ಪುಸ್ತಕ ಪರಿಚಯ ;  ‘ಹೊಂಗಿರಣ’ ಕವನ ಸಂಕಲನಸಂಕಲನ

Must Read
ದಿ.14-12-2025 ರಂದು  ವಿಜಯಪುರದಲ್ಲಿ ಪುಸ್ತಕ ಬಿಡುಗಡೆ 
ಪ್ರಗತಿಪರ ಚಿಂತಕರು, ಶ್ರೇಷ್ಠ ಸಂಘಟಕರು,ಉತ್ತಮ ವಾಗ್ಮಿ, ಸೃಜನಶೀಲ ಸಕ್ರಿಯ ಪ್ರಬುದ್ಧ ಸಾಹಿತಿ, ಜೀವನಪರ್ಯಂತರವಾಗಿ ಸರ್ವ ವಿಧದ ಕಷ್ಟ-ನಷ್ಟಗಳನ್ನುಂಡು ನಂಜುಂಡೆಯಂತಾಗಿದ್ದರೂ ಕೂಡಾ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ Sweetheart, ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷ ಸುದೀರ್ಘ ಕಾಲ ಸೇವೆಸಲ್ಲಿಸಿ ಸ್ವಯಂ ನಿವ್ರತ್ತಿ ಪಡೆದು  ಈಗ ಬಸವ ತತ್ವದ ಪ್ರಸಾರ ಕಾರ್ಯದಲ್ಲಿ ಚಲನಾತ್ಮಕ ಕ್ರಿಯಾಶೀಲರಾಗಿ ಡಾ.ಶಶಿಕಾಂತ ಪಟ್ಟಣ ಅವರ ಸಂಘಟನೆಯ ‘ಅಕ್ಕನ ಅರಿವಿನ’ ವೇದಿಕೆಯಲ್ಲಿ ಆಜೀವ ಸದಸ್ಯರಾಗಿರುವರು.
2023-24, ನೆಯ ಸಾಲಿನ ಡಾ.ಎಂ.ಎಂ.ಕಲ್ಬುರ್ಗಿ ಅವರ ವಚನಸಿರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರು,ಬಹುಮುಖ ಪ್ರತಿಭಾನ್ವಿತರಾಗಿರುವ ಶ್ರೀಮತಿ ಗೌರಮ್ಮ ನಾಶಿ ಅವರು  ಮೂಲತಃ ಬಾಗಲಕೋಟೆಯವರು.
ಮಾನವತಾವಾದದ ಶರಣ ತತ್ವಗಳ ಪ್ರಖರ ವಿಷಯ ಕುರಿತು ಆಳವಾದ ಪ್ರಭಾವವನ್ನೊಳಗೊಂಡಿರುವ ಗೌರಮ್ಮಕ್ಕನವರ ಪ್ರಪ್ರಥಮ ಕವನ ಸಂಕಲನ ‘ಹೊಂಗಿರಣ’ ವು ಸೂರ್ಯನ ಪ್ರಕಾಶಮಾನವಾದ ರಂಗುರಂಗಿನ ರಶ್ಮಿಕಿರಣದಂತಹ ಒಂದಕ್ಕಿಂತ ಒಂದು ಮಿಗಿಲಾದ ವಸ್ತುವಿಷಯಗಳುಳ್ಳ ಕೃತಿರತ್ನವಿದಾಗಿರುತ್ತದೆ.ತಮ್ಮ ಹೃದಯಾಂತರಾಳದಲ್ಲಿ ಹುದುಗಿರುವ ಭಾವಗಳ ತೀವ್ರತೆಯನ್ನು  ಶಬ್ದ ಚಿತ್ರಗಳ ಮೂಲಕ ಕಣ್ಮುಂದೆ ಕಟ್ಟುವಂತೆ ಅತ್ಯಂತ ಯಶಸ್ವಿಯಾಗಿ ಚಿತ್ರಿಸಿರುವರೆಂಬುದಕ್ಕೆ ಈ ಕವನ ಸಂಕಲನದ  ನೂರೊಂದು ಕಾವ್ಯಗಳು  ಕವಯಿತ್ರಿಯ ವಿಭಿನ್ನ ಅಭಿರುಚಿಗೆ ಸಾಕ್ಷಿಯಂತಿವೆ.
ತಮ್ಮ ಸಖ್ಯ- ಸ್ನೇಹಸಂಗಾತಿಯರ ಪಿರುತಿ, ಬಾಲ್ಯಾವಸ್ಥೆಯ ಸಖಿಯರ ವಾತ್ಸಲ್ಯಪೂರಿತವಾದ ಒಡನಾಟ ಬಾಂಧವ್ಯದ ವೈಭವವನ್ನು ಅತ್ಯಂತ ಮಧುರವಾಗಿ ‘ಸ್ನೇಹ ತೋರಣ’ ಎಂಬ ಕಾವ್ಯದಲ್ಲಿ ತುಂಬಾ ನವಿರಾಗಿ ಕವಯಿತ್ರಿ ಬಣ್ಣಿಸಿರುವರು
ವಸುಂಧರೆಯ ಒಡಲಲ್ಲಿ
ಭೂರಮೆಯ ಮಡಿಲಲ್ಲಿ
ನೋಡು ಬಾ ಗೆಳತಿ
ಹಸಿರು ತೋರಣದ
ಸಡಗರವನಿಲ್ಲಿ
ಎಲ್ಲಿಂದಲೊ ನೀ ಬಂದೆ
ಇರುಳಲ್ಲಿ ಬೆಳಕಾಗಿ ಗೆಳತಿ
ಮರೆಯದೆ ಉಳಿದಿರುವೆ
ಎನ್ನಂತರಾಳದಲ್ಲಿ
ನೀನಾಡಿದಾ ಒಂದೊಂದು ನುಡಿ
ಸಾಲುಸಾಲಾಗಿ ನಿಂತಿಹವು ಗೆಳತಿ
ನೀನಿತ್ತ ಪ್ರೀತಿಯಾ ಋಣಕೆ
ಎನ್ನೆದೆಯು ಬಾಗಿ ನಮಿಸುತಿಹುದು.ಭಕ್ತಿಭಂಡಾರಿ, ಸಾಂಸ್ಕೃತಿಕ ನಾಯಕ, ವಿಶ್ವಗುರು, ಮಹಾಮಾನವತಾವಾದಿ,ಮಾನವೀಯ ಸಾಕಾರ ಸ್ವರೂಪರಾದ ಬಸವಣ್ಣನವರನ್ನು ಮತ್ತೆ ಮರ್ತ್ಯಕ್ಕೆ ಕರೆಯುವ ಗೌರಮ್ಮನವರ ‘ಮತ್ತೆ ಬರುವೆ’ ಕವನದ  ಪ್ರಾರ್ಥನೆಯ ಪರಿ ಮನದುಂಬುವಂತಿದೆ

ಬಾರಯ್ಯ ಬಸವಯ್ಯಾ
ಕೂಗುತಿದೆ ಕಲ್ಯಾಣ
ಕಾದಿಹವು ಕಣಕಣವು
ನೀ “ಮತ್ತೆ ಬರುವೆ”ಯೆಂದು!
ಶರಣ ಸಂಕುಲವೆಲ್ಲ
ಎತ್ತಹೋಯಿತು ಯೆಂದು
ದಿಗಿಲೊಡೆದು ನಿಂತಿಹವು
ತರುಲತೆಗಳೆಲ್ಲ.

ತಮ್ಮ ಹೆತ್ತವ್ವನ ನಿಸ್ತೇಜ ಸ್ಥಿತಿಯನ್ನು ಸ್ವತಃ ಕಣ್ಣಾರೆ ಕಂಡುಂಡು ಅನುಭವಿಸಿ ಮರಮರ ಮರುಗಿರುವ ಕವಯಿತ್ರಿ ‘ಅವ್ವ’ ಕಾವ್ಯದಲ್ಲಿ ತಮ್ಮ ತಾಯಿಯ ಸ್ಥಿತಿ-ಗತಿಯನ್ನು ತುಂಬಾ ಪರಿಣಾಮಕಾರಿಯಾಗಿಯೂ,ಅತ್ಯಂತ ಮನೋಜ್ಞವಾಗಿಯೂ ಸ್ರಜಿಸಿರುವರು.

ಅವ್ವಾ,ಅಂದು ಆಸ್ಪತ್ರೆಯಲ್ಲಿ ನಿಸ್ತೇಜವಾಗಿ
ಮಲಗಿದ ನಿನ್ನ ಕಣ್ಣಂಚಿನಲ್ಲಿ
ಹರಿವ ಕಣ್ಣೀರು ಏನನ್ನೋ
ಹೇಳಲು ತವಕಿಸುತ್ತಿತ್ತು ಆದರೆ,
ನಿನ್ನ ಧ್ವನಿ ನಿನಗಿಂತ ಮುಂದೆ
ಹೊರಟು ಹೋಗಿತ್ತು
ನಿನ್ನ ನೋವಿಗೆ ನಾವ್ಯಾರೂ ಸ್ಪಂದಿಸಲಿಲ್ಲ!
ಅಲ್ಲವೇ? ಕಣ್ಣಂಚಿನ ಕಂಬನಿಯೇ ನಿನ್ನ
ಕೊನೆಯ ಮಾತಾಯಿತು!
ಅವ್ವಾ,ನಮಗೆಲ್ಲ ಹೊಟ್ಟೆತುಂಬಾ ಊಟ
ಮೈತುಂಬ ಬಟ್ಟೆ ಸುಂದರ ಮನೆ
ಸಂಗಾತಿ ಸಿಕ್ಕಮೇಲೆ
ನಿನ್ನ ಅಗತ್ಯ ಇನ್ನಿಲ್ಲವೆಂದು
ಅಡ್ಡಗೆರೆ ಎಳೆದು ಬಿಟ್ಟೆವೇನೋ!
ಅವ್ವಾ, ಹತ್ತೊಂದು ಮಕ್ಕಳ ಹೊತ್ತು ಹೆತ್ತು….
ಹೀಗೆ ವಿವಿಧ ವಸ್ತುವಿಷಯಗಳಲ್ಲಿ ಸದಾಶಯಗಳನ್ನುಳ್ಳ ರಮಣೀಯ ಕಾವ್ಯ ಲಹರಿಗಳನ್ನು  ತರಂಗಿಣಿಯಂತೆ ಹರಿಸಿ ಈ ಕವನಸಂಕಲನ ಪ್ರಕಟಿಸಿ ಲೋಕಾರ್ಪಣೆಗೊಳಿಸಲು ಚೈತನ್ಯದ ಚಿಲುಮೆಯಾಗಿರುವ ಡಾ.ಗೌರಮ್ಮನವರ ಸಾಹಿತ್ಯಾಭಿರುಚಿ ದಣಿವರಿಯದ ಅವರ ಉತ್ಸಾಹ, ಸ್ಪೂರ್ತಿಯ ಸೆಲೆಯಂತಿದೆ ಎಂಬುದು ಮುನ್ನುಡಿ ಬರಹಗಾರರಾದ ಡಾ.ಶಶಿಕಾಂತ ಪಟ್ಟಣ ಅವರ ಅಮೂಲ್ಯ ನುಡಿಗಡಣವು ಯಥೋಚಿತವಾಗಿರುತ್ತದೆ.ಜಾನಪದ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ ಅವರ ಬೆನ್ನುಡಿ ಈ ಕವನ ಸಂಕಲನ ನುಡಿತೋರಣಕ್ಕೆ ಕಳಶಪ್ರಾಯದಂತಿದೆ.

    ಚಿಕ್ಕಂದಿನಿಂದಲೂ ನನ್ನೊಳು ಬಸವ ತತ್ವದ ಬೀಜಬಿತ್ತಿ ಕಾಯಕ ದಾಸೋಹದ ಪರಿಕಲ್ಪನೆಯೊಂದಿಗೆ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿ ಸಾರ್ಥಕ ಬದುಕು ಕಲಿಸಿದ ತಮ್ಮ ಗುರುವರ್ಯರಾದ  ಲಿಂ.ಎಚ್.ಜಿ.ಮೃತ್ಯುಂಜಯ ಪರಮಪೂಜ್ಯರ ಅಡಿದಾವರೆಯಲ್ಲಿ ಭಕ್ತಿಪೂರ್ವಕವಾಗಿ ಈ ಕವನ ಕುಸುಮ ಸಮರ್ಪಿಸಿ ಕವಯಿತ್ರಿ ಕೃತಾರ್ಥರಾಗಿರುವರು. ಬೆಂಗಳೂರಿನ ಸಾಯಿಬುಕ್ಸ್, ರಂಗನಾಥಪುರ ಪ್ರಕಾಶಕರು ಈ ಗ್ರಂಥ ಪ್ರಕಟಿಸಿ ಪ್ರೋತ್ಸಾಹಿಸಿರುವದು ಔಚಿತ್ಯಪೂರ್ಣವಾಗಿದೆ.
“ಹೊಂಗಿರಣ” ಎಂಬ ಈ ಕೃತಿಯ ಶಿರೋನಾಮೆಗೆ ತಕ್ಕಂತೆ ಪ್ರತಿಯೊಂದು ಕವನಗಳು  ಸೃಜಿ ಸಲ್ಪಟ್ಟಿದ್ದು ತಲೆಬರಹಕ್ಕೆ ತಕ್ಕ ಹಾಗೆ ಅರ್ಥಪೂರ್ಣ ಕವನಗಳನ್ನೊಳಗೊಂಡಿರುವ ಗೌರಮ್ಮನವರ ಸದಾಶಯವುಳ್ಳ ಸರ್ವರೂಪದ ಪ್ರತಿಯೊಂದು ಕವನದ ಸಂದೇಶಗಳು ಮನುಕುಲಕ್ಕೆ ದಾರಿದೀಪದಂತಿವೆ ಎಂಬುದು ಉತ್ಪ್ರೇಕ್ಷೆಯೇನಲ್ಲ.

ಪ್ರೊ.ಶಕುಂತಲಾ ಚನ್ನಪ್ಪ ಸಿಂಧೂರ.
ಕವಯಿತ್ರಿ,ಸಾಹಿತ್ಯ ಚಿಂತಕರು.
ಗದಗ. 

LEAVE A REPLY

Please enter your comment!
Please enter your name here

Latest News

ಲೇಖನ : ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ

ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು,...

More Articles Like This

error: Content is protected !!
Join WhatsApp Group