ಮೂಡಲಗಿ: ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ. ನಿಮ್ಮ ತಂದೆ ತಾಯಿಗಳಿಗೆ ಹಾಗೂ ಸಮಾಜಕ್ಕೆ ಸದ್ದಿಲ್ಲದೆ ಸಾಧನೆಯನ್ನು ಮಾಡಿ ತೋರಿಸುವಂತಹ ಶಕ್ತಿ ನಿಮಲ್ಲಿ ಇದೆ ಹಾಗೂ ಅದಕ್ಕೆ ಸತತ ಪ್ರಯತ್ನದ ಅವಶ್ಯಕತೆ ಬೇಕು ಎಂದು ಧಾರವಾಡ ಕ್ಲಾಸಿಕ್ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಶನಿವಾರದಂದು ತಾಲೂಕಿನ ಅರಭಾಂವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅನುದಾನದ ಅಡಿಯಲ್ಲಿ ಕ್ರ್ಯಾಕಿಂಗ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಡೀನ್ ಡಾ|| ಎಮ್. ಜಿ. ಕೆರುಟಗಿ ಮಾತನಾಡಿ, ಐದು ದಿನ ಶಿಬಿರದ ಕುರಿತು ಮಾತನಾಡಿ ದೇಶದ ಭವಿಷ್ಯ ರೂಪಿಸುವಲ್ಲಿ ಯುವಪಿಳಿಗೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದ ಅವರು ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕೆಂದರು.
ಸಂಪನ್ಮೂಲ ವ್ಯಕ್ತಿ ಉಮೇಶ ಅವರು ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾಗಿರುವ ಅವಶ್ಯಕತೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ವಿಲಾಸ ಗಸ್ತಿ, ರೇಣುಕಾ ಹಿರೇಕುರುಬರ, ಮಂಜುಳಾ ಕರಡಿಗುದ್ದಿ ಮತ್ತು ಮಹಾವಿದ್ಯಾಲಯದ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಅಮೃತಾ ತಾಳಿಕೋಟಿ ಪ್ರಾರ್ಥಿಸಿದರು, ಡಾ. ಪಲ್ಲವಿ ಜಿ ನಿರೂಪಿಸಿದರು, ತರಬೇತಿಯ ಸಂಯೋಜಕಿ ಡಾ.ಬಿ.ಸಿ. ಪಾಟೀಲ್ ಸ್ವಾಗತಿಸಿದರು, ಡಾ. ಪುಷ್ಪಾ ಟಿ.ಎನ್ ವಂದಿಸಿದರು.