is protected !!
Join WhatsApp Group