ನಿಪ್ಪಾಣಿ: ನಿಪ್ಪಾಣಿ ನಗರದ ಐತಿಹಾಸಿಕ ಜವಾಹರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ಚಾಲನೆ ನೀಡಿದರು.
ನಿಪ್ಪಾಣಿ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಮನವಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇದನ್ನು ಸಮಾಜ ಸೇವೆ ಎಂದು ಭಾವಿಸಿ ಉಚಿತವಾಗಿ ಹೂಳೆತ್ತುವ ಕಾರ್ಯವನ್ನು ಮಾಡಿಕೊಡುತ್ತಿದ್ದು, ಇದಕ್ಕೆ ಸಹಕಾರ ನೀಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಾರ್ಯವನ್ನು ಮಾಡಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಾದ ಎಸ್.ಎನ್.ಅವತಾಡೆ ಅವರಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ನಿಪ್ಪಾಣಿಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು 1945 ರಲ್ಲಿ ರೂ. 6 ಲಕ್ಷ ರೂ. ವೆಚ್ಚದ ಯೋಜನೆಯಾಗಿತ್ತು. ಮಾಜಿ ಗೃಹ ಸಚಿವರಾದ ಮೊರಾರ್ಜಿ ದೇಸಾಯಿ ಅವರು 1951 ರಲ್ಲಿ ಶಂಕುಸ್ಥಾಪನಾ ನೆರವೇರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಕೆರೆ 140 ಅಡಿ ಎತ್ತರವಿದ್ದು, ಇದರಲ್ಲಿ 18 ಅಡಿ ಹೂಳು ತುಂಬಿಕೊಂಡಿದೆ. ಹೀಗಾಗಿ ಹೂಳು ತೆಗೆಯುವ ಮೂಲಕ ನೀರಿನ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಚಾಲನೆ ನೀಡಲಾಗಿದೆ. ಹೂಳೆತ್ತಿದ ಬಳಿಕ ರೈತರು ಇಲ್ಲಿನ ಮಣ್ಣನ್ನು ತಮ್ಮ ಜಮೀನುಗಳಿಗೆ ಒಯ್ಯಬಹುದು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.